Hit and run Case: ಮತ್ತೊಂದು ಭೀಕರ ಹಿಟ್ ಆಂಡ್ ರನ್ ಕೇಸ್; ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದು ನಾಲ್ವರು ಪಾದಚಾರಿಗಳು ಬಲಿ
ಮತ್ತೊಂದು ಹಿಟ್ ಆಂಡ್ ರನ್ ಪ್ರಕರಣ ದೇಶವನ್ನೇ ಬೆಚ್ಚಿಸಿದೆ. ಡೆಹ್ರಾಡೂನ್ನ ರಾಜ್ಪುರ ರಸ್ತೆಯಲ್ಲಿರುವ ಸಾಯಿ ದೇವಸ್ಥಾನದ ಬಳಿ ವೇಗವಾಗಿ ಬಂದ ಐಷಾರಾಮಿ ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪಾದಚಾರಿಗಳು ಸಾವನ್ನಪ್ಪಿದ್ದು, ದ್ವಿಚಕ್ರ ವಾಹನ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಡೆಹ್ರಾಡೂನ್: ಐಷಾರಾಮಿ ಮರ್ಸಿಡಿಸ್ ಕಾರು ಡಿಕ್ಕಿ(Hit and run Case) ಹೊಡೆದ ಪರಿಣಾಮ ನಾಲ್ವರು ಪಾದಚಾರಿಗಳು ಸಾವನ್ನಪ್ಪಿದ್ದು, ದ್ವಿಚಕ್ರ ವಾಹನ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ಡೆಹ್ರಾಡೂನ್ನಲ್ಲಿ ನಡೆದಿದೆ. ರಾಜ್ಪುರ ರಸ್ತೆಯಲ್ಲಿರುವ ಸಾಯಿ ದೇವಸ್ಥಾನದ ಬಳಿ ಚಂಡೀಗಢ ನಂಬರ್ ಪ್ಲೇಟ್ ಹೊಂದಿದ್ದ ಮರ್ಸಿಡಿಸ್ ಕಾರು(Mercedes Car) ಅತಿ ವೇಗವಾಗಿ ಮತ್ತು ಅಪಾಯಕಾರಿಯಾಗಿ ಚಲಿಸಿ ನಾಲ್ವರು ಕಾರ್ಮಿಕರ ಮೇಲೆ ಹರಿದಿದೆ. ಅಲ್ಲದೇ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಇನ್ನು ಮೃತರನ್ನು ಉತ್ತರ ಪ್ರದೇಶದ ಅಯೋಧ್ಯೆಯ ನಿವಾಸಿಗಳಾದ ಮನ್ಷರಾಮ್ (30) ಮತ್ತು ರಂಜಿತ್ (35) ಎಂದು ಗುರುತಿಸಲಾಗಿದೆ. ಆದರೆ ಇನ್ನಿಬ್ಬರು ಮೃತರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಹಾರ್ದೋಯ್ ಮೂಲದ ಧನಿರಾಮ್ ಮತ್ತು ಬಿಹಾರದ ಸೀತಾಮರ್ಹಿಯ ಮೊಹಮ್ಮದ್ ಶಕೀಬ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಉತ್ತರಾಖಂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಂದ ಅವರನ್ನು ಸರ್ಕಾರಿ ಡೂನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು.
ಅಪಘಾತ ಸ್ಥಳಕ್ಕೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ದೌಡಾಯಿಸಿದ್ದು, ಗಾಯಾಳುಗಳಿಬ್ಬರ ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಕಾರ್ಮಿಕರ ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದೆ. ಇನ್ನು ಎಸ್ಕೇಪ್ ಆಗಿರುವ ಕಾರು ಚಾಲಕನಿಗಾಗಿ ನಾವು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಇಂತಹದ್ದೇ ಒಂದು ಘಟನೆ ನವೆಂಬರ್ 12 ರಂದು, ಡೆಹ್ರಾಡೂನ್ನಲ್ಲಿ ಬೆಳಗಿನ ಜಾವ 1.30 ರ ಸುಮಾರಿಗೆ ಅತಿ ವೇಗದಲ್ಲಿ ಬಂದ ಇನ್ನೋವಾ ಕಾರು ಹರಿದು ಆರು ಜನ ಸ್ಥಳದಲ್ಲೇ ಬಲಿಯಾಗಿದ್ದರು. ಪ್ರತಿ ವರ್ಷ, ಡೆಹ್ರಾಡೂನ್ನಲ್ಲಿ 1,000 ಕ್ಕೂ ಹೆಚ್ಚು ರಸ್ತೆ ಅಪಘಾತಗಳು ವರದಿಯಾಗುತ್ತಿವೆ.
ಈ ಸುದ್ದಿಯನ್ನೂ ಓದಿ: Hit And Run: ಮಂಡ್ಯದಲ್ಲಿ ಹಿಟ್ ಆ್ಯಂಡ್ ರನ್, ಇಬ್ಬರು ಪಾದಚಾರಿಗಳ ಬಲಿ
ಉಡುಪಿ ಬಳಿ ಹಿಟ್ ಆ್ಯಂಡ್ ರನ್, ಬೈಕ್ ಸವಾರ ಸಾವು
ರಾಷ್ಟ್ರೀಯ ಹೆದ್ದಾರಿ 66ರ ಮೂಲೂರು ಬಳಿ ಅಪರಿಚಿತ ವಾಹನವೊಂದು (Hit and Run) ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ (Road Accident) ಪರಿಣಾಮ 29 ವರ್ಷದ ಯುವಕ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಪ್ರತೀಶ್ ಪ್ರಸಾದ್ ಎಂದು ಗುರುತಿಸಲಾಗಿದ್ದು, ಗಾಯಾಳು ನಿಹಾಲ್ ವಿಲ್ಸನ್ (29) ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ರಾತ್ರಿ ಉಡುಪಿಯ (Udupi news) ಕರಾವಳಿ ಜಿಲ್ಲೆಯ ಕಾಪುವಿನಿಂದ ಪಡುಬಿದ್ರಿಯ ಕಡೆಗೆ ಪ್ರಯಾಣಿಸುತ್ತಿದ್ದಾಗ ಅಪರಿಚಿತ ವಾಹನವೊಂದು ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು.
ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಿಸದೇ ಪ್ರತೀಶ್ ಸಾವನ್ನಪ್ಪಿದ್ದಾರೆ. ಮೂಳೆ ಮುರಿತ ಸೇರಿದಂತೆ ಹಲವು ಗಾಯಗಳಿಂದ ಬಳಲುತ್ತಿದ್ದ ನಿಹಾಲ್ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿಟ್ ಆ್ಯಂಡ್ ರನ್ ಮಾಡಿ ಪರಾರಿಯಾದ ವಾಹನವನ್ನು ಗುರುತಿಸಲು ಪೊಲೀಸರು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಇನ್ನೂ ಯಾವುದೇ ನಿರ್ದಿಷ್ಟ ಪುರಾವೆಗಳು ಕಂಡುಬಂದಿಲ್ಲ ಎಂದು ಅವರು ಹೇಳಿದರು. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.