ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಮತ್ತೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ ಬೆನ್ನಲ್ಲೇ ಕೇಂದ್ರದಿಂದ ಕೇಸ್‌ ವಾಪಸ್‌ʼʼ: ಸಿಜೆಪಿ

CJP claims progress: ಕಾಕ್ರೋಚ್ ಜನತಾ ಪಾರ್ಟಿ (CJP) ಕೇಂದ್ರ ಸರ್ಕಾರದೊಂದಿಗೆ ಒಪ್ಪಂದವೊಂದರ ಸಾಧ್ಯತೆಯ ಸುಳಿವು ನೀಡಿದೆ. ಜುಲೈ 25ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ 37 ದಿನಗಳ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯನ್ನು ಹಿಂತೆಗೆದುಕೊಂಡಾಗ ನೀಡಿದ ಭರವಸೆಗಳನ್ನು ಬಿಜೆಪಿ ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಮತ್ತೆ ಪ್ರತಿಭಟನೆ ನಡೆಸುವ ಬೆದರಿಕೆ ಒಡ್ಡಿದ ಬೆನ್ನಲ್ಲೇ ಕೇಂದ್ರ ಪ್ರತಿಭಟನಾಕಾರರ ಮೇಲಿನ ಕೇಸ್‌ ಹಿಂಪಡೆದಿದೆ ಎಂದು ತಿಳಿಸಿದೆ.

ಮತ್ತೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ ಸಿಜೆಪಿ ನಾಯಕರು

ನವದೆಹಲಿ, ಜು. 28: ಕಾಕ್ರೋಚ್ ಜನತಾ ಪಾರ್ಟಿ (CJP) ಕೇಂದ್ರ ಸರ್ಕಾರದೊಂದಿಗಿನ ಒಪ್ಪಂದವೊಂದರ ಸಾಧ್ಯತೆಯ ಸುಳಿವು ನೀಡಿದೆ. ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವುದು, ಬಂಧನದಲ್ಲಿರುವವರನ್ನು ಬಿಡುಗಡೆ ಮಾಡುವುದು ಮತ್ತು ಭವಿಷ್ಯದಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡುವ ಭರವಸೆಯ ಕರಡು ಅಧಿಸೂಚನೆಗಳನ್ನು ಸರ್ಕಾರದ ಪ್ರತಿನಿಧಿಗಳು ಹಂಚಿಕೊಂಡಿದ್ದಾರೆ ಎಂದು ಪಕ್ಷದ ವಕ್ತಾರ ಸೌರವ್ ದಾಸ್ (Saurav Das) ತಿಳಿಸಿದ್ದಾರೆ.

ಜುಲೈ 25ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯನ್ನು ಹಿಂತೆಗೆದುಕೊಂಡಾಗ ನೀಡಿದ ಭರವಸೆಗಳನ್ನು ಬಿಜೆಪಿ ಸರ್ಕಾರ ಉಲ್ಲಂಘಿಸಿದೆ ಎಂದು ಸಿಜೆಪಿ ಆರೋಪಿಸಿತ್ತು. ತನ್ನ ಪ್ರತಿಭಟನೆಯನ್ನು ಮತ್ತೆ ಆರಂಭಿಸುವುದಾಗಿ ಬೆದರಿಕೆ ಹಾಕಿದ ಕೆಲವೇ ಗಂಟೆಗಳ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ತಿಳಿಸಿದೆ.

ಪ್ರತಿಭಟನಾಕಾರರು ಮತ್ತು ಸಂಘಟಕರ ವಿರುದ್ಧ ಕೇಂದ್ರ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳು ದಾಖಲಿಸಿರುವ ಎಲ್ಲ ಎಫ್‌ಐಆರ್‌ಗಳನ್ನು ಹಿಂಪಡೆಯುವುದು, ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಯಾರ ವಿರುದ್ಧವೂ ಮುಂದಿನ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆ, ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳಿಗೆ ಪರಿಹಾರ ಮತ್ತು ಪರೀಕ್ಷಾ ಸುಧಾರಣೆಗೆ ಸಂಬಂಧಿಸಿದ ತನ್ನ ಐದು ಅಂಶಗಳ ಪ್ರಸ್ತಾವನೆಯನ್ನು ಪರಿಗಣಿಸುವುದು ಸಿಜೆಪಿಯ ಬೇಡಿಕೆಯಲ್ಲಿ ಸೇರಿತ್ತು.

ಇಲ್ಲಿದೆ ಸೌರವ್ ದಾಸ್ ಪೋಸ್ಟ್:



ಸೋಮವಾರ (ಜು. 27) ರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ದಾಸ್, ಸರ್ಕಾರಿ ಪ್ರತಿನಿಧಿಗಳು ಸಿಜೆಪಿ ನಾಯಕರನ್ನು ಭೇಟಿಯಾಗಿ ಸುಮಾರು ಮೂರು ಗಂಟೆಗಳ ಕಾಲ ಚರ್ಚೆ ನಡೆಸಿದರು ಎಂದು ಹೇಳಿದರು. ಎಫ್‌ಐಆರ್ ಹಿಂಪಡೆಯುವಿಕೆ, ಭವಿಷ್ಯದಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಮತ್ತು ಎಲ್ಲ ಬಂಧಿತರ ಬಿಡುಗಡೆಯನ್ನು ಖಾತರಿಪಡಿಸುವ ಬಿಹಾರ ಮತ್ತು ಅಸ್ಸಾಂ ಅಧಿಸೂಚನೆಗಳ ಪ್ರತಿಗಳನ್ನು ಅವರು ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಕಾಕ್ರೋಚ್ ಜನತಾ ಪಾರ್ಟಿಯ ಸಂಭ್ರಾಮಚರಣೆಯ ವಿಡಿಯೊ ವೈರಲ್: ಸೋನಮ್ ವಾಂಗ್ಚುಕ್ ಹೇಳಿದ್ದೇನು?

ಮಂಗಳವಾರ (ಜು. 28) ಕೇಂದ್ರ ಸರ್ಕಾರ ಮತ್ತು ಇತರ ಬಿಜೆಪಿ/ಎನ್‌ಡಿಎ ರಾಜ್ಯಗಳಿಂದ ಖಾತರಿ ಅಧಿಸೂಚನೆಗಳನ್ನು ಬಿಡುಗಡೆ ಮಾಡುವ ಭರವಸೆಯನ್ನು ಅವರು ಪುನರುಚ್ಚರಿಸಿದ್ದಾರೆ. ಒಪ್ಪಿಗೆ ಸೂಚಿಸಿದ ಭಾಷೆಯನ್ನೇ ಬಳಸಲಾಗುತ್ತದೆ ಎಂದು ಆಶಿಸುತ್ತೇವೆ ಎಂದು ಅವರು ಹೇಳಿದರು. ಯಾವುದೇ ಪ್ರತಿಭಟನಾಕಾರರನ್ನು ಒಂಟಿಯಾಗಿ ಬಿಡುವುದಿಲ್ಲ. ನಾವೆಲ್ಲರೂ ಅವರೊಂದಿಗೆ ಇದ್ದೇವೆ ಎಂದು ಹೇಳಿದರು.

ಜುಲೈ 25ರ ಒಪ್ಪಂದದ ಹೊರತಾಗಿಯೂ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮ ಮುಂದುವರೆದಿದೆ ಎಂದು ರಾಜ್ಯಸಭಾ ಸಂಸದ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಸಿಜೆಪಿ ನಾಯಕರು ಆರೋಪಿಸಿದ್ದಾರೆ. ಒಪ್ಪಂದದ ಅಡಿಯಲ್ಲಿ ಕೇಂದ್ರವು ಅಸ್ತಿತ್ವದಲ್ಲಿರುವ ಎಲ್ಲ ಎಫ್‌ಐಆರ್‌ಗಳನ್ನು ಹಿಂತೆಗೆದುಕೊಳ್ಳಲಾಗುವುದು ಮತ್ತು ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಲಾಗುವುದಿಲ್ಲ ಎಂದು ಭರವಸೆ ನೀಡಿತ್ತು. ಸರ್ಕಾರವು ತನ್ನ ಬದ್ಧತೆಗಳನ್ನು ಪೂರೈಸಲು ವಿಫಲವಾಗಿದೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳನ್ನು ಬಂಧಿಸುವುದನ್ನು ಮತ್ತು ಕಿರುಕುಳಕ್ಕೆ ಒಳಪಡಿಸುವುದನ್ನು ಮುಂದುವರೆಸಿದ್ದಾರೆ ಎಂದು ಸಿಜೆಪಿ ಸೋಮವಾರ ಆರೋಪಿಸಿತು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ 36 ದಿನಗಳ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಸಿಜೆಪಿ ಕೊನೆಗೊಳಿಸಿದ ನಾಲ್ಕು ದಿನಗಳ ನಂತರ, ಪ್ರಧಾನ್ ಅವರ ರಾಜೀನಾಮೆ ಸೇರಿದಂತೆ ಪ್ರತಿಭಟನಾಕಾರರ ಹಲವು ಪ್ರಮುಖ ಬೇಡಿಕೆಗಳನ್ನು ಕೇಂದ್ರವು ಒಪ್ಪಿಕೊಂಡ ಬಳಿಕ ಈ ಹೊಸ ಬೆಳವಣಿಗೆ ಸಂಭವಿಸಿದೆ.