ದೆಹಲಿ, ಸೆ. 6: ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋದ (ISRO) ಖಾಸಗೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ ಎನ್ನುವ ವದಂತಿ ಹಲವು ದಿನಗಳಿಂದ ಹರಿದಾಡುತ್ತಿದ್ದು, ಇದನ್ನು ಅಧಕಾರಿಗಳು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ʼʼಇಸ್ರೋವನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಮತ್ತು ಪ್ರಾಮುಖ್ಯತೆಯನ್ನು ಕಡಿತಗೊಳಿಸಲಾಗುತ್ತಿದೆ ಎನ್ನುವ ಮಾತು ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಆದರೆ ಇದು ವದಂತಿ ಮಾತ್ರ. ಅಂತಹ ಯಾವುದೇ ಪ್ರಸ್ತಾವ ನಮ್ಮ ಮುಂದಿಲ್ಲʼʼ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇಸ್ರೋದ ಪ್ರಮುಖ ಕೇಂದ್ರಗಳ ನೌಕರರ ಸಂಘಟನೆಗಳು ಒಗ್ಗೂಡಿ ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ.ವಿ. ನಾರಾಯಣನ್ ಅವರಿಗೆ ಸುದೀರ್ಘ ಪತ್ರ ಬರೆದು ಸಂಸ್ಥೆಯ ಭವಿಷ್ಯದ ಪಾತ್ರ ಹಾಗೂ ಹಕ್ಕುಗಳ ಕುರಿತು ಅಧಿಕೃತ ಲಿಖಿತ ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿದ್ದವು.
ಇಸ್ರೋ ಎಕ್ಸ್ ಪೋಸ್ಟ್:
ಇಸ್ರೋ ಸ್ಪಷ್ಟನೆಯಲ್ಲಿ ಏನಿದೆ?
"ಖಾಸಗೀಕರಣಗೊಳ್ಳುವ ವದಂತಿ ಸಂಪೂರ್ಣ ಆಧಾರರಹಿತ. ಇಸ್ರೋವನ್ನು ಖಾಸಗೀಕರಣಗೊಳಿಸುವುದಿಲ್ಲ ಅಥವಾ ಅದರ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ" ಎಂಬುದಾಗಿ ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
ಭೂ ವೀಕ್ಷಣಾ ಉಪಗ್ರಹವನ್ನು ಹೊತ್ತೊಯ್ದ GSLV F17 ರಾಕೆಟ್ ಯಶಸ್ವಿಯಾಗಿ ಉಡಾಯಿಸಿದ ಇಸ್ರೋ
"ಇಸ್ರೋ ಬಾಹ್ಯಾಕಾಶ ಸಂಶೋಧನೆ-ತಂತ್ರಜ್ಞಾನ ಅಭಿವೃದ್ಧಿ, ರಾಷ್ಟ್ರೀಯ-ಕಾರ್ಯತಂತ್ರದ ಕಾರ್ಯಾಚರಣೆ, ಬಾಹ್ಯಾಕಾಶ ವಿಜ್ಞಾನ ಮುಂತಾದ ರಂಗಗಳಲ್ಲಿ ಭಾರತದ ಪ್ರಮುಖ ಸಂಸ್ಥೆಯಾಗಿ ಮುಂದುವರಿಯಲಿದೆ" ಎಂದು ಒತ್ತಿ ಹೇಳಿದೆ. ʼʼಬಾಹ್ಯಾಕಾಶದಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆ ಇಸ್ರೋ ಪಾತ್ರವನ್ನು ಕಡಿಮೆ ಮಾಡುವುದಿಲ್ಲ. ಬದಲಾಗಿ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯಗಳನ್ನು ವಿಸ್ತರಿಸಲು ನೇರವಾಗುತ್ತದೆʼʼ ಎಂದು ಸ್ಪಷ್ಟಪಡಿಸಿದೆ.
2035ರ ವೇಳೆಗೆ ಭಾರತೀಯ ಅಂತರಿಕ್ಷ ಸ್ಟೇಷನ್ ಸ್ಥಾಪಿಸುವುದು, 2040ರ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳುಹಿಸುವುದು, ಮುಂದಿನ ಪೀಳಿಗೆಯ ಮತ್ತು ಮರುಬಳಕೆ ಮಾಡಬಹುದಾದ ಉಡಾವಣಾ ವ್ಯವಸ್ಥೆಗಳನ್ನು ನಿರ್ಮಿಸುವುದು, ಚಂದ್ರ ಮತ್ತು ಇತರ ಗ್ರಹಗಳ ದೀರ್ಘಕಾಲೀನ ಅನ್ವೇಷಣೆಯನ್ನು ಮುಂದುವರಿಸುವುದು ಮತ್ತು ಭಾರತವನ್ನು ಜಾಗತಿಕವಾಗಿ ಪ್ರಮುಖ ಬಾಹ್ಯಾಕಾಶ ಶಕ್ತಿಯಾಗಿಸುವ ಗುರಿಯನ್ನು ಹೊಂದಿರುವ ಇಸ್ರೋದ ಬಾಹ್ಯಾಕಾಶ ವಿಷನ್ 2047ಕ್ಕೆ ಖಆಸಗಿ ಸಹಭಾಗಿತ್ವ ಪ್ರಮುಖವಾಗಲಿದೆ ಎಂದು ಇಸ್ರೋ ಹೇಳಿದೆ.
ವದಂತಿಗೆ ಕಾರನವಾಗಿದ್ದೇನು?
ಸಣ್ಣ ಉಪಗ್ರಹ ಉಡಾವಣಾ ವಾಹನ ತಂತ್ರಜ್ಞಾನವನ್ನು ಎಚ್ಎಎಲ್ ಸಂಸ್ಥೆಗೆ ಹಸ್ತಾಂತರಿಸುವುದು, ದೇಶದ ಅತಿದೊಡ್ಡ ಉಡಾವಣಾ ವಾಹನ ಎಲ್ವಿಎಂ3 ಹಾಗೂ ಪಿಎಸ್ಎಲ್ವಿ ತಂತ್ರಜ್ಞಾನಗಳನ್ನು ಖಾಸಗಿಯವರಿಗೆ ವಹಿಸಲು ಬಿಡ್ ಕರೆದಿರುವುದು ಖಾಸಗೀಕರಣದ ವದಂತಿಗೆ ಕಾರಣವಾಗಿತ್ತು. ದೈನಂದಿನ ಹಾಗೂ ವಾಡಿಕೆಯ ಉಪಗ್ರಹ ತಯಾರಿಕೆಯನ್ನು ಖಾಸಗಿಯವರಿಗೆ ವಹಿಸುವುದು ಕೂಡ ಕಳವಳ ಹೆಚ್ಚಿಸಿದ್ದವು.
ಸೆಪ್ಟೆಂಬರ್ 4ರಂದು ವಿ. ನಾರಾಯಣನ್ ಅವರಿಗೆ ಬರೆದ ಪತ್ರದಲ್ಲಿ ನೌಕರರು, ಸರ್ಕಾರದ ಖಾಸಗೀಕರಣ ನೀತಿ, ಸಂಸ್ಥೆಯ ಭವಿಷ್ಯದ ಪಾತ್ರ ಮತ್ತು ಪ್ರಸ್ತಾವಿತ ಬದಲಾವಣೆಗಳು ಅಸ್ತಿತ್ವದಲ್ಲಿರುವ ಸಿಬ್ಬಂದಿ ಮತ್ತು ಭವಿಷ್ಯದ ನೇಮಕಾತಿಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಸ್ಪಷ್ಟನೆ ಕೇಳಿದ್ದರು.
ʼಒಂದು ರಾಷ್ಟ್ರ, ಒಂದು ಸಮಯ'ಕ್ಕೆ ಇಸ್ರೋ ಸಹಯೋಗ ಅನನ್ಯ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬಣ್ಣನೆ
ಖಾಸಗೀಕರಣ ಹೆಚ್ಚಾದರೆ ಗ್ರೂಪ್ ಎ, ಬಿ ಮತ್ತು ಸಿ ಹುದ್ದೆಗಳಿಗೆ ಕುತ್ತು ಬೀಳಲಿದೆ. ಅಲ್ಲದೆ ಮಹತ್ವದ ಉಡಾವಣಾ ವಾಹನಗಳ ಅಭಿವೃದ್ಧಿ, ಪರೀಕ್ಷೆ ಮತ್ತು ಕಾರ್ಯಾಚರಣೆಗಳನ್ನು ಸರ್ಕಾರಿ ಸಂಸ್ಥೆಯ ಅಡಿಯಲ್ಲಿಡುವುದು ದೇಶದ ಆಯಕಟ್ಟಿನ ಭದ್ರತೆ, ಹೊಣೆಗಾರಿಕೆ ಮತ್ತು ಗುಣಮಟ್ಟದ ದೃಷ್ಟಿಯಿಂದ ಅತ್ಯಗತ್ಯ ಎಂದು ನೌಕರರು ಪ್ರತಿಪಾದಿಸಿದ್ದರು.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.