ಮುಂಬೈ, ಜು.8: ಮಂಗಳವಾರ (ಜು.7) ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಭಾರಿ ಅಪಾಯವೊಂದು ತಪ್ಪಿದೆ. ದೆಹಲಿ-ಬೌಂಡ್ ಏರ್ ಇಂಡಿಯಾ (Air India) ವಿಮಾನವು ಎಐ ಎಕ್ಸ್ಪ್ರೆಸ್ ವಿಮಾನದೊಂದಿಗೆ ಮುಖಾಮುಖಿಯಾಯಿತು. ಟೇಕ್ಆಫ್ಗೆ ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನವು, ಅದೇ ರನ್ವೇಯಲ್ಲಿ ಲ್ಯಾಂಡ್ ಆಗಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಇನ್ನೂ ರನ್ವೇ ಖಾಲಿ ಮಾಡಿರದ ಹಿನ್ನೆಲೆಯಲ್ಲಿ, ಏರ್ ಟ್ರಾಫಿಕ್ ಕಂಟ್ರೋಲ್ (ATC) ಸೂಚನೆಯ ಮೇರೆಗೆ ತನ್ನ ಟೇಕ್ಆಫ್ ಪ್ರಕ್ರಿಯೆಯನ್ನು ಮಧ್ಯದಲ್ಲೇ ಸ್ಥಗಿತಗೊಳಿಸಿದೆ.
ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮುಂಬೈನಿಂದ ದೆಹಲಿಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ AI816 ಮತ್ತು ಸಿಲಿಗುರಿಯಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ AIX1547 ನಡುವೆ ಅಪಘಾತ ಸಂಭವಿಸಿದೆ.
ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಅದೇ ರನ್ವೇಯಿಂದ ಟೇಕ್-ಆಫ್ಗೆ ಸಿದ್ಧತೆ ನಡೆಸುತ್ತಿದ್ದಾಗ, ಲ್ಯಾಂಡಿಂಗ್ ನಂತರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಇನ್ನೂ ರನ್ವೇಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಏರ್ ಟ್ರಾಫಿಕ್ ಕಂಟ್ರೋಲ್ ಸಮಯೋಚಿತವಾಗಿ ಮಧ್ಯಪ್ರವೇಶಿಸಿ, ಏರ್ ಇಂಡಿಯಾ ವಿಮಾನದ ಸಿಬ್ಬಂದಿಗೆ ಟೇಕ್ಆಫ್ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಸೂಚಿಸಿತು. ಇದರಿಂದಾಗಿ ಸಂಭವನೀಯ ಅನಾಹುತ ತಪ್ಪಿತು.
ಕ್ಷಣಾರ್ಧದಲ್ಲಿ ತಪ್ಪಿದ ಬಹುದೊಡ್ಡ ದುರಂತ: ಟ್ಯಾಕ್ಸಿವೇಯಲ್ಲಿ ಮುಖಾಮುಖಿಯಾದ ಇಂಡಿಗೋ, ಏರ್ ಇಂಡಿಯಾ ವಿಮಾನಗಳು
ಘಟನೆಯನ್ನು ದೃಢಪಡಿಸಿದ ಏರ್ ಇಂಡಿಯಾ, ಎಟಿಸಿಯ ಸೂಚನೆಗಳ ಮೇರೆಗೆ ಸಿಬ್ಬಂದಿ ತಕ್ಷಣ ಕಾರ್ಯನಿರ್ವಹಿಸಿದರು ಎಂದು ಹೇಳಿಕೆಯಲ್ಲಿ ತಿಳಿಸಿದೆ. ಜುಲೈ 7ರಂದು ಮುಂಬೈನಿಂದ ದೆಹಲಿಗೆ ತೆರಳಬೇಕಿದ್ದ AI816 ವಿಮಾನದ ಸಿಬ್ಬಂದಿ, ಏರ್ ಟ್ರಾಫಿಕ್ ಕಂಟ್ರೋಲ್ ನೀಡಿದ ಸೂಚನೆಯ ಮೇರೆಗೆ ಟೇಕ್ಆಫ್ ಪ್ರಕ್ರಿಯೆಯನ್ನು ಮಧ್ಯದಲ್ಲೇ ಸ್ಥಗಿತಗೊಳಿಸಿ, ಬಳಿಕ ವಿಮಾನವನ್ನು ಮತ್ತೆ ಪಾರ್ಕಿಂಗ್ ಬೇಗೆ ಹಿಂತಿರುಗಿಸಿದರು ಎಂದು ಏರ್ ಇಂಡಿಯಾ ತಿಳಿಸಿದೆ.
ಘಟನೆಯ ಬಗ್ಗೆ ವಿಮಾನಯಾನ ಸಂಸ್ಥೆಯು ನಿರ್ದಿಷ್ಟ ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಿಲ್ಲ. ವರದಿಯಲ್ಲಿ AI816 ವಿಮಾನವನ್ನು ವಿಶಾಲ-ದೇಹದ ಬೋಯಿಂಗ್ 777-300 ER ವಿಮಾನದಿಂದ ನಿರ್ವಹಿಸಬೇಕಿತ್ತು. ಆದರೆ ಸಿಲಿಗುರಿಯಿಂದ ಬಂದಿಳಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ AIX1547 ಅನ್ನು ಕಿರಿದಾದ-ದೇಹದ ಬೋಯಿಂಗ್ 737 MAX 8 ವಿಮಾನದಿಂದ ನಿರ್ವಹಿಸಬೇಕಿತ್ತು ಎಂದು ಉಲ್ಲೇಖಿಸಲಾಗಿದೆ.
ಟೇಕ್ಆಫ್ ರನ್ ಎಂದರೆ, ವಿಮಾನವು ರನ್ವೇಯಲ್ಲಿ ಚಲಿಸುತ್ತಾ ಕ್ರಮೇಣ ವೇಗ ಹೆಚ್ಚಿಸಿಕೊಂಡು, ಹಾರಾಟಕ್ಕೆ ಅಗತ್ಯವಾದ ವೇಗವನ್ನು ತಲುಪುವವರೆಗಿನ ಹಂತವನ್ನು ಸೂಚಿಸುತ್ತದೆ. ಏರ್ ಟ್ರಾಫಿಕ್ ಕಂಟ್ರೋಲ್ ಸೂಚನೆಯ ಮೇರೆಗೆ, ಹಾರಾಟ ಆರಂಭಿಸುವ ಮುನ್ನವೇ ಟೇಕ್ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯಿತು.
ಪ್ರಯಾಣಿಕರಿಗೆ ಆಗುವ ಅನಾನುಕೂಲತೆಯನ್ನು ಕಡಿಮೆ ಮಾಡಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಎರಡೂ ವಿಮಾನಗಳಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದನ್ನು ತಕ್ಷಣಕ್ಕೆ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ.
“ವಿಮಾನವನ್ನು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳ ಪ್ರಕಾರ ಅಗತ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಪ್ರಯಾಣಿಕರನ್ನು ಆದಷ್ಟು ಬೇಗ ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ಅನಿರೀಕ್ಷಿತ ಪರಿಸ್ಥಿತಿಯಿಂದ ಪ್ರಯಾಣಿಕರಿಗಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಷಾದಿಸುತ್ತದೆ. ಏರ್ ಇಂಡಿಯಾದಲ್ಲಿ, ನಮ್ಮ ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮವು ಪ್ರಮುಖ ಆದ್ಯತೆಯಾಗಿದೆ” ಎಂದು ವಿಮಾನಯಾನ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.