ಚಂಡೀಗಢ, ಸೆ. 14: ಹರಿಯಾಣದ (Haryana) ಗುರುಗ್ರಾಮದಲ್ಲಿ ತನ್ನ ಸ್ನೇಹಿತನ ಮಾರುತಿ ಸಿಯಾಜ್ ಕಾರಿನಿಂದ ಮಹಿಳಾ ಬೈಕರ್ ಒಬ್ಬರಿಗೆ ಡಿಕ್ಕಿ ಹೊಡೆದ ಆರೋಪ ಎದುರಿಸುತ್ತಿರುವ ಕಲ್ಯಾಣ್ ಬೈನ್ಸ್ಲಾ (Kalyan Bainsla) ಇನ್ಸ್ಟಾಗ್ರಾಮ್ನಲ್ಲಿ ತನ್ನನ್ನು ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಮತ್ತು ಭಾರತೀಯ ರಗ್ಬಿ ತಂಡದ ಸದಸ್ಯ ಎಂದು ಗುರುತಿಸಿಕೊಂಡಿದ್ದಾನೆ. ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್ ಸಿಯಾ (ಶಿವಾನಿ ಚೌಹಾಣ್) ಅವರನ್ನು ಬೆನ್ನಟ್ಟಿ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾದ ಹಿಟ್-ಆ್ಯಂಡ್-ರನ್ ಪ್ರಕರಣದಲ್ಲಿ (Hit-and-Run Case) ಈತ ಪ್ರಮುಖ ಆರೋಪಿ ಎನಿಸಿಕೊಂಡಿದ್ದಾನೆ.
ಸೋಷಿಯಲ್ ಮೀಡಿಯಾದ ಪ್ರೊಫೈಲ್ ಫೋಟೊದಲ್ಲಿ ಆರೋಪಿಯು ತನ್ನ ತೋಳುಗಳ ಪ್ರದರ್ಶನ ಮಾಡಿರುವುದನ್ನು ತೋರಿಸಲಾಗಿದೆ. ಅಮೆಚೂರ್ ಒಲಿಂಪಿಯಾ ಇಂಡಿಯಾ ಎಂಬ ದೇಹದಾರ್ಢ್ಯ ಪಂದ್ಯಾವಳಿಯ ವಿಜೇತನೆಂದು ಹೇಳಿಕೊಂಡಿದ್ದಾನೆ. ಬೈನ್ಸ್ಲಾ ಇನ್ಸ್ಟಾಗ್ರಾಮ್ನಲ್ಲಿ ನಿಯಮಿತವಾಗಿ ಪೋಸ್ಟ್ ಮಾಡುದ್ದಾನೆ. ಹೆಚ್ಚಿನ ಪೋಸ್ಟ್ಗಳು ಆತ ವ್ಯಾಯಾಮ ಮಾಡುವುದನ್ನು ತೋರಿಸಲಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಆತನಿಗೆ ಹಲವು ಫಾಲೋವರ್ಸ್ ಇದ್ದಾರೆ.
ಭಾನುವಾರ (ಸೆಪೆಂಬರ್ 13) ರಾತ್ರಿ ಮಹಿಳಾ ಬೈಕರ್ ಸಿಯಾ ಕಾರಿನಲ್ಲಿದ್ದವರು ತನಗೆ ಕಿರುಕುಳ ನೀಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತನ್ನ ಪಾಡಿಗೆ ತಾನು ಹೋಗುತ್ತಿದ್ದರೆ, ಇದ್ದಕ್ಕಿದ್ದಂತೆ ಕಾರು ಬಲಕ್ಕೆ ತಿರುಗಿ, ಆಕೆಗೆ ಡಿಕ್ಕಿ ಹೊಡೆದು, ವೇಗವಾಗಿ ಹೊರಟು ಹೋಗಿದೆ. ಡಿಕ್ಕಿಯ ರಭಸಕ್ಕೆ ಸಿಯಾ ರಸ್ತೆಗೆ ಬಿದ್ದಿದ್ದಾರೆ. ಈ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಲ್ಲಿದೆ ವಿಡಿಯೊ:
ಸಿಯಾ ತನ್ನ ಎಪ್ರಿಲಿಯಾ RS 457 ಸ್ಪೋರ್ಟ್ಸ್ ಬೈಕ್ನಲ್ಲಿ ಸವಾರಿ ಮಾಡುತ್ತಿದ್ದರು. ಅಪಘಾತದಲ್ಲಿ ಆ ಬೈಕ್ ಕೂಡ ಹಾನಿಗೊಳಗಾಗಿತ್ತು. ಈ ದೃಶ್ಯವು ಆಕೆಯ ಬೈಕ್ನಲ್ಲಿ ಅಳವಡಿಸಲಾಗಿದ್ದ ಆ್ಯಕ್ಷನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಯಾ ಸ್ನೇಹಿತ ಕಾರನ್ನು ಬೆನ್ನಟ್ಟಿ ನಿಲ್ಲಿಸಲು ಪ್ರಯತ್ನಿಸಿದರೂ ಕಲ್ಯಾಣ್ ಪರಾರಿಯಾಗಿದ್ದಾನೆ. ವೈರಲ್ ಆದ ವಿಡಿಯೊವನ್ನು ಗಮನಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ವಾಯುಪಡೆ ಮಾಜಿ ಯೋಧನ ಮೇಲೆ ಹಲ್ಲೆ
“ಸೆಪ್ಟೆಂಬರ್ 14ರಂದು, ನಮ್ಮ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ (ಸಾಮಾಜಿಕ ಮಾಧ್ಯಮ ಕಣ್ಗಾವಲು ಘಟಕ) ಕಾರೊಂದು ಹಿಂದಿನಿಂದ ಮಹಿಳಾ ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆಯುವ ವಿಡಿಯೊವನ್ನು ಪತ್ತೆಹಚ್ಚಿದೆ. ಈ ಘಟನೆಯು ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಸಂಭವಿಸಿದೆ. ಗುರುಗ್ರಾಮ ಪೊಲೀಸರು ಸಂತ್ರಸ್ತ ಮಹಿಳೆಯನ್ನು ಸಂಪರ್ಕಿಸಿದ್ದು, ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡು, ಗುರುಗ್ರಾಮದ ಸೆಕ್ಟರ್ 56 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ” ಎಂದು ಸಹಾಯಕ ಪೊಲೀಸ್ ಕಮಿಷನರ್ (ACP) ಅಭಿಲಾಷ್ ಜೋಶಿ ತಿಳಿಸಿದ್ದಾರೆ.
ಇನ್ನು ಘಟನೆ ನಡೆದ ಸಮಯದಲ್ಲಿ ಕಾರಿನ ಮಾಲಕರು ವಾಹನದಲ್ಲಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ತಾನು ಕಾರನ್ನು ಚಲಾಯಿಸುತ್ತಿರಲಿಲ್ಲ ಎಂದು ಹರಿಯಾಣದ ಪಲ್ವಾಲ್ ನಿವಾಸಿ ಮನೀಶ್ ಸ್ಪಷ್ಟಪಡಿಸಿದ್ದಾರೆ. ಅವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಸ್ಸಾಂನಲ್ಲಿ ಕರ್ತವ್ಯದಲ್ಲಿರುವುದಾಗಿ ತಿಳಿಸಿದರು.