ತಾಳಿ ಕಟ್ಟುವ ವೇಳೆ ಬ್ರೆಝಾ ಕಾರು, 20 ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆ; ಮದುವೆಯನ್ನೇ ರದ್ದುಗೊಳಿಸಿ ಮಾದರಿಯಾದ ವಧು
Bride Calls Off Wedding: ಮದುವೆಗೆ ಎಲ್ಲ ತಯಾರಿಯೂ ನಡೆದಿತ್ತು. ವರ ಮೆರವಣಿಗೆಯ ಮೂಲಕ ಆಗಮಿಸಿದ್ದ. ಇನ್ನೇನು ಮಂಟಪದಲ್ಲಿ ಕುಳಿತು ಪರಸ್ಪರ ಹಾರ ಬದಲಾಯಿಸಿ, ತಾಳಿ ಕಟ್ಟಬೇಕು ಅನ್ನೋವಷ್ಟರಲ್ಲಿ ಮದುವೆ ಮುರಿದುಬಿದ್ದಿದೆ. ಕಾರಣ ವರನ ಕಡೆಯವರು ಬರೋಬ್ಬರಿ 20 ಲಕ್ಷ ರೂ. ಹಾಗೂ ಬ್ರೆಝಾ ಕಾರು ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.
ವರದಕ್ಷಿಣೆ ಕೇಳಿದ್ದಕ್ಕೆ ಮದುವೆಯನ್ನೇ ರದ್ದುಗೊಳಿಸಿದ ವಧು -
ಲಖನೌ, ಡಿ. 14: ಮದುವೆ ಸಮಾರಂಭಕ್ಕೆ ಸ್ವಲ್ಪ ಮೊದಲು ವರನೊಬ್ಬ ಕಾರು ಮತ್ತು 20 ಲಕ್ಷ ರೂ. ವರದಕ್ಷಿಣೆ (Dowry)ಗೆ ಬೇಡಿಕೆ ಇಟ್ಟ ಕಾರಣಕ್ಕೆ ವಿವಾಹವೇ ಮುರಿದು ಬಿದ್ದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ ನಡೆದಿದೆ. ಸಂತೋಷ, ಸಡಗರದಿಂದ ನೆರವೇರಬೇಕಿದ್ದ ಸಮಾರಂಭವು, ದುಃಸ್ವಪ್ನವಾಗಿ ಪರಿಣಮಿಸಿತು. ಬ್ರೆಝಾ ಕಾರು ಮತ್ತು ಹಣವನ್ನು ನೀಡುವಂತೆ ವರ ಒತ್ತಾಯಿಸಿದ್ದಾನೆ. ತಮ್ಮ ಬೇಡಿಕೆಯನ್ನು ನೀಡುವವರೆಗೆ ಆಚರಣೆಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾನೆ. ಕೊನೆಯ ಕ್ಷಣದ ಬೇಡಿಕೆಯು ಗೊಂದಲಕ್ಕೆ ಕಾರಣವಾಯಿತು. ಕೂಡಲೇ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು.
ತನ್ನ ಕುಟುಂಬ ಸದಸ್ಯರು ಅಸಹಾಯಕರಾಗಿರುವುದನ್ನು ನೋಡಿದ ವಧು ಮದುವೆಯನ್ನು ಮುಂದುವರಿಸಲು ನಿರಾಕರಿಸಿದಳು. ಈ ವರದಕ್ಷಿಣೆ ದುರಾಸೆಯ ಜನರನ್ನು ನಾನು ಮದುವೆಯಾಗಲು ಬಯಸುವುದಿಲ್ಲ. ನನ್ನ ಕುಟುಂಬವನ್ನು ಗೌರವಿಸದ, ನನ್ನ ತಂದೆ ಮತ್ತು ಸಹೋದರನನ್ನು ಎಲ್ಲ ಅತಿಥಿಗಳ ಮುಂದೆ ಅವಮಾನಿಸುವ ಹುಡುಗನೊಂದಿಗೆ ನಾನು ನನ್ನ ಜೀವನವನ್ನು ಕಳೆಯಲು ಸಾಧ್ಯವಿಲ್ಲ. ನಾನು ಈ ದುರಾಸೆಯ ವ್ಯಕ್ತಿಯೊಂದಿಗೆ ವಿವಾಹವಾಗುವುದಿಲ್ಲ ಎಂದು ಹೇಳಿದ್ದಾಳೆ.
ವರದಕ್ಷಿಣೆಗಾಗಿ ಗಂಡನ ಮನೆಯವರಿಂದ ಕಿರುಕುಳ; ವಿಡಿಯೋ ಮಾಡಿ ಉಪನ್ಯಾಸಕಿ ಆತ್ಮಹತ್ಯೆ
ಪೊಲೀಸರು ವರ ಮತ್ತು ಆತನ ಸೋದರಮಾವನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ವಧುವಿನ ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ. ಮೇಯಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವಧುವಿನ ಕುಟುಂಬ ಸುಮಾರು ಮೂರು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ವರದಿಯಾಗಿದೆ. ಈ ಖರ್ಚುಗಳ ಜತೆಗೆ, ವರನಿಗೆ ಚಿನ್ನದ ಉಂಗುರ, ಸರ ಮತ್ತು ಐದು ಲಕ್ಷ ರೂಪಾಯಿ ನಗದನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿದೆ ಎನ್ನಲಾಗಿದೆ.
ಮದುಮಗನ ಆಗಮನದ ವಿಡಿಯೊ:
In UP's Bareilly, a wedding was called off at the last moment allegedly over dowry demand of Rs 20 lakhs and a Brezza car. pic.twitter.com/Qk9zRCdPsK
— Piyush Rai (@Benarasiyaa) December 13, 2025
ಇದಲ್ಲದೆ ವಧುವಿನ ಕುಟುಂಬವು ಎಸಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಗೃಹೋಪಯೋಗಿ ವಸ್ತುಗಳು, ಆಭರಣಗಳು ಮತ್ತು 1.20 ಲಕ್ಷ ರೂಪಾಯಿಗಳನ್ನು ಮದುವೆಯ ಸಮಯದಲ್ಲಿ ನೀಡಿದೆ ಎಂದು ಹೇಳಲಾಗಿದೆ. ಶುಕ್ರವಾರ ಮದುವೆ ನಿಗದಿಯಾಗಿತ್ತು. ಮದುವೆ ಮೆರವಣಿಗೆಯೂ ಬಂದಿತು. ವಿವಾಹದ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಇನ್ನೇನು ಪರಸ್ಪರ ಹಾರ ಬದಲಾಯಿಸಿ, ತಾಳಿ ಕಟ್ಟಬೇಕು ಅನ್ನೋವಷ್ಟರಲ್ಲಿ ವರನ ಕಡೆಯವರು ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಬ್ರೆಝಾ ಕಾರು ಮತ್ತು 20 ಲಕ್ಷ ರೂ. ವರದಕ್ಷಿಣೆಯಾಗಿಪಟ್ಟು ಹಿಡಿದಿದ್ದಾರೆ. ಇದರಿಂದ ಮದುವೆಯೇ ಮುರಿದುಬಿದ್ದಿದೆ. ವಧು, ತಾನು ಮದುವೆಯಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾಳೆ.
ದೇಶದಲ್ಲಿ ವರದಕ್ಷಿಣೆಯೆಂಬ ಭೂತ ಇನ್ನೂ ಕಡಿಮೆಯಾದಂತಿಲ್ಲ. ಇತ್ತೀಚೆಗಷ್ಟೇ ಕರ್ನಾಟಕದ ರಾಜ್ಯಪಾಲರ ಮೊಮ್ಮಗನ ವಿರುದ್ಧ ವರದಕ್ಷಿಣೆ ದೂರು ದಾಖಲಾಗಿತ್ತು. ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಮೊಮ್ಮಗ ದೇವೇಂದ್ರ ಗೆಹ್ಲೋಟ್ ಅವರ ಪತ್ನಿ ದಿವ್ಯಾ ಗೆಹ್ಲೋಟ್ ವರದಕ್ಷಿಣೆ ಕಿರುಕುಳ, ಕೊಲೆ ಯತ್ನ, ಕೌಟುಂಬಿಕ ಹಿಂಸೆ ಮತ್ತು ತಮ್ಮ ಅಪ್ರಾಪ್ತ ಮಗಳ ಅಪಹರಣದ ಗಂಭೀರ ಆರೋಪ ಮಾಡಿದ್ದರು.