ಅಮರಾವತಿ, ಆ. 15: 80ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂದರ್ಭದಲ್ಲಿ ಆಂಧ್ರ ಪ್ರದೇಶದ ದತ್ತಿ ಸಚಿವ ಅನಮ್ ರಾಮನಾರಾಯಣ ರೆಡ್ಡಿ (Anam Ramanarayana Reddy) ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಹಠಾತ್ತನೆ ಕುಸಿದುಬಿದ್ದ ಘಟನೆ ತಿರುಪತಿ (Tirupati) ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದಿದೆ. ಒಂದು ಗಂಟೆಗೂ ಹೆಚ್ಚು ಕಾಲ ವೇದಿಕೆಯ ಮೇಲೆ ನಿಂತು ಮಾತನಾಡುತ್ತಿದ್ದ ಸಚಿವರು ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡಂತೆ ಕಂಡುಬಂದು ಒಂದು ಬದಿಗೆ ಒರಗಿ ಕುಸಿದು ಬಿದ್ದರು.
ಈ ಅನಿರೀಕ್ಷಿತ ಘಟನೆ ವೇಳೆ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಜಾಗರೂಕರಾಗಿದ್ದರು. ಅವರು ತಕ್ಷಣವೇ ಅವರ ಸಹಾಯಕ್ಕೆ ಧಾವಿಸಿದರು. ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಕೂಡಲೇ ಸಚಿವರನ್ನು ಬೀಳದಂತೆ ಹಿಡಿದುಕೊಂಡರು. ಸ್ಥಳದಲ್ಲೇ ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತು. ಅವರ ರಕ್ತದೊತ್ತಡದಲ್ಲಿ ಹಠಾತ್ ಕುಸಿತ ಕಂಡುಬಂದಿದ್ದರಿಂದ ಅವರು ದುರ್ಬಲರಾಗಿ ಸಮತೋಲನ ಕಳೆದುಕೊಂಡರು ಎಂದು ಸಚಿವರನ್ನು ಪರೀಕ್ಷಿಸಿದ ವೈದ್ಯರು ಹೇಳಿದ್ದಾರೆ. ವೈದ್ಯಕೀಯ ಸಿಬ್ಬಂದಿ ತಕ್ಷಣ ಅವರಿಗೆ ಚಿಕಿತ್ಸೆ ನೀಡಿ ಅವರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದರು. ಸಚಿವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಘಟನೆಯಿಂದಾಗಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸ್ವಲ್ಪ ಸಮಯ ವಿರಾಮ ಬಿದ್ದಿತು.
ವೇದಿಕೆಯಲ್ಲಿ ಕುಸಿದು ಬಿದ್ದ ಸಚಿವ ಅನಮ್ ರಾಮನಾರಾಯಣ ರೆಡ್ಡಿ:
ತಿರುಪತಿ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.
"ಭಾರತದ ಕನಸುಗಳನ್ನು ನನಸಾಗಿಸಲು GEN Zಗಳು ಸಹಾಯ ಮಾಡುತ್ತಾರೆಂಬ ನಂಬಿಕೆ ಇದೆ"; ಪ್ರಧಾನಿ ಮೋದಿ
ಅಂದಹಾಗೆ, ಅನಮ್ ರಾಮನಾರಾಯಣ ರೆಡ್ಡಿ ಆಂಧ್ರ ಪ್ರದೇಶದ ದತ್ತಿ ಸಚಿವರಾಗಿದ್ದು, ಆತ್ಮಕೂರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಅವರಿಗೆ 74 ವರ್ಷ ವಯಸ್ಸಾಗಿದ್ದು, 1983ರಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ)ದೊಂದಿಗೆ ತಮ್ಮ ಚುನಾವಣಾ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಎನ್.ಟಿ. ರಾಮರಾವ್ ಅವರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಕಾಂಗ್ರೆಸ್ ಸೇರಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಪುರಸಭೆ ಆಡಳಿತ ಮತ್ತು ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳನ್ನು ನಿವರ್ಹಿಸಿದರು.
ಕಾಂಗ್ರೆಸ್ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದೊಂದಿಗೆ ಕೆಲಸ ಮಾಡಿದ ನಂತರ, ಅವರು 2024ರಲ್ಲಿ ಟಿಡಿಪಿಗೆ ಮರಳಿದರು. ಆತ್ಮಕೂರ್ ವಿಧಾನಸಭಾ ಸ್ಥಾನವನ್ನು ಗೆದ್ದು, ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.