ದಿಸ್ಪುರ: ಹಿಮಂತ ಬಿಸ್ವಾ ಶರ್ಮಾ (Himanta Sarma) ಅವರು ಇಂದು (ಮೇ 12) ಅಸ್ಸಾಂನ ಮುಖ್ಯಮಂತ್ರಿಯಾಗಿ (Assam CM) ಸತತ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ನಾಯಕರಾಗಿ ಅವರು ಮತ್ತೊಮ್ಮೆ ಸಿಎಂ ಹುದ್ದೆಗೇರಿದ್ದಾರೆ. ಎನ್ಡಿಎ ಮಿತ್ರಪಕ್ಷಗಳ ನಾಯಕರು ಸೇರಿದಂತೆ ನಾಲ್ವರು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಲ್ಲಿ ರಾಮೇಶ್ವರ್ ತೇಲಿ, ಅತುಲ್ ಬೋರಾ (ಎಜಿಪಿ), ಚರಣ್ ಬೊರೊ (ಬಿಪಿಎಫ್) ಮತ್ತು ಅಜಂತಾ ನಿಯೋಗ್ ಸೇರಿದ್ದಾರೆ.
ಖಾನಪರ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಜೊತೆಗೆ ಎನ್ಡಿಎ ಅಧಿಕಾರದಲ್ಲಿರುವ ರಾಜ್ಯಗಳ ಸಿಎಂ ಹಾಗೂ ಡಿಸಿಎಂಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಡಿಯೋ ನೋಡಿ
ಇದು ಮುಖ್ಯಮಂತ್ರಿಯಾಗಿ ಅವರ ಸತತ ಎರಡನೇ ಅವಧಿಯಾಗಲಿದ್ದು, ಶರ್ಮಾ ಮೊದಲ ಬಾರಿಗೆ 2001ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು ಮತ್ತು ಅದರ ಬಳಿಕ ಒಂದೇ ಚುನಾವಣೆಯಲ್ಲೂ ಸೋತಿಲ್ಲ. ಪದಗ್ರಹಣದ ಬಳಿಕ ಸಂಪುಟ ಸಭೆ ನಡೆಯಲಿದೆ ಎಂದು ಶರ್ಮಾ ಈ ಮೊದಲೇ ತಿಳಿಸಿದ್ದರು. ಕಾಂಗ್ರೆಸ್ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರ ಮೂರು ಅವಧಿಗಳಲ್ಲೂ (2001-16) ಹಿಮಂತ ಶರ್ಮಾ ಅವರು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಗೋಗೊಯಿ ಅವರ ಮೂರನೇ ಅವಧಿಯಲ್ಲಿ ನಾಯಕತ್ವದ ವಿಚಾರವಾಗಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು.
2015ರಲ್ಲಿ ಶರ್ಮಾ ಹಾಗೂ ಅವರಿಗೆ ಆಪ್ತರಾಗಿದ್ದ ಹಲವು ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದರು. ಮುಂದಿನ ವರ್ಷ ಬಿಜೆಪಿ ರಾಜ್ಯದಲ್ಲಿ ತನ್ನ ಮೊದಲ ಸರ್ಕಾರ ರಚಿಸಿತ್ತು. ಶರ್ಮಾ ರಾಜಕೀಯ ತಂತ್ರಜ್ಞನಾಗಿ ವ್ಯಾಪಕವಾಗಿ ಗುರುತಿಸಿಕೊಂಡಿದ್ದಾರೆ. ಈ ವರ್ಷದ ಅಸ್ಸಾಂ ಚುನಾವಣೆಯಲ್ಲೂ ಅವರ ಬಲಿಷ್ಠ ನಾಯಕತ್ವ ಮತ್ತೊಮ್ಮೆ ಪ್ರದರ್ಶನ ಕಂಡಿದ್ದು, ಎನ್ಡಿಎ 126 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದಿದೆ.