Hema Malini: ಕುಂಭಮೇಳದಲ್ಲಿ ಜನರು ಹಸಿವೆಯಿಂದ ಸಾಯುತ್ತಿದ್ದಾರೆ; ಎಸ್ಪಿ ಮುಖಂಡರ ಆರೋಪಕ್ಕೆ ಹೇಮಾ ಮಾಲಿನಿ ಹೇಳಿದ್ದೇನು?
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಎಲ್ಲ ವ್ಯವಸ್ಥೆ ಸರಿಯಾಗಿದೆ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ಸಮರ್ಥಿಸಿಕೊಂಡಿದ್ದಾರೆ. ʼʼಫೆ. 26ರಂದು ಮಹಾ ಕುಂಭಮೇಳ ಮುಕ್ತಾಯವಾಗಲಿದ್ದು, ಅದಕ್ಕಿಂತ ಮುಂಚಿತವಾಗಿ ಪುಣ್ಯ ಸ್ನಾನ ಮಾಡಬೇಕು ಎನ್ನುವ ಧಾವಂತದಲ್ಲಿ ಭಕ್ತರು ಪ್ರಯಾಗ್ರಾಜ್ಗೆ ಧಾವಿಸುತ್ತಿದ್ದಾರೆ. ಹೀಗಾಗಿ ಸಣ್ಣಪುಟ್ಟ ಗೊಂದಲ ಏದುರಾಗಿದೆ. ಅದಾಗ್ಯೂ ಕುಂಭಮೇಳದ ವ್ಯವಸ್ಥೆ ಉತ್ತಮವಾಗಿದ್ದು, ಎಲ್ಲರೂ ಹೊಗಳುತ್ತಿದ್ದಾರೆʼʼ ಎಂದು ಹೇಳಿದ್ದಾರೆ.
![ಎಸ್ಪಿ ಆರೋಪಕ್ಕೆ ತಿರುಗೇಟು ನೀಡಿ ಹೇಮಾ ಮಾಲಿನಿ ಹೇಳಿದ್ದೇನು?](https://cdn-vishwavani-prod.hindverse.com/media/original_images/Hema_Malini_sDkSkjt.jpg)
ಹೇಮಾ ಮಾಲಿನಿ.
![Profile](https://vishwavani.news/static/img/user.png)
ಹೊಸದಿಲ್ಲಿ: ಉತ್ತರ ಪ್ರದೇಶದ ಪ್ರಯಾಗ್ರಾಜ್ (Prayagraj)ನಲ್ಲಿ ನಡೆಯುತ್ತಿರುವ ಕುಂಭಮೇಳದ (Maha Kumbh Mela) ವೇಳೆ ನಡೆದ ಕಾಲ್ತುಳಿತ ಪ್ರಕರಣ ಬಹುದೊಡ್ಡ ಘಟನೆಯಲ್ಲ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದ ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ (Hema Malini) ಇದೀಗ ಅಲ್ಲಿನ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಂಸತ್ ಭವನದ ಹೊರ ಭಾಗದಲ್ಲಿ ಮಾಧ್ಯಮದವರೊಂದಿಗೆ ಫೆ. 11ರಂದು ಮಾತನಾಡಿದ ಅವರು, ಕುಂಭಮೇಳವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದು, ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಮಹಾ ಕುಂಭಮೇಳದ ಹಿನ್ನೆಲೆಯಲ್ಲಿ ಪ್ರಯಾಗ್ರಾಜ್ನಲ್ಲಿ ಕಂಡು ಕೇಳರಿಯದ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಕಿ.ಮೀ.ಗಟ್ಟಲೆ ರಸ್ತೆಯಲ್ಲೇ ಬಾಕಿಯಾಗುತ್ತಿರುವ ಘಟನೆ ಪುನರಾವರ್ತನೆಯಾಗುತ್ತುದ್ದು, ಈ ಕುರಿತು ಕೇಳಿ ಬಂದ ಆರೋಪಗಳಿಗೆ ಅವರು ಉತ್ತರಿಸಿದ್ದಾರೆ.
Delhi: On #MahaKumbh2025, BJP MP Hema Malini says, "There are some issues in certain places, but in many areas, there are no problems at all. A large number of people are going there. The common people’s crowd is huge because everyone wants to take a holy dip before the 26th.… pic.twitter.com/mkcwZBIrsV
— IANS (@ians_india) February 11, 2025
ʼʼಫೆ. 26ರಂದು ಮಹಾ ಕುಂಭಮೇಳ ಮುಕ್ತಾಯವಾಗಲಿದ್ದು, ಅದಕ್ಕಿಂತ ಮುಂಚಿತವಾಗಿ ಪುಣ್ಯ ಸ್ನಾನ ಮಾಡಬೇಕು ಎನ್ನುವ ಧಾವಂತದಲ್ಲಿ ಭಕ್ತರು ಪ್ರಯಾಗ್ರಾಜ್ಗೆ ಧಾವಿಸುತ್ತಿದ್ದಾರೆ. ಹೀಗಾಗಿ ಸಣ್ಣಪುಟ್ಟ ಗೊಂದಲ ಎದುರಾಗಿದೆ. ಅದಾಗ್ಯೂ ಕುಂಭಮೇಳದ ವ್ಯವಸ್ಥೆ ಉತ್ತಮವಾಗಿದ್ದು, ಎಲ್ಲರೂ ಹೊಗಳುತ್ತಿದ್ದಾರೆʼʼ ಎಂದು ಹೇಳಿದ್ದಾರೆ.
ʼʼಕಾಲ್ತುಳಿತ ಘಟನೆ ಸಂಭವಿಸಬಾರದಿತ್ತು. ಆದರೆ ಸಂಭವಿಸಿದೆ. ಈ ಕಾರಣಕ್ಕೆ ಇಡೀ ಕುಂಭಮೇಳವನ್ನು ದೂಷಿಸುವುದು, ವ್ಯವಸ್ಥೆ ವಿಫಲವಾಗಿದೆ ಎನ್ನುವುದು ಸರಿಯಲ್ಲʼʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಸ್ಪಿ ಸಂಸದರಿಂದ ವಾಗ್ದಾಳಿ
ಮಹಾ ಕುಂಭಮೇಳದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಸಮಾಜವಾದಿ ಪಕ್ಷದ ಸಂಸದರು ಮಂಗಳವಾರ (ಫೆ. 11) ಮಾಡಿದ ಆರೋಪಕ್ಕೂ ಹೇಮಾ ಮಾಲಿನಿ ಪ್ರತಿಕ್ರಿಯಿಸಿದ್ದಾರೆ. ಆಹಾರ ಮತ್ತು ನೀರಿನ ಕೊರತೆಯಿಂದ ಭಕ್ತರು ಸಾಯುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಎಸ್ಪಿ ನಾಯಕರು ಆರೋಪಿಸುತ್ತಿದ್ದಾರೆ. "ಕೆಲವು ಸ್ಥಳಗಳಲ್ಲಿ ಸಮಸ್ಯೆಗಳಿವೆ. ಆದರೆ ಎಲ್ಲೆಡೆ ಇಲ್ಲʼʼ ಎಂದು ಹೇಮಾ ಮಾಲಿನಿ ತಿರುಗೇಟು ನೀಡಿದ್ದಾರೆ. "ಇಲ್ಲಿನ ವ್ಯವಸ್ಥೆ ತುಂಬ ಸಂಘಟಿತವಾಗಿದೆ. ಎಲ್ಲರೂ ಅದನ್ನು ಶ್ಲಾಘಿಸುತ್ತಿದ್ದಾರೆ. ಅಲ್ಲಿಗೆ ಹೋದ ನನ್ನ ಪರಿಚಯಸ್ಥರು ಕುಂಭಮೇಳವನ್ನು ತುಂಬಾ ಚೆನ್ನಾಗಿ ನಿರ್ವಹಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಅಪಘಾತ ಸಂಭವಿಸಿದೆ. ಆದರೆ ಇದು ಕುಂಭಮೇಳದ ವೈಫಲ್ಯ ಎಂದು ಹೇಳಲು ಸಾಧ್ಯವಿಲ್ಲʼʼ ಎಂದಿದ್ದಾರೆ.
ರಾಜ್ಯಸಭಾ ಸಂಸದ, ಎಸ್ಪಿ ಮುಖಂಡ ರಾಮ್ ಗೋಪಾಲ್ ಯಾದವ್ ಮಾತನಾಡಿ, ʼʼಕುಂಭಮೇಳಕ್ಕೆ ಆಗಮಿಸುವವರು ಇಲ್ಲಿನ ಅವ್ಯವಸ್ಥೆಯಿಂದಾಗಿ ಪರದಾಡುವಂತಾಗಿದೆ. ಸಮರ್ಪಕವಾಗಿ ನೀರು, ಆಹಾರ ಇಲ್ಲದೆ ಕಂಗಾಲಾಗಿದ್ದಾರೆ. ಇಲ್ಲಿ ಜನರು ಸಾಯುತ್ತಿದ್ದಾರೆ. ಕೆಲವರು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ಜತೆಗೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನವೂ ದೊರೆಯುತ್ತಿಲ್ಲʼʼ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Hema Malini: ಕುಂಭಮೇಳ ಕಾಲ್ತುಳಿತ ಪ್ರಕರಣ ದೊಡ್ಡ ಸಂಗತಿಯೇನಲ್ಲ; ಮಾತಿನ ಭರದಲ್ಲಿ ಹೇಮಾ ಮಾಲಿನಿ ಎಡವಟ್ಟು!
ʼʼಉತ್ತರ ಸರ್ಕಾರ ಅಲಹಬಾದ್ಗೆ ವಾಹನ ಪ್ರವೇಶವನ್ನು ನಿಷೇಧಿಸಿದೆ. ಮನೆಯಿಂದ ಹೊರ ಬರಲೂ ಜನರು ಪರದಾಡುತ್ತಿದ್ದಾರೆ. ಹಿಂದೆ ಎಂದಾದರೂ ಇಂತಹ ಪರಿಸ್ಥಿತಿ ನೋಡಿದ್ದೀರಾ? ಇಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲʼʼ ಎಂದು ಅವರು ವಾಗ್ದಾಳಿ ನಡೆಸಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ಹೇಮಾ ಮಾಲಿನಿ ತಿರುಗೇಟು ನೀಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಮಾಹಿತಿ ಪ್ರಕಾರ ಇದುವರೆಗೆ ಸುಮಾರು 44 ಕೋಟಿ ಮಂದಿ ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿದ್ದಾರೆ.