ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಮದುಮೇಹ ಹೆಚ್ಚಾಗಬಹುದು ಎಂದು ಜನರು ಸ್ವೀಟ್‌ ತಿನ್ನುತ್ತಿಲ್ಲ"; ಸಕ್ಕರೆ ಬೆಲೆ ಏರಿಕೆ ಕುರಿತು ಸಚಿವ ಹೇಳಿದ್ದೇನು?

sugar price hike: ಬಿಹಾರದ ಸಚಿವ ಶ್ರವಣ್ ಕುಮಾರ್ ಅವರು ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚಾದ ಸಕ್ಕರೆ ಬೆಲೆಯನ್ನು ಸಮರ್ಥಿಸಿಕೊಳ್ಳಲು ಮಧುಮೇಹ (Diabetes) ಎಂಬ ವಿಲಕ್ಷಣ ತರ್ಕವನ್ನು ಮುಂದಿಟ್ಟಿದ್ದಾರೆ. ಜನರು ಸಕ್ಕರೆ ಸೇವನೆ ಕಡಿಮೆ ಮಾಡುತ್ತಿದ್ದಾರೆ. ಎಲ್ಲರೂ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದರು.

ಬಿಹಾರದ ಸಚಿವ ಶ್ರವಣ್ ಕುಮಾರ್ (ಸಂಗ್ರಹ ಚಿತ್ರ)

ಪಟನಾ, ಆ.21: ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚಾದ ಸಕ್ಕರೆ ಬೆಲೆಯನ್ನು ಸಮರ್ಥಿಸಿಕೊಳ್ಳಲು ಮಧುಮೇಹ (Diabetes) ಎಂಬ ವಿಲಕ್ಷಣ ತರ್ಕವನ್ನು ಬಿಹಾರದ ಸಚಿವ ಶ್ರವಣ್ ಕುಮಾರ್ (Bihar Minister Shravan Kumar) ಅವರು ಮುಂದಿಟ್ಟಿದ್ದಾರೆ. ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳಿಂದಾಗಿ ಜನರು ತಮ್ಮ ಸಕ್ಕರೆ ಸೇವನೆಯ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ. ಹೀಗಾಗಿ ಈ ಬೆಲೆ ಏರಿಕೆಯು ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಜನರು ಸಕ್ಕರೆ ಸೇವನೆ ಕಡಿಮೆ ಮಾಡುತ್ತಿದ್ದಾರೆ. ಎಲ್ಲರೂ ಮಧುಮೇಹದಿಂದ ಬಳಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿಹಿತಿಂಡಿಗಳನ್ನು ಯಾರು ತಿನ್ನುತ್ತಾರೆ? ಸಕ್ಕರೆ ಬೆಲೆ ಏರಿಕೆಯಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ನನಗೆ ಅನಿಸುತ್ತದೆ. ಚಿಂತಿಸುವ ಅಗತ್ಯವಿಲ್ಲ ಎಂದು ಶ್ರವಣ್ ಕುಮಾರ್ ತಿಳಿಸಿದರು.

ಬಿಹಾರದಲ್ಲಿ ಪ್ರತಿ ಕೆ.ಜಿ ಸಕ್ಕರೆಯ ಬೆಲೆ 65 ರೂ. ಗಿಂತ ಹೆಚ್ಚಾಗಿದೆ. ಇದಕ್ಕೂ ಮೊದಲು ಇದು 48 ರಿಂದ 50 ರೂ.ಗಳಷ್ಟಿತ್ತು. ಬಿಹಾರ ಸಚಿವ ವಿಜಯ್ ಕುಮಾರ್ ಸಿನ್ಹಾ ಕೂಡ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ರೈತರ ಉತ್ಪನ್ನಗಳ ಬೆಲೆ ಹೆಚ್ಚಾದಾಗ ತಮಗೆ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.

ತೂಕ ಇಳಿಸುವವರು ಅನ್ನ-ತುಪ್ಪ-ಬಾಳೆಹಣ್ಣು ಸೇವಿಸಬಾರದೆ? ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ ಇಲ್ಲಿದೆ

"ಸಕ್ಕರೆ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಇದಕ್ಕೆ ಕಾರಣ ಏನೆಂಬುದನ್ನು ತನಿಖೆ ಮಾಡಬೇಕಾಗಿದೆ. ನಮ್ಮಲ್ಲಿ ಸಕ್ಕರೆ ಉತ್ಪಾದನೆಗೆ ಸಂಬಂಧಿಸಿದ ಸಚಿವರಿದ್ದಾರೆ. ಈ ವಿಷಯದ ಬಗ್ಗೆ ನಾವು ಅವರಿಂದ ಮಾಹಿತಿ ಪಡೆಯುತ್ತೇವೆ. ರೈತರ ಉತ್ಪನ್ನಗಳ ಬೆಲೆ ಹೆಚ್ಚಾದಾಗ ನನಗೆ ವೈಯಕ್ತಿಕವಾಗಿ ಸಂತೋಷವಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.

ಸಂಸದ ಪಪ್ಪು ಯಾದವ್ ಟೀಕೆ

ಸಕ್ಕರೆ ಬೆಲೆ ಏರಿಕೆಯ ಬಗ್ಗೆ ಕುಮಾರ್ ಅವರ ವಿಲಕ್ಷಣ ತರ್ಕವನ್ನು ಪಕ್ಷೇತರ ಸಂಸದ ಪಪ್ಪು ಯಾದವ್ ಟೀಕಿಸಿದ್ದಾರೆ. ಜನರು ಅವರಿಂದ ಏನನ್ನು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ್ದಾರೆ. ಹಸುವಿನ ಸಗಣಿ ಮೇಲೆ ಎಷ್ಟೇ ತುಪ್ಪ ಸುರಿದರೂ ಅದು ಸಗಣಿಯ ರುಚಿಯೇ ನೀಡುತ್ತದೆ. ಅಂತಹ ಸಚಿವರಿಂದ ನೀವು ಏನನ್ನು ನಿರೀಕ್ಷಿಸಬಹುದು? ಗ್ಯಾಸ್ ಮತ್ತು ಟೊಮೆಟೊ ಬೆಲೆಗಳು ಏರಿದಾಗ, ಸ್ಮೃತಿ ಇರಾನಿ ಸೇರಿದಂತೆ ಅನೇಕ ಪ್ರಮುಖ ನಾಯಕರು ಪ್ರಶ್ನೆಗಳನ್ನು ಎತ್ತುತ್ತಿದ್ದರು. ಆದರೆ ಇಂದು, ಸಕ್ಕರೆ ಬೆಲೆಗಳು ಏರಿದಾಗ, ಅವರು ಮಧುಮೇಹದ ಬಗ್ಗೆ ಮಾತನಾಡುತ್ತಿದ್ದಾರೆ. ಈ ದೇಶದ ದೊಡ್ಡ ಮಧುಮೇಹವೇ ಈ ಸರ್ಕಾರ ಎಂದು ಅವರು ಹೇಳಿದರು.