ಪಟನಾ, ಏ. 14: ಬಿಜೆಪಿಯು ಮಂಗಳವಾರ (ಏಪ್ರಿಲ್ 14) ಸಾಮ್ರಾಟ್ ಚೌಧರಿ (Samrat Choudhary) ಅವರನ್ನು ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ (Bihar CM) ಆಯ್ಕೆ ಮಾಡಿದೆ. ಇದರೊಂದಿಗೆ ಅವರು ರಾಜ್ಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಪಕ್ಷದ ಮೊದಲ ನಾಯಕ ಎನ್ನುವ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾದ ನಂತರ ಹಾಗೂ ನಂತರ ಅವರು ಮುಖ್ಯಮಂತ್ರಿಯಾಗಿ ರಾಜೀನಾಮೆ ನೀಡಿದ ಬಳಿಕ ಹಲವು ದಿನಗಳಿಂದ ನಡೆಯುತ್ತಿದ್ದ ಊಹಾಪೋಹ ಈ ಮೂಲಕ ಅಂತ್ಯ ಕಂಡಿದೆ.
57 ವರ್ಷದ ಸಾಮ್ರಾಟ್ ಚೌಧರಿ ಪ್ರಸ್ತುತ ಉಪಮುಖ್ಯಮಂತ್ರಿ ಮತ್ತು ತಾರಾಪುರದ ಬಿಜೆಪಿ ಶಾಸಕ. ಹೊಸ ಸಂಪುಟ ಪುನರಚನೆಯ ಭಾಗವಾಗಿ ಅವರು ಬುಧವಾರ (ಏಪ್ರಿಲ್15) ಪಟನಾದ ಲೋಕ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ನಿತೀಶ್ ಕುಮಾರ್ ಅವರ ರಾಜೀನಾಮೆಗೂ ಮುನ್ನವೇ, ಸಾಮ್ರಾಟ್ ಚೌಧರಿ ಪ್ರಮುಖ ಒಬಿಸಿ ನಾಯಕನಾಗಿ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯಗಳಲ್ಲಿ ಚರ್ಚೆಯಾಗುತ್ತಿತ್ತು.
ಬಿಹಾರ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆ:
ಈ ಚರ್ಚೆ ಕೊನೆಗೆ ಒಮ್ಮತದ ತೀರ್ಮಾನಕ್ಕೆ ಬಂತು. ಆ ಸಭೆಯಲ್ಲಿ ಉಪಮುಖ್ಯಮಂತ್ರಿ ವಿಜಯ ಸಿನ್ಹಾ ಜತೆಗೆ ಹಿರಿಯ ಬಿಜೆಪಿ ನಾಯಕರಾದ ಮಂಗಳ್ ಪಾಂಡೆ, ದಿಲೀಪ್ ಜೈಸ್ವಾಲ್ ಮತ್ತು ರೇಣು ದೇವಿ ಮತ್ತಿತರರು ಸಾಮ್ರಾಟ್ ಚೌಧರಿ ಅವರ ಹೆಸರನ್ನು ಬಿಜೆಪಿ ವಿಧಾನಸಭಾ ಪಕ್ಷದ ನಾಯಕನಾಗಿ ಅಧಿಕೃತವಾಗಿ ಪ್ರಸ್ತಾಪಿಸಿದರು. ಈ ಪ್ರಸ್ತಾವವನ್ನು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅನುಮೋದಿಸಿದರು.
ಬಿಹಾರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ; MLC ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಎಂ ನಿತೀಶ್ ಕುಮಾರ್
ಮಂಗಳವಾರ ಮುಂಜಾನೆ, ಬಿಜೆಪಿ ಸಂಸದೀಯ ಮಂಡಳಿಯು ಶಾಸಕಾಂಗ ಪಕ್ಷದ ನಾಯಕನ ಚುನಾವಣೆಗೆ ಕೇಂದ್ರ ವೀಕ್ಷಕರಾಗಿ ನೇಮಕಗೊಂಡ ಶಿವರಾಜ್ ಸಿಂಗ್ ಚೌಹಾಣ್, ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಸಾಮ್ರಾಟ್ ಚೌಧರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ತಮ್ಮ ಪದೋನ್ನತಿಯ ನಂತರ, ಸಾಮ್ರಾಟ್ ಚೌಧರಿ ಬಿಜೆಪಿ ತಮ್ಮ ಮೇಲೆ ಇಟ್ಟಿದ್ದ ನಂಬಿಕೆಗೆ ಧನ್ಯವಾದ ಅರ್ಪಿಸಿದರು. ನಿತೀಶ್ ಕುಮಾರ್ ಅವರ ಉತ್ತಮ ಆಡಳಿತ ಮಾದರಿಯು ಹೊಸ ಬಿಜೆಪಿ ಸರ್ಕಾರಕ್ಕೆ ಸ್ಫೂರ್ತಿಯಾಗಲಿದೆ ಎಂದು ಹೇಳಿದರು.
ಇದು ಕೇವಲ ಹುದ್ದೆಯಲ್ಲ, ಬಿಹಾರದ ಜನರಿಗೆ ಸೇವೆ ಸಲ್ಲಿಸಲು, ಅವರ ನಂಬಿಕೆ ಮತ್ತು ಕನಸುಗಳನ್ನು ನನಸಾಗಿಸಲು ಸಿಕ್ಕ ಒಂದು ಅವಕಾಶ. ಸಂಪೂರ್ಣ ಸಮರ್ಪಣೆ, ಬದ್ಧತೆ ಮತ್ತು ಸಮಗ್ರತೆಯಿಂದ ಎಲ್ಲರ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ನಾನು ಪ್ರತಿಜ್ಞೆ ಮಾಡುತ್ತೇನೆ ಎಂದು ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
ನಿಮ್ಮ ಮಾರ್ಗದರ್ಶನದಲ್ಲಿ ಬಿಹಾರ ಅಭಿವೃದ್ಧಿಯತ್ತ ಸ್ಥಿರವಾಗಿ ಮುಂದುವರಿಯುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ನಿಮ್ಮ ಅತ್ಯಂತ ಯಶಸ್ವಿ ಅಧಿಕಾರಾವಧಿ ಮತ್ತು ಉತ್ತಮ ಆಡಳಿತದ ಮಾದರಿ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ನಿತೀಶ್ ಕುಮಾರ್ ಅವರಿಗೆ ಬರೆದ ಸಂದೇಶದಲ್ಲಿ ತಿಳಿಸಿದ್ದಾರೆ.
ಅಂದಹಾಗೆ, ಸಾಮ್ರಾಟ್ ಚೌಧರಿ ರಾಜಕೀಯ ಕುಟುಂಬಕ್ಕೆ ಸೇರಿದವರಾಗಿದ್ದು, ಇದು ಅವರ ಸಾರ್ವಜನಿಕ ಜೀವನಕ್ಕೆ ಆರಂಭಿಕ ಪ್ರವೇಶಕ್ಕೆ ಕಾರಣವಾಯಿತು. ಅವರ ತಂದೆ ಶಕುನಿ ಚೌಧರಿ ತಾರಾಪುರದಿಂದ ಆರು ಬಾರಿ ಶಾಸಕರಾಗಿದ್ದರು. ಅವರ ತಾಯಿ ಪಾರ್ವತಿ ದೇವಿ ಕೂಡ ಶಾಸಕಿಯಾಗಿದ್ದರು.