ಚಂಡೀಗಢ, ಸೆ. 14: ಹರಿಯಾಣದ ಗುರುಗ್ರಾಮ್ನ (Gurugram) ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್ಗೆ ಕಾರಿನಿಂದ ಡಿಕ್ಕಿ ಹೊಡೆದ ಪ್ರಕರಣದ (Hit-and-Run Case) ವಿವಾದ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ಕಲ್ಯಾಣ್ ಬೈನ್ಸ್ಲಾ (Kalyan Bainsla) ತಾನು ಉದ್ದೇಶಪೂರ್ವಕವಾಗಿ ಮಹಿಳೆಯ ಬೈಕ್ಗೆ ಡಿಕ್ಕಿ ಹೊಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ಬೈಕ್ನಲ್ಲಿ ಮಹಿಳೆ ಇದ್ದಾಳೆ ಎಂಬುದೂ ತನಗೆ ತಿಳಿದಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಘಟನೆಗೂ ಮುನ್ನ ಎರಡು ಬೈಕ್ಗಳು ತಮ್ಮ ಕಾರನ್ನು ಹಲವು ಬಾರಿ ಹಿಂದಿಕ್ಕಿ, ಬಳಿಕ ನಿಧಾನವಾಗಿ ಕಾರಿನ ಮುಂದೆ ಬರುತ್ತಿದ್ದವು ಎಂದು ಬೈನ್ಸ್ಲಾ ಆರೋಪಿಸಿದ್ದಾರೆ. ಬೈಕ್ ಸವಾರರು ಕಾರಿನ ವೇಗ ಮತ್ತು ಚಲನವಲನಕ್ಕೆ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ತಾವು ನಿಧಾನವಾಗಿ ಚಲಿಸುವಂತೆ ಹೇಳಿದ್ದೆ ಎಂದು ಅವರು ತಿಳಿಸಿದ್ದಾರೆ.
ಕಲ್ಯಾಣ್ ಬೈನ್ಸ್ಲಾ ಹೇಳಿಕೆ:
ಡಿಕ್ಕಿ ಉದ್ದೇಶಪೂರ್ವಕವಾಗಿರಲಿಲ್ಲ, ಅಪಘಾತದಿಂದ ಸಂಭವಿಸಿದೆ ಎಂದು ಹೇಳಿರುವ ಬೈನ್ಸ್ಲಾ, ಘಟನೆಯ ಸಂಪೂರ್ಣ ಸತ್ಯವನ್ನು ಸಿಸಿಟಿವಿ ದೃಶ್ಯಗಳು ಸ್ಪಷ್ಟಪಡಿಸಬಹುದು ಎಂದು ಹೇಳಿದ್ದಾರೆ. ಅಪಘಾತ ಸಂಭವಿಸಿರುವುದರಲ್ಲಿ ತಪ್ಪಾಗಿದೆ ಎಂದು ಒಪ್ಪಿಕೊಂಡರೂ, ಮಹಿಳೆಯನ್ನು ಗುರಿಯಾಗಿಸಿಕೊಂಡು ಕಾರು ಚಲಾಯಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಇತ್ತ ಮಹಿಳಾ ಬೈಕರ್ ಸಿಯಾ, ಕಾರ್ ತಮ್ಮನ್ನು ಹಿಂಬಾಲಿಸಿ, ಅಪಾಯಕಾರಿ ರೀತಿಯಲ್ಲಿ ಸಮೀಪಕ್ಕೆ ಬಂದು ಬಳಿಕ ಬೈಕ್ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಅವರು ಬೈಕ್ನಿಂದ ರಸ್ತೆಗೆ ಬಿದ್ದಿದ್ದು, ಬೈಕ್ ಹಲವು ಮೀಟರ್ಗಳಷ್ಟು ದೂರ ಎಳೆದೊಯ್ಯಲ್ಪಟ್ಟಿದೆ. ಘಟನೆ ಬಳಿಕ ಕಾರು ನಿಲ್ಲದೆ ತೆರಳಿದೆ ಎಂದು ಅವರು ಹೇಳಿದ್ದಾರೆ.
ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಡಿಯೊ ಆಧರಿಸಿ ಗುರುಗ್ರಾಮ್ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಸೆಕ್ಟರ್-56 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಯನ್ನು ಪತ್ತೆಹಚ್ಚಲು ಮೂರು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದ್ದು, ಆತನಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೃದಯ ವಿದ್ರಾವಕ ಘಟನೆ: ಚಲಿಸುವ ರೈಲಿನಿಂದ ಕೈತಪ್ಪಿ ಬಿದ್ದು 9 ತಿಂಗಳ ಕಂದಮ್ಮನ ದಾರುಣ ಅಂತ್ಯ
ಪ್ರಕರಣದಲ್ಲಿ ಸಿಯಾ ಅವರ ಆರೋಪ ಮತ್ತು ಬೈನ್ಸ್ಲಾ ನೀಡಿರುವ ಹೇಳಿಕೆಗಳಲ್ಲಿ ಸ್ಪಷ್ಟ ವ್ಯತ್ಯಾಸವಿದೆ. ಸಿಸಿಟಿವಿ ದೃಶ್ಯಗಳು ಮತ್ತು ಬೈಕ್ಗಳಲ್ಲಿ ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ದಾಖಲಾಗಿರುವ ವಿಡಿಯೋಗಳು ಡಿಕ್ಕಿ ಹೇಗೆ ಸಂಭವಿಸಿತು ಎಂಬುದನ್ನು ನಿರ್ಧರಿಸಲು ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆಯಿದೆ.