ತಿರುವನಂತಪುರ, ಡಿ. 24: ರೈಲ್ವೇ ಹಳಿಯಲ್ಲಿ ನಿಂತಿದ್ದ ಆಟೋ ರಿಕ್ಷಾವನ್ನು ಗಮನಿಸಿದ ಲೋಕೋ ಪೈಲಟ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು (Vande Bharat Express) ಕೂಡಲೇ ನಿಲ್ಲಿಸಿದ್ದಾರೆ. ಇದರಿಂದ ಸಂಭಾವ್ಯ ಅಪಘಾತ ತಪ್ಪಿದೆ. ಮಂಗಳವಾರ (ಡಿಸೆಂಬರ್ 23) ರಾತ್ರಿ ಕೇರಳದ ತಿರುವನಂತಪುರಂ (Thiruvananthapuram) ಜಿಲ್ಲೆಯ ಅಕತುಮುರಿ ಹಾಲ್ಟ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ಕಾಸರಗೋಡಿನಿಂದ ತಿರುವನಂತಪುರಕ್ಕೆ ಚಲಿಸುತ್ತಿದ್ದ ರೈಲು ರಾತ್ರಿ 10.10ರ ಸುಮಾರಿಗೆ ವರ್ಕಲಾ-ಕಡಕ್ಕಾವೂರು ವಿಭಾಗದ ಅಕತುಮುರಿ ಹಾಲ್ಟ್ ಸಮೀಪಿಸುತ್ತಿದ್ದಾಗ ಲೋಕೋ ಪೈಲಟ್ ಆಟೋ ರಿಕ್ಷಾವೊಂದು ಡೌನ್ ಲೈನ್ ಅನ್ನು ಉಲ್ಲಂಘಿಸುತ್ತಿರುವುದನ್ನು ಗಮನಿಸಿದರು. ಪೈಲಟ್ ತಕ್ಷಣ ತುರ್ತು ಬ್ರೇಕ್ ಹಾಕಿ ಹೈಸ್ಪೀಡ್ ರೈಲನ್ನು ನಿಲ್ಲಿಸಿದರು. ಈ ಮೂಲಕ ಸಂಭಾವ್ಯ ಅಪಘಾತವನ್ನು ತಪ್ಪಿಸಿದರು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ನೋಡಿದಾಗ ಆಟೋ ರಿಕ್ಷಾದಲ್ಲಿ ಚಾಲಕ ಅಥವಾ ಪ್ರಯಾಣಿಕರು ಇರಲಿಲ್ಲ. ಚಾಲಕನ ನಿಯಂತ್ರಣ ತಪ್ಪಿ ಎರಡನೇ ಪ್ಲಾಟ್ಫಾರ್ಮ್ಗೆ ಡಿಕ್ಕಿ ಹೊಡೆದ ನಂತರ ಆಟೋರಿಕ್ಷಾ ಹಳಿಗೆ ಉರುಳಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಆರ್ಪಿಎಫ್ ಪೊಲೀಸರು ಆಟೋರಿಕ್ಷಾ ಚಾಲಕ ಸುಧಿಯನ್ನು ವಶಕ್ಕೆ ಪಡೆದಿದ್ದಾರೆ. ಆ ಸಮಯದಲ್ಲಿ ಆತ ಮದ್ಯದ ಅಮಲಿನಲ್ಲಿದ್ದನೆಂದು ಶಂಕಿಸಲಾಗಿದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ. ಹಳಿಯಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಂಡ ನಂತರ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ರಾತ್ರಿ 11.15ಕ್ಕೆ ತನ್ನ ಪ್ರಯಾಣವನ್ನು ಪುನರಾರಂಭಿಸಿತು. ವಿಳಂಬದ ಹೊರತಾಗಿಯೂ, ರೈಲು ರಾತ್ರಿ 11.50ಕ್ಕೆ ತಿರುವನಂತಪುರದ ಸೆಂಟ್ರಲ್ ತಲುಪಿತು. ಪ್ರಯಾಣಿಕರು, ರೈಲ್ವೆ ಸಿಬ್ಬಂದಿ ಅಥವಾ ಸಾರ್ವಜನಿಕರಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ.
ಆ ವಿಭಾಗದಲ್ಲಿ ರೈಲು ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಮರು ಸ್ಥಾಪಿಸಲಾಯಿತು. ಲೋಕೋ ಪೈಲಟ್ನ ಸಕಾಲಿಕ ಕ್ರಮವು ದೊಡ್ಡ ಅಪಘಾತವನ್ನು ತಪ್ಪಿಸಲು ಸಹಾಯ ಮಾಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ವಂದೇ ಭಾರತ್ ಡಿಕ್ಕಿಯಾಗಿ ಮೃತಪಟ್ಟಿದ್ದ ಯುವಕರು
ವಂದೇ ಭಾರತ್ ರೈಲು ಡಿಕ್ಕಿಯಾಗಿ ಮೂವರು ಯುವಕರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಇತ್ತೀಚೆಗಷ್ಟೇ ಬಿಹಾರದ ಪುರ್ನಿಯಾದಲ್ಲಿ ಸಂಭವಿಸಿತ್ತು. ಯುವಕರು ಕಸ್ಬಾ ರೈಲ್ವೆ ಕ್ರಾಸಿಂಗ್ ಬಳಿ ದಾಟಲು ಪ್ರಯತ್ನಿಸುತ್ತಿದ್ದಾಗ ಈ ದುರ್ಘಟನೆ ನಡೆದಿತ್ತು. ಜೋಗ್ಬಾನಿಯಿಂದ ಪಾಟಲಿಪುತ್ರಕ್ಕೆ ಚಲಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕಸ್ಬಾ ರೈಲ್ವೆ ಕ್ರಾಸಿಂಗ್ ಬಳಿ ಹಾದುಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಮುಂಜಾನೆ 5 ಗಂಟೆ ಸುಮಾರಿಗೆ ಯುವಕರು ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಅವರಿಗೆ ಡಿಕ್ಕಿ ಹೊಡೆದಿತ್ತು.
ಸಿಗರೇಟ್ ಖರೀದಿಸಲು ರೈಲ್ವೆ ಕ್ರಾಸಿಂಗ್ನಲ್ಲಿ 10 ನಿಮಿಷಗಳ ಕಾಲ ರೈಲು ನಿಲ್ಲಿಸಿದ ಲೋಕೋ ಪೈಲಟ್
ಮೋಡ ಕವಿದ ವಾತಾವರಣ ಹಾಗೂ ಕತ್ತಲೆ ಇದ್ದ ಕಾರಣ, ಯುವಕರಿಗೆ ರೈಲನ್ನು ಸರಿಯಾಗಿ ಗಮನಿಸಲು ಸಾಧ್ಯವಾಗಲಿಲ್ಲ ಎಂದು ಪೂರ್ಣಿಯಾ ಜಂಕ್ಷನ್ನ ನಿಲ್ದಾಣ ವ್ಯವಸ್ಥಾಪಕ ಮುನ್ನಾ ಕುಮಾರ್ ಹೇಳಿದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ತಕ್ಷಣವೇ ಪೂರ್ಣಿಯಾದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಮೊದಲೇ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರು.