ತಿರುವನಂತಪುರ, ಮಾ. 3: 1980 ಮತ್ತು 1990 ರ ದಶಕಗಳಲ್ಲಿ ಭಾರತೀಯ ರಾಜಕೀಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಕೇಂದ್ರದ ಮಾಜಿ ಸಚಿವ ಕೆ.ಪಿ. ಉಣ್ಣಿಕೃಷ್ಣನ್ ಮಂಗಳವಾರ (ಮಾರ್ಚ್ 3) ಮುಂಜಾನೆ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೇರಳದ ಕೋಝಿಕ್ಕೋಡ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವಡಕಾರದಿಂದ ಸತತ ಆರು ಬಾರಿ ಲೋಕಸಭೆಗೆ ಆಯ್ಕೆಯಾದ ಅವರು, 1989-90ರ ಅವಧಿಯಲ್ಲಿ ವಿ.ಪಿ. ಸಿಂಗ್ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಾರಿಗೆ ಮತ್ತು ಸಂವಹನ ಖಾತೆಗಳನ್ನು ಅವರು ಹೊಂದಿದ್ದರು.
ಅವರು ಸಚಿವರಾಗಿದ್ದ ಅವಧಿಯಲ್ಲಿ, ಕೊಲ್ಲಿ ಯುದ್ಧದ ಸಮಯದಲ್ಲಿ ಭಾರತೀಯರ ಸ್ಥಳಾಂತರಿಸುವಿಕೆಯ ಮೇಲ್ವಿಚಾರಣೆಯನ್ನು ಸಮರ್ಥವಾಗಿ ನಡೆಸಿದ್ದರು. ಪತ್ರಕರ್ತರಾಗಿ ತಮ್ಮ ವೃತ್ತಿಪರ ಜೀವನವನ್ನು ಪ್ರಾರಂಭಿಸಿದ ಉಣ್ಣಿಕೃಷ್ಣನ್, 1971ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ವಡಕಾರದಿಂದ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು.
ಕಾಂಗ್ರೆಸ್ ಪ್ರತಿಭಟನೆ ವೇಳೆ ಕೇರಳ ಸಚಿವೆಗೆ ಗಾಯ; ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡನೆ
ನಂತರ ಅವರು 1977, 1980, 1984, 1989 ಮತ್ತು 1991ರಲ್ಲಿ ಲೋಕಸಭೆಯಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದರು. 1981 ಮತ್ತು 1884ರ ನಡುವೆ, ಅವರು ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕರಾಗಿ ಸೇವೆ ಸಲ್ಲಿಸಿದರು. 1980ರಿಂದ 1982ರವರೆಗೆ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯರಾಗಿದ್ದರು.
ವಿ.ಕೆ. ಕೃಷ್ಣ ಮೆನನ್ ಅವರ ಆಪ್ತಮಿತ್ರರಾಗಿದ್ದ ಉಣ್ಣಿಕೃಷ್ಣನ್ ಒಂದು ಕಾಲದಲ್ಲಿ ಇಂದಿರಾ ಗಾಂಧಿ ಅವರ ವಿಶ್ವಾಸಾರ್ಹ ಆಪ್ತರಾಗಿದ್ದರು. ಆದರೆ ನಂತರ ರಾಜಕೀಯ ಭಿನ್ನಾಭಿಪ್ರಾಯಗಳ ಕಾರಣ ಅವರು ಕಾಂಗ್ರೆಸ್ ತೊರೆದರು. 1995ರಲ್ಲಿ ಕಾಂಗ್ರೆಸ್ಗೆ ಮರಳುವ ಮೊದಲು ಅವರು ಕಾಂಗ್ರೆಸ್ (ಯು) ಮತ್ತು ಕಾಂಗ್ರೆಸ್ (ಎಸ್)ನಲ್ಲಿ ಸಕ್ರಿಯರಾಗಿದ್ದರು.
ಇನ್ಮುಂದೆ ಕೇರಳ ಅಲ್ಲ ಕೇರಳಂ: ರಾಜ್ಯದ ಮರುನಾಮಕರಣ ನಿರ್ಧಾರಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ
1936ರ ಸೆಪ್ಟೆಂಬರ್ 20ರಂದು ಜನಿಸಿದ ಅವರು ಚೆನ್ನೈನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಚೆನ್ನೈನಲ್ಲೇ ಕಾನೂನು ಪದವಿಯನ್ನು ಪೂರ್ಣಗೊಳಿಸಿದರು. ಈ ಅವಧಿಯಲ್ಲಿ, ಅವರು ಸಮಾಜವಾದಿ ಪಕ್ಷ ಮತ್ತು ನಂತರ ಪ್ರಜಾ ಸಮಾಜವಾದಿ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. 1960ರ ದಶಕದಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. 1962ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾದರು.