ನವದೆಹಲಿ, ಜೂ. 8: ಇಸ್ರೇಲ್ (Israel) ಮತ್ತು ಇರಾನ್ (Iran) ನಡುವಿನ ಹೊಸದಾಗಿ ತೀವ್ರಗೊಂಡಿರುವ ಸೈನಿಕ ಘರ್ಷಣೆ ಹಿನ್ನೆಲೆಯಲ್ಲಿ ಭಾರತ ಸರ್ಕಾರ (Government of India) ತನ್ನ ನಾಗರಿಕರಿಗೆ ಇರಾನ್ಗೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಿದ್ದು, ಈಗಾಗಲೇ ಅಲ್ಲಿರುವ ಭಾರತೀಯರು ಲಭ್ಯವಿರುವ ಸಾರಿಗೆ ವ್ಯವಸ್ಥೆಗಳ ಮೂಲಕ ಶೀಘ್ರವಾಗಿ ದೇಶ ತೊರೆಯುವಂತೆ ಸೂಚಿಸಿದೆ. ಟೆಹರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ (ಜೂನ್ 8) ಹೊರಡಿಸಿದ ಪ್ರಕಟಣೆಯಲ್ಲಿ, ದೇಶದಲ್ಲಿನ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವುದರಿಂದ ಈ ಹಿಂದೆ ನೀಡಿದ್ದ ಎಚ್ಚರಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಲಾಗಿದೆ ಎಂದು ತಿಳಿಸಿದೆ.
"ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಲ್ಲ ಭಾರತೀಯ ನಾಗರಿಕರು ಇರಾನ್ಗೆ ಯಾವುದೇ ರೀತಿಯ ಪ್ರಯಾಣ ಕೈಗೊಳ್ಳಬಾರದು. ಪ್ರಸ್ತುತ ಇರಾನ್ನಲ್ಲಿರುವ ಭಾರತೀಯರು ಲಭ್ಯವಿರುವ ಸಾರಿಗೆ ವ್ಯವಸ್ಥೆಗಳ ಮೂಲಕ ದೇಶ ತೊರೆಯಬೇಕು" ಎಂದು ಭಾರತೀಯ ರಾಯಭಾರ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ರಾಯಭಾರ ಕಚೇರಿಯ ಪ್ರಕಟಣೆ:
ಇಸ್ರೇಲ್ ಮತ್ತು ಇರಾನ್ ನಡುವೆ ಸೋಮವಾರ ಮತ್ತೊಮ್ಮೆ ಕ್ಷಿಪಣಿ ಹಾಗೂ ವಾಯುದಾಳಿಗಳು ನಡೆದಿರುವ ಹಿನ್ನೆಲೆಯಲ್ಲಿ ಈ ಸೂಚನೆ ಹೊರಬಿದ್ದಿದೆ. ವರದಿಗಳ ಪ್ರಕಾರ, ಇಸ್ರೇಲ್ ಪಡೆಗಳು ಇರಾನ್ನ ಹಲವು ಪ್ರಮುಖ ಗುರಿಗಳ ಮೇಲೆ ದಾಳಿ ನಡೆಸಿದ್ದು, ದೇಶದ ನೈಋತ್ಯ ಭಾಗದಲ್ಲಿರುವ ಮಹ್ಶಹರ್ನ ಪೆಟ್ರೋಕೆಮಿಕಲ್ ಘಟಕ ಸೇರಿ ಹಲವು ಪ್ರದೇಶಗಳು ಗುರಿಯಾಗಿವೆ. ಇದಕ್ಕೆ ಪ್ರತಿಯಾಗಿ ಇರಾನ್, ಇಸ್ರೇಲ್ನ ಸೇನಾ ನೆಲೆಗಳು ಮತ್ತು ಭದ್ರತಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ.
ಅಮೆರಿಕದ ಓಹಿಯೋ ಉತ್ಸವದಲ್ಲಿ ಹರಿದ ನೆತ್ತರು; ಗುಂಡಿನ ದಾಳಿ ನಡೆಸಿದವರಿಗಾಗಿ ತೀವ್ರ ಶೋಧ
ಹಲವು ವಾರಗಳ ಕಾಲ ನಡೆದ ಯುದ್ಧದ ಬಳಿಕ ಏಪ್ರಿಲ್ನಲ್ಲಿ ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ಜಾರಿಯಾಗಿತ್ತು. ಆದರೆ ಇತ್ತೀಚಿನ ದಾಳಿಯನ್ನು ಆ ಕದನ ವಿರಾಮದ ಬಳಿಕ ಸಂಭವಿಸಿರುವ ಅತ್ಯಂತ ಗಂಭೀರ ಬೆಳವಣಿಗೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಮಧ್ಯಪ್ರಾಚ್ಯ ಪ್ರದೇಶದಲ್ಲಿ ಮತ್ತೊಮ್ಮೆ ಯುದ್ಧದ ಭೀತಿ ಹೆಚ್ಚುತ್ತಿರುವುದರಿಂದ ಹಲವು ದೇಶಗಳು ತಮ್ಮ ನಾಗರಿಕರಿಗೆ ಪ್ರಯಾಣ ಎಚ್ಚರಿಕೆಗಳನ್ನು ನೀಡುತ್ತಿವೆ.
ಇರಾನ್ನಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಯಾತ್ರಾರ್ಥಿಗಳು ಸೇರಿ ಸಾವಿರಾರು ಭಾರತೀಯರು ವಿವಿಧ ಕಾರಣಗಳಿಗೆ ವಾಸಿಸುತ್ತಿದ್ದಾರೆ. ಇವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದೆ. ಅಗತ್ಯವಿದ್ದಲ್ಲಿ ಭಾರತೀಯರ ಸ್ಥಳಾಂತರಕ್ಕಾಗಿ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ದೇಶ ತೊರೆಯುವಂತೆ ಸೂಚಿಸಿದ್ದೇಕೆ?
ಈ ವರ್ಷ ಆರಂಭದಿಂದಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಹಲವು ಬಾರಿ ಇರಾನ್ಗೆ ಸಂಬಂಧಿಸಿದ ಪ್ರಯಾಣ ಸಲಹೆಗಳನ್ನು ಹೊರಡಿಸಿತ್ತು. ಆದರೆ ಈ ಬಾರಿ ನೀಡಿರುವ ಸೂಚನೆ ಅತ್ಯಂತ ಕಠಿಣ ಸ್ವರೂಪದ್ದಾಗಿದ್ದು, ಕೇವಲ ಎಚ್ಚರಿಕೆ ವಹಿಸುವಂತೆ ಹೇಳುವುದಕ್ಕಿಂತಲೂ ಅಲ್ಲಿರುವ ಭಾರತೀಯರು ದೇಶ ತೊರೆಯುವಂತೆ ನೇರವಾಗಿ ಸೂಚಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ಹಿಡಿದಿದೆ.
ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಇರಾನ್ನಲ್ಲಿರುವ ಭಾರತೀಯರು ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಹಾಗೂ ಅಧಿಕೃತ ಸೂಚನೆಗಳನ್ನು ಪಾಲಿಸಲು ಸರ್ಕಾರ ಮನವಿ ಮಾಡಿದೆ.