ಚೆನ್ನೈ, ಮೇ 5: 2026ರ ತಮಿಳುನಾಡು ಚುನಾವಣೆಯಲ್ಲಿ (Tamil Nadu election) ಅಚ್ಚರಿ ಮೂಡಿಸಿದ ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ (Viajay) ಮೇ 7ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮವು ಚೆನ್ನೈ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎನ್ನಲಾಗಿದೆ. ಇದು ವಿಜಯ್ ಅವರ ಚಲನಚಿತ್ರ ಸಂಬಂಧಿತ ಸಮಾರಂಭ ನಡೆಯುತ್ತಿದ್ದ ಸ್ಥಳ. ಆದರೆ ಟಿವಿಕೆ ವಿಜಯ್ ಅವರ ಪ್ರಮಾಣವಚನ ಸಮಾರಂಭದ ಬಗ್ಗೆ ಔಪಚಾರಿಕ ಹೇಳಿಕೆ ನೀಡಿಲ್ಲ.
234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗಳಿಸಿದ್ದು, 10 ಸ್ಥಾನಗಳ ಕೊರತೆಯಿದೆ. ಕಾಂಗ್ರೆಸ್ ವಿಜಯ್ ಅವರ ಪಕ್ಷದೊಂದಿಗೆ ಕೈಜೋಡಿಸಬಹುದು ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಡಿವೆ.
ಈ ಮಧ್ಯೆ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಒಂದು ದಿನದ ನಂತರ, ಟಿವಿಕೆ ಮುಖ್ಯಸ್ಥ ವಿಜಯ್ ಮೇ 5ರಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು. 234 ಸದಸ್ಯರ ವಿಧಾನಸಭೆಯಲ್ಲಿ 108 ಸ್ಥಾನಗಳೊಂದಿಗೆ ಜಯಗಳಿಸಿದ ನಂತರ ಪಕ್ಷದ ಶಾಸಕಾಂಗ ಕಾರ್ಯತಂತ್ರವನ್ನು ರೂಪಿಸುವಲ್ಲಿ ಈ ಸಭೆ ಮೊದಲ ಔಪಚಾರಿಕ ಹೆಜ್ಜೆ ಎನಿಸಿಕೊಂಡಿದೆ.
ಟಿವಿಕೆ ಅಭ್ಯರ್ಥಿ ವಿರುದ್ಧ ಡಿಎಂಕೆ ಸಚಿವನನ್ನು ಸೋಲಿಸಿತ್ತು ಕೇವಲ ಒಂದು ಮತ
ಟಿವಿಕೆ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆಯ ವಾತಾವರಣ ನಿರ್ಮಾಣವಾಗಿತ್ತು. ವಿಜಯ್ ಅವರಿಗೆ ಬೆಂಬಲಿಗರು ಮತ್ತು ಹೊಸ ಶಾಸಕರಿಂದ ಅದ್ಧೂರಿ ಸ್ವಾಗತ ದೊರೆಯಿತು. ಅವರಲ್ಲಿ ಹಲವರು ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸುತ್ತಿದ್ದಾರೆ. ವಿಜಯ್ ಔಪಚಾರಿಕ ಚರ್ಚೆಗಳು ಪ್ರಾರಂಭವಾಗುವ ಮೊದಲು ಪೆರಿಯಾರ್, ಇ.ವಿ. ರಾಮಸಾಮಿ, ಬಿ.ಆರ್. ಅಂಬೇಡ್ಕರ್, ಕೆ. ಕಾಮರಾಜ್, ವೇಲು ನಾಚಿಯಾರ್ ಮತ್ತು ಅಂಜಲೈ ಅಮ್ಮಾಳ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು.
ಸಭೆಯ ಪ್ರಾಥಮಿಕ ಕಾರ್ಯಸೂಚಿಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಔಪಚಾರಿಕ ಆಯ್ಕೆ ಮತ್ತು ಸಂಸದೀಯ ನಡವಳಿಕೆಯ ಕುರಿತು ಮಾಹಿತಿ ನೀಡಲಾಯಿತು. ಟಿವಿಕೆ ನಾಯಕ ನಂಜಿಲ್ ಸಂಪತ್ ಅವರ ಪ್ರಕಾರ, ಶಾಸಕರು ತಮ್ಮ ವಿಜಯ ಪ್ರಮಾಣ ಪತ್ರಗಳನ್ನು ಪಕ್ಷದ ಮುಖ್ಯಸ್ಥರಿಗೆ ಸಲ್ಲಿಸಿದರು.