ಭೋಪಾಲ್, ಮೇ 12: ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷ ಇನ್ನೂ ಕೊನೆಗೊಂಡಿಲ್ಲ. ಇರಾನ್ ಹೊರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧವನ್ನು ತೆರವುಗೊಳಿಸದೇ ಇರುವುದು ಜಾಗತಿಕ ತೈಲ ಸಾಗಾಟದ ಮೇಲೆ ಪರಿಣಾಮ ಬೀರಿದ್ದು, ಭಾರತ ಸೇರಿ ಇಂಧನ ಆಮದನ್ನೇ ಅವಲಂಭಿಸಿರುವ ದೇಶಗಳು ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾರತೀಯರು ಖರ್ಚು ಕಡಿಮೆ ಮಾಡುವಂತರ ಕರೆ ನೀಡಿದ್ದಾರೆ. ಪೆಟ್ರೋಲ್-ಡೀಸೆಲ್ ಕಡಿಮೆ ಬಳಸಿ, ಇಂಧನ ಮಿತವ್ಯಯ ಮಾಡಿ ಎಂದು ಸೂಚಿಸಿದ್ದಾರೆ. ಆದರೆ ಇತ್ತ ಅವರದ್ದೇ ಪಕ್ಷದ ನಾಯಕರು ನೂರಾರು ಬೆಂಗಾವಲಯ ಪಡೆಗಳ ವಾಹನದೊಂದಿಗೆ ಭರ್ಜರಿ ರೋಡ್ ಶೋ ನಡೆಸಿ ದುಂದು ವೆಚ್ಚ ಮಾಡಿದ್ದಾರೆ. ಸದ್ಯ ಬಿಜೆಪಿ ನಾಯಕರ ಈ ನಡೆ ದೇಶಾದ್ಯಂತ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಮಧ್ಯ ಪ್ರದೇಶದ ಬಿಜೆಪಿ ನಾಯಕರು ಶೋಕಿ ಪ್ರದರ್ಶನದ ಮೂಲಕ ಟ್ರೋಲ್ಗೆ ಆಹಾರವಾಗಿದ್ದಾರೆ. ಮಧ್ಯ ಪ್ರದೇಶ ಪಠ್ಯ ಪುಸ್ತಕ ನಿಗಮದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿಜೆಪಿ ನಾಯಕ ಸೌಭಾಗ್ಯ ಸಿಂಗ್ ಠಾಕೂರ್, ಶಿವಪುರಿಯ ಶಾಸಕ ಪ್ರೀತಂ ಸಿಂಗ್ ಲೋಧಿ ಮತ್ತು ಸಚಿವ ಧರ್ಮೇಂದ್ರ ಲೋಧಿ ಸುಮಾರು 200 ಬೆಂಗಾವಲು ಪಡೆಗಳ ವಾಹನಗಳೊಂದಿಗೆ ಮೆರವಣಿಗೆ ನಡೆಸಿದರು. ಆ ಮೂಲಕ ಪ್ರಧಾನಿಯ ಮಾತನ್ನು ಗಾಳಿಗೆ ತೂರಿದರು.
ಸೌಭಾಗ್ಯ ಸಿಂಗ್ ಠಾಕೂರ್ ಅವರ ಮೆರವಣಿಗೆ:
ಉಜ್ಜೈನಿಯಿಂದ ಭೋಪಾಲ್ಗೆ ಮೆರವಣಿಗೆ
ಸೌಭಾಗ್ಯ ಸಿಂಗ್ ಠಾಕೂರ್ ಸುಮಾರು 200 ವಾಹನಗಳೊಂದಿಗೆ ಉಜ್ಜೈನಿಯಿಂದ ಭೋಪಾಲ್ಗೆ ಮೆರವಣಿಗೆ ನಡೆಸುವ ಮೂಲಕ ಉದ್ಧಟತನ ಮೆರೆದರು. ಸುಮಾರು 190 ಕಿ.ಮೀ. ಉದ್ಧದ ಈ ಮೆರವಣಿಗೆ ಹಲವು ಕಡೆ ಟ್ರಾಫಿಕ್ ಜಾಮ್ಗೆ ಕಾರಣವಾಯಿತು. ಇದರಿಂದ ಹಿರಿಯರು, ಮಕ್ಕಳು ಸೇರಿ ನೂರಾರು ಮಂದಿ ಬಿರು ಬಿಸಿಲಿನಲ್ಲೇ ರಸ್ತೆ ಮಧ್ಯೆಯೇ ಬಾಕಿಯಾಗಿ ತೊಂದರೆ ಅನುಭವಿಸಿದರು. ಸದ್ಯ ಸೌಭಾಗ್ಯ ಸಿಂಗ್ ಅವರ ಈ ನಡೆಯನ್ನು ಹಲವು ಮಂದಿ ಟೀಕಿಸಿದ್ದಾರೆ.
ಬಿಜೆಪಿ ಶಾಸಕ ಪ್ರೀತಂ ಸಿಂಗ್ ಲೋಧಿ ಅವರ ಮೆರವಣಿಗೆ:
ಶಿವಪುರಿಯಲ್ಲೂ ಇದೇ ಸ್ಥಿತಿ
ಇತ್ತ ಶಿವಪುರಿ ಜಿಲ್ಲೆಯಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡುಬಂತು. ಬಿಜೆಪಿ ಶಾಸಕ ಪ್ರೀತಂ ಸಿಂಗ್ ಲೋಧಿ ಖಾಂಡ್ವದಲ್ಲಿ ನಡೆದ ದೇವಾಲಯಕ್ಕೆ ಸಂಬಂಧಿಸಿದ ವಿವಾದವನ್ನು ಪರಿಹರಿಸಲು 200 ವಾಹನಗಳ ಬೆಂಗಾವಲು ಪಡೆಯೊಂದಿಗೆ ಆಗಮಿಸಿದರು. ಉಸ್ತುವಾರಿ ಸಚಿವ ಧರ್ಮೇಂದ್ರ ಲೋಧಿ ಜೋರಾದ ಸೈರನ್ಗಳ ನಡುವೆ ಹಲವು ವಾಹನಗಳ ಮೆರವಣಿಗೆಯೊಂದಿಗೆ ಜಿಲ್ಲಾ ಪರಿಶೀಲನಾ ಸಭೆಗೆ ತೆರಳಿದರು.
ದೇಶಾದ್ಯಂತ ಜಾರಿಯಾಗುತ್ತಾ ಆನ್ಲೈನ್ ಕ್ಲಾಸ್? ಪ್ರಧಾನಿ ಮೋದಿ ಹೇಳಿದ್ದೇನು?
ಧರ್ಮೇಂದ್ರ ಲೋಧಿ ಹೇಳಿದ್ದೇನು?
"ಪ್ರಧಾನಿ ಅವರ ಮನವಿಯನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ನಾನು ಜಿಲ್ಲಾಧಿಕಾರಿಗೂ ನಿರ್ದೇಶನ ನೀಡಿದ್ದೇನೆ. ಪ್ರಸ್ತುತ ನನ್ನ ತಂಡದಲ್ಲಿ ಹಲವು ವಾಹನಗಳಿವೆ. ಆದಾಗ್ಯೂ ಇಷ್ಟೊಂದು ದೊಡ್ಡ ಸಂಖ್ಯೆಯ ವಾಹನಗಳನ್ನು ಒಟ್ಟಿಗೆ ಓಡಿಸುವುದನ್ನು ಖಂಡಿತಾ ಸಮರ್ಥಿಸುವುದಿಲ್ಲʼʼ ಎಂದಿದ್ದಾರೆ.
ಬಿಜೆಪಿ ರಾಜ್ಯ ಅಧ್ಯಕ್ಷ ಹೇಮಂತ್ ಖಂಡೇಲ್ವಾಲ್ ಮಾತನಾಡಿ, "ಪ್ರಧಾನಿ ಅವರ ಕರೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಇಂದು, ನಮ್ಮ ನಾಯಕರು ಇ-ರಿಕ್ಷಾಗಳಲ್ಲಿ ಪ್ರಯಾಣಿಸುವ ಮೂಲಕ ಪ್ರಧಾನಿ ಅವರ ಮಾತನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದಾರೆ. ಇದನ್ನು ಮುಂದುವರಿಸಲಿದ್ದಾರೆ. ಕೆಲವು ಬೆಂಬಲಿಗರು ಖಾಸಗಿ ವಾಹನಗಳಲ್ಲಿ ಬಂದರು ಎಂಬುದು ನಿಜ. ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಅಥವಾ ಪರ್ಯಾಯ ಸಾರಿಗೆ ವಿಧಾನಗಳನ್ನು ಬಳಸಿಕೊಳ್ಳಲು ನಾವು ಎಲ್ಲ ಪಕ್ಷದ ಕಾರ್ಯಕರ್ತರು ಮತ್ತು ನಾಗರಿಕರಿಗೆ ಮನವಿ ಮಾಡುತ್ತೇವೆʼʼ ಎಂದು ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.