ನವದೆಹಲಿ, ನ.14: ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಬಳಿ ಕಾರು ಸ್ಫೋಟಿಸಿ (Delhi red fort car blast) 13 ಜನರ ಸಾವಿಗೆ ಕಾರಣನಾದ ಡಾ. ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ಉನ್-ನಬಿಯ ಕಾಶ್ಮೀರದ ಮನೆಯನ್ನು (Kashmir) ಭದ್ರತಾ ಪಡೆಗಳು ನೆಲಸಮಗೊಳಿಸಿವೆ. ಇಂದು ಮುಂಜಾನೆ, ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಈತನ ಮನೆಯನ್ನು ಕೆಡಹುವ ಕಾರ್ಯವನ್ನು ಭದ್ರತಾ ಪಡೆಗಳ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು.
ಸೋಮವಾರ ಸಂಜೆ ನಡೆದ ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿದ್ದರು ಮತ್ತು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಫರಿದಾಬಾದ್ನ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಉಮರ್, ಕೆಂಪು ಕೋಟೆ ಬಳಿಯ ನೇತಾಜಿ ಸುಭಾಷ್ ಮಾರ್ಗದಲ್ಲಿರುವ ಟ್ರಾಫಿಕ್ ಸಿಗ್ನಲ್ ಬಳಿ ತಾನು ಚಲಾಯಿಸುತ್ತಿದ್ದ ಹುಂಡೈ ಐ20 ಕಾರನ್ನು ಅದರಲ್ಲಿದ್ದ ಭಾರಿ ಸ್ಫೋಟಕ ಸಾಮಗ್ರಿಯ ಮೂಲಕ ಬ್ಲಾಸ್ಟ್ ಮಾಡಿದ್ದ. ಸ್ಫೋಟದ ಸ್ಥಳದಲ್ಲಿ ಕಂಡುಬಂದ ಮತ್ತು ಅವನ ತಾಯಿಯಿಂದ ಸಂಗ್ರಹಿಸಲಾದ ಡಿಎನ್ಎ ಮಾದರಿಗಳು ಹೊಂದಾಣಿಕೆಯಾಗಿದ್ದು, ಕಾರಿನಲ್ಲಿ ಅವನೇ ಇದ್ದುದು ದೃಢಪಟ್ಟಿದೆ.
ಕಾಶ್ಮೀರದಲ್ಲಿರುವ ಉಮರ್ನ ಮನೆಯನ್ನು ಧ್ವಂಸಗೊಳಿಸಿರುವುದು ಭಾರತದ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವವರಿಗೆ ಕಠಿಣ ಸಂದೇಶ ಕಳುಹಿಸುವ ಗುರಿಯನ್ನು ಹೊಂದಿದೆ. ಇದಕ್ಕೂ ಮೊದಲು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂಚಿನಲ್ಲಿ ಭಾಗಿಯಾಗಿರುವವರ ವಿರುದ್ಧವೂ ಈ ಧ್ವಂಸ ಕ್ರಮ ಕೈಗೊಳ್ಳಲಾಗಿತ್ತು.
ದೆಹಲಿ ಸ್ಫೋಟಕ್ಕೂ ಮುನ್ನವೇ ಸುಮಾರು 2,900 ಕೆಜಿ ಬಾಂಬ್ ತಯಾರಿಸುವ ಸಾಮಗ್ರಿಗಳು ಮತ್ತು ಅಸಾಲ್ಟ್ ರೈಫಲ್ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಈ ಉಗ್ರರ ವಶದಲ್ಲಿದ್ದುದು ಪತ್ತೆಯಾಗಿವೆ. ಉಮರ್ ಮತ್ತು ಅವನ ವೈದ್ಯ ಸಹಚರರಾದ ಮುಜಮ್ಮಿಲ್ ಮತ್ತು ಶಾಹೀನ್ ಸಯೀದ್ ಅವರಿಂದ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ವೈದ್ಯರು ಈಗ ಬಂಧನದಲ್ಲಿದ್ದಾರೆ. ಫರಿದಾಬಾದ್ನಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿರುವ ಹಿಂದಿನ ಪಿತೂರಿಯನ್ನು ಬಯಲು ಮಾಡಲು ಅವರನ್ನು ಪ್ರಶ್ನಿಸಲಾಗುತ್ತಿದೆ. ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್ ಉಲ್-ಹಿಂದ್ಗೆ ಸಂಬಂಧಿಸಿದ ಮಾಡ್ಯೂಲ್ ದೊಡ್ಡ ದಾಳಿಯನ್ನು ನಡೆಸಲು ಸಂಚು ರೂಪಿಸಿತ್ತು. 32 ಕಾರುಗಳಲ್ಲಿ ಸ್ಫೋಟಕಗಳನ್ನು ತುಂಬಿಕೊಂಡು ಹೋಗಿ ಡಿಸೆಂಬರ್ 6ರಂದು ಅಷ್ಟು ಕಡೆ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಫರಿದಾಬಾದ್ನಲ್ಲಿ ಸ್ಫೋಟಕಗಳ ಪತ್ತೆ ಮತ್ತು ದೆಹಲಿಯಲ್ಲಿ ನಡೆದ ಮಾರಕ ಸ್ಫೋಟವು ಜೈಶ್-ಎ-ಮೊಹಮ್ಮದ್ನಂತಹ ಭಯೋತ್ಪಾದಕ ಸಂಘಟನೆಗಳು ಈಗ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ವೈದ್ಯರಂತಹ ಉನ್ನತ ಶಿಕ್ಷಣ ಪಡೆದ ವೃತ್ತಿಪರರನ್ನು ನೇಮಿಸಿಕೊಳ್ಳುತ್ತಿವೆ ಎಂದು ಬಹಿರಂಗಪಡಿಸಿದೆ.
ಇದನ್ನೂ ಓದಿ: Delhi Blast: ಬಾಬ್ರಿ ಮಸೀದಿ ಸೇಡಿಗೆ ಕೆಂಪು ಕೋಟೆ ಮೇಲೆ ದಾಳಿ ಯತ್ನ? ವಿಚಾರಣೆಯಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ