ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಬೆವರಿಳಿಸಿದ ಭಾರತ; ಅಸಂಬದ್ಧ ಹೇಳಿಕೆಗೆ ತರಾಟೆ

India Slams Pakistan: ಭಾರತದಲ್ಲಿನ ಮುಸ್ಲಿಂ ಧಾರ್ಮಿಕ ಸ್ಥಳಗಳಿಗೆ ಬೆದರಿಕೆ ಇದೆ ಎಂಬ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಹೇಳಿಕೆಯನ್ನು ಭಾರತವು ಅಸಂಬದ್ಧ ಹಾಗೂ ದ್ವೇಷ ಪೂರಿತ ರಾಜಕೀಯ ದಾಳಿ ಎಂದು ವಾಗ್ದಾಳಿ ನಡೆಸಿದೆ. ಪಾಕಿಸ್ತಾನದಲ್ಲೇ ಮಾನವ ಹಕ್ಕುಗಳ ದಾಖಲೆ ಅತ್ಯಂತ ಕಳಪೆಯಾಗಿದೆ ಎಂದು ರಣಧೀರ್ ಜೈಸ್ವಾಲ್ ವ್ಯಂಗ್ಯವಾಡಿದರು.

ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (ಸಂಗ್ರಹ ಚಿತ್ರ)

ನವದೆಹಲಿ, ಜೂ. 21: ಭಾರತದಲ್ಲಿನ ಮುಸ್ಲಿಂ ಧಾರ್ಮಿಕ ಸ್ಥಳಗಳಿಗೆ ಬೆದರಿಕೆ ಇದೆ ಎಂಬ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ (Asif Ali Zardari) ಅವರ ಹೇಳಿಕೆಯನ್ನು ಭಾರತವು ಅಸಂಬದ್ಧ ಹಾಗೂ ದ್ವೇಷದಿಂದ ಕೂಡಿದ ಉದ್ದೇಶಪೂರ್ವಕ ರಾಜಕೀಯ ದಾಳಿ ಎಂದು ತಿರಸ್ಕರಿಸಿದೆ. ಭಾರತದ ಬಗ್ಗೆ ಜರ್ದಾರಿ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, ನೆರೆಯ ರಾಷ್ಟ್ರದ ಆಂತರಿಕ ವಿಷಯಗಳ ಬಗ್ಗೆ ಮಾತನಾಡಲು ಪಾಕಿಸ್ತಾನಕ್ಕೆ (Pakistan) ಯಾವುದೇ ಅರ್ಹತೆ ಇಲ್ಲ ಎಂದು ಮತ್ತೊಮ್ಮೆ ನೆನಪಿಸಿದೆ.

“ಪಾಕಿಸ್ತಾನದ ಅಧ್ಯಕ್ಷರು ಮಾಡಿದ ಅನಗತ್ಯ ಹೇಳಿಕೆಗಳನ್ನು ಭಾರತ ಸ್ಪಷ್ಟವಾಗಿ ತಿರಸ್ಕರಿಸುತ್ತದೆ. ಯಾವುದೇ ಸಂದರ್ಭದಲ್ಲಿ ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಅವರಿಗೆ ಯಾವುದೇ ಅರ್ಹತೆ ಇಲ್ಲ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಪಾಕಿಸ್ತಾನದಲ್ಲೇ ಮಾನವ ಹಕ್ಕುಗಳ ದಾಖಲೆ ಅತ್ಯಂತ ಕಳಪೆ ಎಂದು ಜೈಸ್ವಾಲ್ ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿಕೆಗೆ ಭಾರತ ತಿರುಗೇಟು:



ಪಾಕಿಸ್ತಾನವು ಸ್ವತಃ ಅಗಾಧ ಮಾನವ ಹಕ್ಕುಗಳ ಉಲ್ಲಂಘನೆ ದಾಖಲೆ ಹೊಂದಿದೆ ಎಂಬ ವಿಷಯವನ್ನು ಜೈಸ್ವಾಲ್ ಎತ್ತಿ ಹಿಡಿದರು. ʼʼಪಾಕಿಸ್ತಾನದ ಸ್ವಂತ ಮಾನವ ಹಕ್ಕುಗಳ ದಾಖಲೆ ಅತ್ಯಂತ ಕಳಪೆಯಾಗಿರುವುದು ಜಗತ್ತಿನಾದ್ಯಂತ ಚರ್ಚೆಯ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ಈ ಹೇಳಿಕೆಗಳು ಅಸಂಬದ್ಧವಾಗಿವೆ. ವಿವಿಧ ಧರ್ಮಗಳ ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿ, ಕಿರುಕುಳ ನೀಡಿರುವ ಪಾಕಿಸ್ತಾನದ ದೀರ್ಘ ಇತಿಹಾಸವು ಕುಖ್ಯಾತವಾಗಿದೆʼʼ ಎಂದು ಅವರು ಹೇಳಿದ್ದಾರೆ.

ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪಾಕಿಸ್ತಾನ: ಪಿಐಬಿ ಫ್ಯಾಕ್ಟ್ ಚೆಕ್‌ನಿಂದ ಮಾಹಿತಿ ಬಹಿರಂಗ

ʼʼಹಲವು ವರ್ಷಗಳಿಂದ ಪಾಕಿಸ್ತಾನದಲ್ಲಿ ಸರ್ಕಾರೇತರ ಸಂಸ್ಥೆಗಳು (NGO) ವಿಶೇಷವಾಗಿ ಹಿಂದೂಗಳು ಮತ್ತು ಅಹ್ಮದಿಯಾ ಸಮುದಾಯದ ವಿರುದ್ಧ ನಡೆಯುತ್ತಿರುವ ಧರ್ಮ ಆಧಾರಿತ ಹಿಂಸಾಚಾರವನ್ನು ಎತ್ತಿ ತೋರಿಸಿವೆ. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಧರ್ಮನಿಂದನೆ ಆರೋಪಗಳಿಗೆ ಸಂಬಂಧಿಸಿದ ಹಿಂಸಾಚಾರವು ಸರ್ಕಾರದ ಕಿರುಕುಳ ಹಾಗೂ ತಾರತಮ್ಯಪೂರ್ಣ ಕಾನೂನುಗಳಿಂದ ಮತ್ತಷ್ಟು ಉತ್ತೇಜನ ಪಡೆದು, ಪಾಕಿಸ್ತಾನದಲ್ಲಿ ಇನ್ನೂ ನಿರಂತರವಾಗಿ ಮುಂದುವರಿಯುತ್ತಿದೆ ಎಂಬುದನ್ನು ಮಾನವ ಹಕ್ಕು ಗಮನಿಸಿದೆʼʼ ಎಂದಿದ್ದಾರೆ.

ಉದ್ದೇಶಪೂರ್ವಕ ರಾಜಕೀಯ ದಾಳಿ

ಜರ್ದಾರಿ ಅವರ ಹೇಳಿಕೆಗಳು ದೇಶದ ಧರ್ಮಾಂಧತೆ ಮತ್ತು ದ್ವೇಷ ನೀತಿಗಳಿಂದ ರಾಜಕೀಯವಾಗಿ ನಡೆಸಲ್ಪಡುತ್ತಿರುವಂತೆ ಕಂಡುಬರುತ್ತವೆ ಎಂದು ಜೈಸ್ವಾಲ್ ಹೇಳಿದ್ದಾರೆ. ಅಧ್ಯಕ್ಷರ ಈ ಹೇಳಿಕೆಗಳನ್ನು, ಪಾಕಿಸ್ತಾನದ ಧರ್ಮಾಂಧತೆ ಮತ್ತು ದ್ವೇಷದಿಂದ ಕೂಡಿದ ರಾಷ್ಟ್ರೀಯ ನೀತಿಗಳಿಂದ ಪ್ರೇರಿತವಾದ ಉದ್ದೇಶಪೂರ್ವಕ ರಾಜಕೀಯ ದಾಳಿ ಎಂದೇ ಪರಿಗಣಿಸಬಹುದು ಎಂದು ಅವರು ತಿಳಿಸಿದ್ದಾರೆ.

ವಾರಾಣಸಿಯ ಐತಿಹಾಸಿಕ ಮಸೀದಿ ಮಸ್ಜಿದ್ ಗಂಜ್ ಶಹೀದಾ ಹಾಗೂ ಭಾರತದ ಇತರ ಮುಸ್ಲಿಂ ಧಾರ್ಮಿಕ ಸ್ಥಳಗಳಿಗೆ ಧ್ವಂಸ ಮಾಡುವ ಬೆದರಿಕೆ ಇದೆ ಎಂಬ ಆರೋಪದ ಕುರಿತು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಡಿದ್ದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಈ ಉತ್ತರ ನೀಡಲಾಗಿದೆ. ಭಾರತವು, ಇಂತಹ ವಿಷಯಗಳು ತನ್ನ ಆಂತರಿಕ ವಿಚಾರಗಳಾಗಿದ್ದು, ಅವುಗಳಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡಬಾರದು ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಈ ರೀತಿಯ ವಿಷಯಗಳ ಬಗ್ಗೆ ಪಾಕಿಸ್ತಾನದಿಂದ ಬಂದಿರುವ ಹೇಳಿಕೆಗಳನ್ನು ಭಾರತವು ಹಲವು ಬಾರಿ ತಿರಸ್ಕರಿಸಿದೆ.