ನವದೆಹಲಿ, ಡಿ.6: ಇಂಡಿಗೋ ವಿಮಾನ ಸಂಸ್ಥೆಯ (Indigo flight) ಎಡವಟ್ಟಿನಿಂದ ನೂರಾರು ವಿಮಾನಗಳು ರದ್ದಾಗಿ ಪ್ರಯಾಣಿಕರು ಸಂಕಷ್ಟಕ್ಕೆ ಒಳಲಾಗಿದ್ದಾರೆ. ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ವಿಮಾನಗಳ ಹಾರಾಟ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರಿಗೆ ಬಾಕಿ ಹಣ ಪಾವತಿಸಲು (refund) ಇಂಡಿಗೋ ಏರ್ಲೈನ್ಸ್ಗೆ (Indigo Airlines) ಖಡಕ್ ಸಂದೇಶವನ್ನು ಕೇಂದ್ರ ವಿಮಾನಯಾನ ಸಚಿವಾಲಯವು ನೀಡಿದೆ. ನಾಳೆ ರಾತ್ರಿ 8 ಗಂಟೆಯೊಳಗೆ ಬಾಕಿ ಹಣವನ್ನು ಮರುಪಾವತಿಸುವಂತೆ ಸೂಚನೆ ನೀಡಿದೆ.
ಒಂದು ವೇಳೆ ಮರುಪಾವತಿ ಮಾಡದಿದ್ದರೆ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಇದರ ಜತೆಗೆ ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ಇತರ ವಿಮಾನಗಳ ಟಿಕೆಟ್ ದರ ಯದ್ವಾತದ್ವಾ ಹೆಚ್ಚಳ ಮಾಡಲಾಗಿದೆ. ಅದಕ್ಕಾಗಿ ಈ ಬಿಕ್ಕಟ್ಟು ಪರಿಹಾರ ಆಗುವವರೆಗೆ ವಿಮಾನಯಾನ ಸಚಿವಾಲಯ ಎಲ್ಲಾ ಏರ್ಲೈನ್ಸ್ಗಳಿಗೆ ಅನ್ವಯವಾಗುವಂತೆ ಏಕರೂಪ ದರ ನಿಗದಿ ಮಾಡಿದೆ.
ಕೇಂದ್ರ ವಿಮಾನಯಾನ ಸಚಿವಾಲಯವು ಎಲ್ಲಾ ಏರ್ಲೈನ್ಸ್ಗಳಿಗೆ ಅನ್ವಯವಾಗುವಂತೆ ಬೆಲೆಯೊಂದನ್ನು ನಿಗದಿ ಮಾಡಿದೆ. 500-1000 ಕಿ.ಮೀ.ವರೆಗೆ ಗರಿಷ್ಠ 12 ಸಾವಿರ ರೂಪಾಯಿ ದರ ಇರಬೇಕು. ಹಾಗೂ 1000-1500 ಕಿ.ಮೀ.ವರೆಗೆ ಗರಿಷ್ಠ 15 ಸಾವಿರ ರೂಪಾಯಿ ದರ ಇರಬೇಕು ಎಂದು ಹೇಳಿದೆ. ಈ ನಿಗದಿಪಡಿಸಿದ ಟಿಕೆಟ್ ದರಕ್ಕಿಂತ ಹೆಚ್ಚಿನ ಹಣ ಪಡೆಯದಂತೆ ಸೂಚನೆ. ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಇದರ ಜತೆಗೆ ಸಚಿವಾಲಯವು ಇಂಡಿಗೋ ಏರ್ಲೈನ್ಸ್ ವಿಮಾನಗಳ ಹಾರಾಟ ರದ್ದಾಗಿರುವುದಕ್ಕೆ ಕಾರಣ ಏನು ಎಂಬುದನ್ನು ತಿಳಿಸಿ ಎಂದು ಇಂಡಿಗೋ ಏರ್ಲೈನ್ಸ್ ಅಧಿಕಾರಿಗಳಿಗೆ ಸೂಚನೆಯನ್ನು ಕೂಡ ನೀಡಿದೆ. ಸಂಜೆ 6 ಗಂಟೆಗೆ ಸಚಿವಾಲಯಕ್ಕೆ ಬರುವಂತೆ ಅಧಿಕಾರಿಗಳಿಗೆ ಸಮನ್ಸ್ ನೀಡಲಾಗಿತ್ತು. ಇದೀಗ ಇಂಡಿಗೋ ವಿಮಾನ ಸಂಸ್ಥೆಯ ಅಧಿಕಾರಿಗಳು ವಿಮಾನಯಾನ ಸಚಿವಾಲಯಕ್ಕೆ ಭೇಟಿ ನೀಡಿದ್ದಾರೆ.
ವಿಮಾನಯಾನ ಸಚಿವಾಲಯ ಟ್ವೀಟ್
ರದ್ದಾದ ವಿಮಾನಗಳ ಪ್ರಯಾಣಿಕರಿಗೆ ಹಣ ವಾಪಸ್ ಮಾಡುವುದರ ಜತೆಗೆ ಲಗೇಜ್ ಹಾಗೂ ವಸ್ತುಗಳನ್ನು ಸುರಕ್ಷಿತವಾಗಿ ಪ್ರಯಾಣಿಕರಿಗೆ 48 ಗಂಟೆಯೊಳಗೆ ತಲುಪಿಸುವಂತೆ ಆದೇಶ ನೀಡಿದೆ. ಕಳೆದ ಐದು ದಿನಗಳಿಂದ ಇಂಡಿಗೋ ವಿಮಾನ ರದ್ದಾಗಿತ್ತು. ಹಾರಾಟ ರದ್ದಿನಿಂದ ಹಣ ನೀಡಿ ಟಿಕೆಟ್ ಖರೀದಿಸಿದ್ದ ಪ್ರಯಾಣಿಕರು ಪರದಾಡಿದ್ರು, ಹೀಗಾಗಿ ಬುಕ್ ಆಗಿದ್ದ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡವರಿಗೆ ಹಣ ವಾಪಸ್ ಆಗಿರಲಿಲ್ಲ. ಇದೀಗ ಈ ಗೊಂದಲಕ್ಕೆ ಸರ್ಕಾರ ಹಸ್ತಕ್ಷೇಪ ಮಾಡಿದ್ದು, ನಾಳೆ ರಾತ್ರಿ 8 ಗಂಟೆಯೊಳಗೆ ಹಣ ನೀಡುವಂತೆ. ಹಾಗೂ ಮರು ಬುಕ್ಕಿಂಗ್ ಮಾಡಿಕೊಳ್ಳುವವರಿಗೆ ಯಾವುದೇ ಶುಲ್ಕವಿಲ್ಲದೆ ಟಿಕೆಟ್ ಬುಕ್ ಮಾಡಿಕೊಡುವಂತೆ ಆದೇಶ ನೀಡಿದೆ.