ನವದೆಹಲಿ: ಈ ವರ್ಷ ದೇಶದಲ್ಲಿ ನೈಋತ್ಯ ಮಾನ್ಸೂನ್ ಮೇಲೆ (monsoon) 'ಎಲ್ ನಿನೋ' (El Nino) ಪ್ರಭಾವ ಬೀರುವ ಸಾಧ್ಯತೆಯಿದೆ. ದೇಶವು ಅಧಿಕ ತಾಪಮಾನ ಮತ್ತು ಮಳೆ ಕೊರತೆಯನ್ನು ಎದುರಿಸಬೇಕಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಕಳೆದ 3 ವರ್ಷಗಳಲ್ಲಿ ದೇಶ ಕಂಡ ಅತ್ಯಂತ ಕಡಿಮೆ ಮಳೆಯ ಮಟ್ಟವನ್ನು ತಲುಪಲಿದೆ ಎಂದು ತಿಳಿದು ಬಂದಿದೆ. ಸ್ತುತ ಪೆಸಿಫಿಕ್ ಸಾಗರದಲ್ಲಿ 'ಲಾ ನಿನಾ' ಸ್ಥಿತಿ ಇದ್ದರೂ, ಜುಲೈ ವೇಳೆಗೆ ಅದು 'ಎಲ್ ನಿನೋ ' ಆಗಿ ಬದಲಾಗುವ ಸಾಧ್ಯತೆ ಇದೆ. ಈ ಬದಲಾವಣೆಯು ಮುಂಗಾರು ಮಳೆಯ ಮೇಲೆ ನೇರ ಪರಿಣಾಮ ಬೀರಲಿದ್ದು, ವಿಶೇಷವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಮಳೆ ಗಣನೀಯವಾಗಿ ಕಡಿಮೆಯಾಗಬಹುದು.
ವಾರ್ಷಿಕ ಮಳೆಯ ಶೇ. 75 ರಷ್ಟು ಪೂರೈಸುವ ನೈಋತ್ಯ ಮಾನ್ಸೂನ್ ಈಬಾರಿ ಎಲ್ ನಿನೋ ಪ್ರಭಾವದಿಂದಾಗಿ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಮಳೆಯ ಪ್ರಮಾಣವು ದೀರ್ಘಾವಧಿಯ ಸರಾಸರಿಗಿಂತ ಶೇ. 92 ಅಥವಾ ಅದಕ್ಕಿಂತ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ. ವಾಯುವ್ಯ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದ್ದರೂ, ಮಧ್ಯ ಭಾರತದ ಪ್ರಮುಖ ಕೃಷಿ ಪ್ರದೇಶಗಳಲ್ಲಿ ತೀವ್ರ ಮಳೆ ಕೊರತೆ ಮತ್ತು ಬರಗಾಲದಂತಹ ಪರಿಸ್ಥಿತಿ ಉಂಟಾಗುವ ಅಪಾಯವಿದೆ.
ಮಳೆ ಕೊರತೆಯನ್ನು ಎದುರಿಸಲು ಕಡಿಮೆ ನೀರು ಬಳಸುವ ಮತ್ತು ಹವಾಮಾನ ವೈಪರೀತ್ಯಕ್ಕೆ ತಡೆದುಕೊಳ್ಳುವ ಬೆಳೆಗಳನ್ನು ಬೆಳೆಯಲು ರೈತರಿಗೆ ಸಲಹೆ ನೀಡಲಾಗಿದೆ. ಅಲ್ಲದೆ, ನೀರಿನ ಸಮರ್ಪಕ ನಿರ್ವಹಣೆ ಮತ್ತು ವಿದ್ಯುತ್ ನಿರ್ವಹಣೆಗೆ ಸರ್ಕಾರಗಳು ಸಜ್ಜಾಗಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಬೆಳೆಗಳಿಗೆ ಅತ್ಯಂತ ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ದೀರ್ಘಕಾಲದ ಶುಷ್ಕ ಹವಾಮಾನ ಕಂಡುಬಂದರೆ ಕೃಷಿ ಚಟುವಟಿಕೆಗಳಿಗೆ ಭಾರಿ ಹೊಡೆತ ಬೀಳಲಿದೆ.
ಕೇರಳದಲ್ಲಿ ಮುಂಗಾರು ವಿಳಂಬ ಸಾಧ್ಯತೆ; ಜೂನ್ 11 ರ ನಂತರ ಮಳೆಯಾಗುವ ನಿರೀಕ್ಷೆ
ಆಸ್ಟ್ರೇಲಿಯಾದ ಹವಾಮಾನ ಬ್ಯೂರೋ (BOM) ಇತ್ತೀಚೆಗೆ ಜೂನ್ ಆರಂಭದಲ್ಲಿ ಎಲ್ ನಿನೋ ಪರಿಸ್ಥಿತಿಗಳು ಹೊರಹೊಮ್ಮಬಹುದು ಎಂದು ಅಂದಾಜಿಸಿದೆ, ಆದರೆ ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರವು ಪೆಸಿಫಿಕ್ ಮಹಾಸಾಗರದಲ್ಲಿ ತಾಪಮಾನ ಏರಿಕೆಯು ಎಲ್ ನಿನೋ ಹಂತವನ್ನು ಪ್ರವೇಶಿಸಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಬಲಗೊಳ್ಳುವ ನಿರೀಕ್ಷೆಯಿದೆ ಎಂದು ವರದಿ ಮಾಡಿದೆ.