ಚೆನ್ನೈ, ಮೇ 7: ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕವೂ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆ ಮುಂದುವರಿದಿದೆ. ಕೇವಲ 2 ವರ್ಷಗಳ ಹಿಂದೆ ಸ್ಥಾಪನೆಯಾದ ದಳಪತಿ ವಿಜಯ್ (Vijay) ಅವರ ಟಿವಿಕೆ (TVK) 107 ಸ್ಥಾನಗಳನ್ನು ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಸರ್ಕಾರ ರಚನೆಗೆ ಅಗತ್ಯವಾದ ಮ್ಯಾಜಿಕ್ ನಂಬರ್ 118ರ ಹೊಸ್ತಿಲಲ್ಲಿ ಎಡವಿ ಬಿದ್ದಿದ್ದು, ಮುಖ್ಯಮಂತ್ರಿಯಾಗುವ ವಿಜಯ್ ಕನಸಿಗೆ ತೊಡಕಾಗಿದೆ. ಶತಾಯ ಗತಾಯ ಸರ್ಕಾರ ರಚಿಸಲೇ ಬೆಂಕೆಂಬ ಪಣ ತೊಟ್ಟಿರುವ ಟಿವಿಕೆ ಅದಕ್ಕೆ ಬೇಕಾದ ಸಿದ್ಧತೆ ನಡೆಸುತ್ತಿದೆ. ಹೇಗಾದರೂ 11 ಶಾಸಕರ ಬೆಂಬಲ ಪಡೆಯಲೇಬೇಕೆಂಬ ಜಿದ್ದಿಗೆ ಬಿದ್ದಿದೆ. ಈ ಮಧ್ಯೆ ಕಾಂಗ್ರೆಸ್ ಟಿವಿಕೆಗೆ ಬೆಂಬಲ ಸೂಚಿಸಿ ರಂಗಕ್ಕೆ ಇಳಿದಿದ್ದು, ʼಇಂಡಿಯಾʼ ಒಕ್ಕೂಟ (INDIA bloc) ಒಡೆದು ನುಚ್ಚು ನೂರಾಗಿದೆ. ಈ ಮಧ್ಯೆ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿ ಸರ್ಕಾರ ರಚಿಸಿದರೆ ಎಲ್ಲ 107 ಶಾಸಕರು ರಾಜೀನಾಮೆ ನೀಡುವುದಾಗಿ ಟಿವಿಕೆ ಎಚ್ಚರಿಸಿದೆ.
ಡಿಎಂಕೆ ನೇತೃತ್ವದಲ್ಲಿ ʼಇಂಡಿಯಾʼ ಒಕ್ಕೂಟ ತಮಿಳುನಾಡಿನಲ್ಲಿ ಚುನಾವಣೆ ಎದುರಿಸಿದೆ. ಚುನಾವಣೆಗೆ ಮೊದಲೇ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿ ಮಾಡಿಕೊಂಡಿದ್ದವು. ಆದರೆ ಇದೀಗ ಡಿಎಂಕೆಯ ರಾಜಕೀಯ ಶತ್ರು ಟಿವಿಕೆ ಜತೆ ಕಾಂಗ್ರೆಸ್ ಕೈಜೋಡಿಸಲು ಮುಂದಾಗುವ ಮೂಲಕ ಇಂಡಿಯಾ ಒಕ್ಕೂಟವನ್ನು ಇಬ್ಬಾಗವಾಗಿಸಿದೆ.
ರಾಜೀನಾಮೆ ನೀಡಲು ಮುಂದಾದ ಟಿವಿಕೆ ಶಾಸಕರು:
ʼಇಂಡಿಯಾʼ ಒಕ್ಕೂಟ ಚೂರು ಚೂರು
ವಿಜಯ್ ಜತೆ ಕಾಂಗ್ರೆಸ್ ಕೈ ಜೋಡಿಸಿರುವುದಕ್ಕೆ ಡಿಎಂಕೆ ಅಸಮಾಧಾನಗೊಂಡಿದ್ದು ʼಇಂಡಿಯಾʼ ಒಕ್ಕೂಟವೇ ನಾಶವಾಗಿದೆ ಎಂದು ಘೋಷಿಸಿದೆ. ಆ ಮೂಲಕ ಕಾಂಗ್ರೆಸ್ ನಿರ್ಧಾರವನ್ನು ಬಹಿರಂಗವಾಗಿಯೇ ಖಂಡಿಸಿದೆ. 234 ಸಂಖ್ಯಾ ಬಲದ ತಮಿಳುನಾಡಿನಲ್ಲಿ ಕಾಂಗ್ರೆಸ್ 5 ಕಡೆ ಗೆದ್ದಿದ್ದು, ಸರ್ಕಾರ ರಚನೆಗೆ ಇನ್ನೂ 5 ಸೀಟ್ ಅಗತ್ಯ. ʼʼಇಂಡಿಯಾʼ ಒಕ್ಕೂಟ ನಾಶವಾಗಿದೆʼʼ ಎಂದು ಡಿಎಂಕೆ ಹಿರಿಯ ನಾಯಕ ಟಿ.ಕೆ.ಎಸ್. ಎಲನ್ಗೋವನ್ ತಿಳಿಸಿದ್ದಾರೆ. ದೀರ್ಘ ಕಾಲದ ಮೈತ್ರಿಗೆ ಕಾಂಗ್ರೆಸ್ ಮೋಸ ಮಾಡಿದ್ದಾಗಿ ಕಿಡಿ ಕಾರಿದ್ದಾರೆ.
ಬಹುಮತ ಸಾಬೀತುಪಡಿಸದೆ ವಿಜಯ್ ಸಿಎಂ ಆಗಲು ಸಾಧ್ಯವಿಲ್ಲ: ಕೋರ್ಟ್ ಮೊರೆ ಹೋಗುತ್ತಾ ಟಿವಿಕೆ?
ಇನ್ನು ಮೈತ್ರಿಯಲ್ಲಿರುವ ಎಡರಂಗ ಮತ್ತು ವಿಸಿಕೆ ಪಕ್ಷದ ನಾಯಕರು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರು ಎಂದೂ ಹೇಳಿದ್ದಾರೆ. ʼʼಎಡರಂಗದ ಪಕ್ಷಗಳಾದ ಸಿಪಿಐ, ಸಿಪಿಐ (ಎಂ) ಮತ್ತು ವಿಸಿಕೆಯ ನಾಯಕರು ಯಾವ ತೀರ್ಮಾನ ಬೇಕಾದರೂ ತೆಗೆದುಕೊಳ್ಳಬಹುದು. ಅವರು ಯಾವ ತೀರ್ಮಾನ ತೆಗೆದುಕೊಂಡರೂ ಬೆಂಬಲಿಸುತ್ತೇವೆ. ನಾವು ಯಾವುದಕ್ಕೂ ಒತ್ತಾಯಿಸುವುದಿಲ್ಲʼʼ ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಟಿವಿಕೆಯನ್ನು ಬೆಂಬಲಿಸುವ ಕಾಂಗ್ರೆಸ್ ತೀರ್ಮಾನವು ನಾಟಕೀಯ ಬೆಳವಣಿಗೆಗೆ ಕಾರಣವಾಗಿದ್ದು, ಇದು ರಾಷ್ಟ್ರ ಮಟ್ಟದಲ್ಲಿ ʼಇಂಡಿಯಾʼ ಒಕ್ಕೂಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಡಿಎಂಕೆಯ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ 5, ವಿಸಿಕೆ 2, ಸಿಪಿಐ 2, ಸಿಪಿಎಂ 2, ಐಯುಎಂಎಲ್ 2 ಮತ್ತು ಡಿಡಂಡಿಕೆ 1 ಸ್ಥಾನಗಳಲ್ಲಿ ಜಯ ಗಳಿಸಿದೆ. ಶುಕ್ರವಾರ (ಮೇ 8) ಎಡಪಕ್ಷಗಳು ಸಭೆ ಸೇರಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
2018ರಲ್ಲಿ ಯಡಿಯೂರಪ್ಪ ಎದುರಿಸಿದ ಸ್ಥಿತಿ ಈಗ ತಮಿಳುನಾಡಿನಲ್ಲಿ ದಳಪತಿ ವಿಜಯ್ಗೂ ಬಂತಾ?
ರಾಜೀನಾಮೆ ನೀಡಲು ಮುಂದಾದ ಟಿವಿಕೆಯ 107 ಶಾಸಕರು
ಇದೀಗ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ರಾಜ್ಯದಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ಸೇರಿ ಸರ್ಕಾರ ರಚಿಸಲು ಮುಂದಾದರೆ ಟಿವಿಕೆಯ ಎಲ್ಲ 107 ಶಾಸಕರು ರಾಜೀನಾಮೆ ನೀಡುವುದಾಗಿ ನಾಯಕರು ಎಚ್ಚರಿಸಿದ್ದಾರೆ. ಡಿಎಂಕೆ ಮತ್ತು ಎಐಡಿಎಂಕೆ ಸಭೆ ನಡೆಸಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ಬಂದಿದೆ. ಒಟ್ಟಿನಲ್ಲಿ ತಮಿಳುನಾಡು ರಾಜಕೀಯ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.