ಕೋಲ್ಕತಾ, ಸೆ. 3: ಚಾಲಕನ ಡ್ರೈವಿಂಗ್ ಲೈಸೆನ್ಸ್ಗೆ ಸಂಬಂಧಿಸಿದ ಸಮಸ್ಯೆಯನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಾಹನ ವಿಮಾ ಕ್ಲೇಮ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಲು ವಿಮಾ ಕಂಪನಿಗಳಿಗೆ ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ. ವಿಮಾ ಕಂಪನಿಯ ಮೇಲ್ಮನವಿಯನ್ನು ತಿರಸ್ಕರಿಸಿದ ಆಯೋಗ, ಪಾಲಿಸಿದಾರರಿಗೆ ₹3.5 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದೆ. ಜತೆಗೆ ಮಾನಸಿಕ ಸಂಕಟಕ್ಕೆ ₹1 ಲಕ್ಷ ಪರಿಹಾರ ಹಾಗೂ ನಿಗದಿತ ಅವಧಿಯಿಂದ ಶೇ. 6ರ ಬಡ್ಡಿಯನ್ನೂ ಪಾವತಿಸುವಂತೆ ಆದೇಶಿಸಿದೆ.
2026ರ ಜುಲೈ 8ರಂದು ನೀಡಿದ ತೀರ್ಪಿನಲ್ಲಿ ಆಯೋಗವು ಎಚ್ಡಿಎಫ್ಸಿ ಜನರಲ್ ಇನ್ಶೂರೆನ್ಸ್ ಕಂಪನಿಗೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆ ನಡೆಸಿತು. ಪಾಲಿಸಿದಾರರ ಸ್ಕೋಡಾ ನ್ಯೂ ಲಾರಾ ಆಯಂಬಿಯೆಂಟ್ 1.8 ಟಿಎಸ್ಐ ಕಾರಿಗೆ ₹6.95 ಲಕ್ಷ IDV ಹೊಂದಿರುವ ವಿಮಾ ಪಾಲಿಸಿ ಇತ್ತು. 2014ರ ಮಾರ್ಚ್ 9ರಿಂದ 2015ರ ಮಾರ್ಚ್ 9ರವರೆಗೆ ಪಾಲಿಸಿ ಜಾರಿಯಲ್ಲಿದ್ದು, ಇದಕ್ಕಾಗಿ ₹11,233 ಪ್ರೀಮಿಯಂ ಪಾವತಿಸಲಾಗಿತ್ತು.
2014ರ ಅಕ್ಟೋಬರ್ 12ರಂದು ಕಾರು ಅಪಘಾತಕ್ಕೀಡಾಗಿತ್ತು. ಸರ್ವಿಸ್ ಸೆಂಟರ್ನಲ್ಲಿ ಪರಿಶೀಲಿಸಿದಾಗ ರಿಪೇರಿಗೆ ಸುಮಾರು ₹5.28 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಬಳಿಕ ವಾಹನ ಮಾಲೀಕರು ವಿಮಾ ಪರಿಹಾರಕ್ಕಾಗಿ ಕ್ಲೇಮ್ ಸಲ್ಲಿಸಿದ್ದರು. ಆದರೆ ಅಪಘಾತದ ವೇಳೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯ ಬಳಿ ಮಾನ್ಯವಾದ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ ಎಂದು ಆರೋಪಿಸಿ ವಿಮಾ ಕಂಪನಿ ಕ್ಲೇಮ್ ಅನ್ನು ತಿರಸ್ಕರಿಸಿತ್ತು. ಚಾಲಕನ ಬಳಿ ಮತ್ತೊಂದು ಲೈಸೆನ್ಸ್ ಇದ್ದು, ಅದು ನಕಲಿ ಎಂದು ಕಂಪನಿ ವಾದಿಸಿತ್ತು. ಇದು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 6ರ ಉಲ್ಲಂಘನೆಯಾಗಿದೆ ಎಂದೂ ತಿಳಿಸಿತ್ತು.
ಎರಡು ಲೈಸೆನ್ಸ್ ಹೊಂದಿರುವುದೇ ಕ್ಲೇಮ್ ತಿರಸ್ಕಾರಕ್ಕೆ ಕಾರಣವಲ್ಲ
ಚಾಲಕನ ಬಳಿ ಒಂದಕ್ಕಿಂತ ಹೆಚ್ಚು ಡ್ರೈವಿಂಗ್ ಲೈಸೆನ್ಸ್ಗಳು ಇರುವುದು ಕಾನೂನು ಉಲ್ಲಂಘನೆಯಾಗಬಹುದು ಎಂದು ಆಯೋಗ ಒಪ್ಪಿಕೊಂಡಿದೆ. ಅಂತಹ ಉಲ್ಲಂಘನೆಗೆ ಸಂಬಂಧಿಸಿದಂತೆ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ ಚಾಲಕ ಮಾಡಿದ ಕಾನೂನು ಉಲ್ಲಂಘನೆಯನ್ನು ಆಧಾರವನ್ನಾಗಿ ಮಾಡಿಕೊಂಡು ಪಾಲಿಸಿದಾರನ ವಿಮಾ ಕ್ಲೇಮ್ ಅನ್ನು ಸ್ವಯಂಚಾಲಿತವಾಗಿ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಚಾಲಕನ ಕಾನೂನು ಉಲ್ಲಂಘನೆ ಮತ್ತು ವಾಹನ ಮಾಲೀಕ ಪಾಲಿಸಿಯ ಷರತ್ತುಗಳನ್ನು ಉಲ್ಲಂಘಿಸಿರುವುದು ಎರಡು ವಿಭಿನ್ನ ವಿಚಾರಗಳಾಗಿವೆ. ಚಾಲಕನ ವಿರುದ್ಧದ ಕಾನೂನು ಕ್ರಮದಿಂದ ವಿಮಾ ಒಪ್ಪಂದದಡಿ ಕಂಪನಿಯ ಜವಾಬ್ದಾರಿ ತಕ್ಷಣವೇ ಅಂತ್ಯಗೊಳ್ಳುವುದಿಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ರಿಲೀಫ್: ಅಮಾನತು ಆದೇಶಕ್ಕೆ ತಡೆ
₹4.5 ಲಕ್ಷಕ್ಕೂ ಹೆಚ್ಚು ಪಾವತಿ
ಪಾಲಿಸಿದಾರರಿಗೆ ₹3.5 ಲಕ್ಷ ಪರಿಹಾರ ನೀಡುವಂತೆ ಆಯೋಗ ವಿಮಾ ಕಂಪನಿಗೆ ನಿರ್ದೇಶನ ನೀಡಿದೆ. ಈ ಮೊತ್ತಕ್ಕೆ 2016ರ ಸೆಪ್ಟೆಂಬರ್ 7ರಿಂದ ವಾರ್ಷಿಕ ಶೇ. 6ರ ಬಡ್ಡಿ ಪಾವತಿಸಬೇಕು. 45 ದಿನಗಳೊಳಗೆ ಹಣ ಪಾವತಿಸದಿದ್ದರೆ ಬಡ್ಡಿದರವನ್ನು ವಾರ್ಷಿಕ ಶೇ. 9ಕ್ಕೆ ಹೆಚ್ಚಿಸುವಂತೆ ಆದೇಶಿಸಲಾಗಿದೆ. ಇದರ ಜತೆಗೆ, ಪ್ರಕರಣದಿಂದ ಉಂಟಾದ ಮಾನಸಿಕ ಸಂಕಟಕ್ಕಾಗಿ ಪಾಲಿಸಿದಾರರಿಗೆ ₹1 ಲಕ್ಷ ಪರಿಹಾರ ನೀಡಬೇಕು. ಆದರೆ ಪಾಲಿಸಿದಾರರು ಕೋರಿದ್ದ ಸಂಪೂರ್ಣ ₹6.95 ಲಕ್ಷ IDV ಮೊತ್ತವನ್ನು ಆಯೋಗ ಮಂಜೂರು ಮಾಡಿಲ್ಲ.
ವಾಹನ ಮಾಲೀಕರಿಗೆ ತೀರ್ಪಿನ ಸಂದೇಶವೇನು?
ಈ ತೀರ್ಪು ಡ್ರೈವಿಂಗ್ ಲೈಸೆನ್ಸ್ಗೆ ಸಂಬಂಧಿಸಿದ ಸಮಸ್ಯೆ ಇದೆ ಎಂಬ ಒಂದೇ ಕಾರಣಕ್ಕೆ ಪ್ರತಿಯೊಂದು ವಾಹನ ವಿಮಾ ಕ್ಲೇಮ್ ಅನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂಬುದನ್ನು ಒತ್ತಿ ಹೇಳಿದೆ. ಅದಾಗ್ಯೂ, ವಾಹನ ಮಾಲಕರು ತಮ್ಮ ವಾಹನವನ್ನು ಬೇರೆಯವರಿಗೆ ನೀಡುವ ಮೊದಲು ಚಾಲಕನ ಡ್ರೈವಿಂಗ್ ಲೈಸೆನ್ಸ್ ಮಾನ್ಯವಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ.
ವಿಮಾ ಕ್ಲೇಮ್ ತಿರಸ್ಕೃತವಾದರೆ, ವಿಮಾ ಕಂಪನಿಯ ನಿರಾಕರಣಾ ಪತ್ರ, ಸರ್ವೇಯರ್ ವರದಿ ಹಾಗೂ ಪಾಲಿಸಿಯ ಷರತ್ತುಗಳನ್ನು ಪರಿಶೀಲಿಸಬೇಕು. ಕಂಪನಿ ನೀಡಿರುವ ಕಾರಣವು ನಿಜವಾಗಿಯೂ ಪಾಲಿಸಿ ಷರತ್ತುಗಳ ಉಲ್ಲಂಘನೆಗೆ ಸಂಬಂಧಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ.