ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ದೇಣಿಗೆ ಕಳ್ಳತನ ನಡೆದಿದೆ ಎಂಬ ಆರೋಪ ಬೆಳಕಿಗೆ ಬಂದ ಮೊದಲ ಬಾರಿಗೆ ಈ ಕುರಿತು ಆರ್ಎಸ್ಎಸ್ (RSS) ಮೌನ ಮುರಿದಿದೆ. ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ( Dattatreya Hosabale) ಈ ಕುರಿತು ಮಾತನಾಡಿದ್ದು, ದೇಣಿಗೆಗಳಿಂದ ಹಣ ಕಳುವಾಗಿರುವ ಘಟನೆಯು ಕೋಟ್ಯಂತರ ರಾಮಭಕ್ತರ ಶ್ರದ್ಧೆ ಹಾಗೂ ನಂಬಿಕೆಗೆ ನೋವಾಗಿದೆ. ಈ ಘಟನೆಯಿಂದ ನಾವೆಲ್ಲರೂ ತೀವ್ರವಾಗಿ ನೊಂದಿದ್ದೇವೆ ಎಂದು ಹೇಳಿದ್ದಾರೆ.
ಮಂದಿರದ ಆಡಳಿತ ಮಂಡಳಿ ಹಾಗೂ ಎಸ್ಐಟಿ ತನಿಖಾ ತಂಡವು ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಅಗತ್ಯವಿರುವ ಎಲ್ಲಾ ಕಠಿಣ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು. ಸಾರ್ವಜನಿಕರಲ್ಲಿ ಸದ್ಯ ಮೂಡಿರುವ ಗೊಂದಲ ಮತ್ತು ಅನಿಶ್ಚಿತತೆಗೆ ಆಡಳಿತ ಮಂಡಳಿ ಶೀಘ್ರವಾಗಿ ತೆರೆ ಎಳೆಯಬೇಕು ಎಂದು ಹೊಸಬಾಳೆ ಒತ್ತಾಯಿಸಿದ್ದಾರೆ. ಈ ಸಮಯದಲ್ಲಿ ಇಡೀ ಹಿಂದೂ ಸಮಾಜವು ಅಗತ್ಯ ಸಂಯಮ ಮತ್ತು ತಾಳ್ಮೆಯನ್ನು ಪ್ರದರ್ಶಿಸಬೇಕು. ಈ ದುರದೃಷ್ಟಕರ ಘಟನೆಯನ್ನು ದುರುಪಯೋಗಪಡಿಸಿಕೊಂಡು ಹಿಂದೂ ಧರ್ಮ ಮತ್ತು ಸಮಾಜವನ್ನು ಜಗತ್ತಿನ ಮುಂದೆ ತೇಜೋವಧೆ ಮಾಡಲು ಹೊಂಚು ಹಾಕುತ್ತಿರುವ ಹಿಂದೂ ವಿರೋಧಿ ಹಾಗೂ ದೇಶ ವಿರೋಧಿ ಶಕ್ತಿಗಳ ಸಂಚನ್ನು ಭಕ್ತರು ವಿಫಲಗೊಳಿಸಬೇಕು ಎಂದು ಹೊಸಬಾಳೆ ಅವರು ಮನವಿ ಮಾಡಿದ್ದಾರೆ.
ವಿಡಿಯೋ ನೋಡಿ
ದೇವಾಲಯ ಆಡಳಿತ ಮಂಡಳಿ ಮತ್ತು ಸರ್ಕಾರ ನೇಮಿಸಿದ ವಿಶೇಷ ತನಿಖಾ ತಂಡವು ಅಗತ್ಯವಿರುವ ಎಲ್ಲಾ ಉಪಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಸರಿಯಾದ ಹಣಕಾಸು ನಿರ್ವಹಣೆ, ದೋಷರಹಿತ ಮತ್ತು ಪಾರದರ್ಶಕ ಕಾರ್ಯಾಚರಣಾ ವ್ಯವಸ್ಥೆಗಳು ಮತ್ತು ಶುದ್ಧತೆ, ಪವಿತ್ರತೆ ಮತ್ತು ನಿಜವಾದ ಧಾರ್ಮಿಕತೆಯಿಂದ ತುಂಬಿದ ವಾತಾವರಣದ ಮೂಲಕ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಿಂದೂ ಸಮಾಜದ ನಂಬಿಕೆ ಮತ್ತು ವಿಶ್ವಾಸವನ್ನು ಬಲಪಡಿಸುವುದನ್ನು ಮುಂದುವರಿಸುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಈ ಕಳ್ಳತನ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಹಗರಣದಲ್ಲಿ ಸುಮಾರು 200 ಕೋಟಿವರೆಗೂ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಜನರನ್ನು ಬಂಧಿಸಲಾಗಿದೆ.