ದೆಹಲಿ, ಜೂ. 6: ಸಾಮಾನ್ಯ ದಿನಗಳಲ್ಲಿ ದೆಹಲಿಯ ಜಂತರ್ ಮಂತರ್ನ (Jantar Mantar) ಕಡು ಕೆಂಪು ಇಟ್ಟಿಗೆಯ ರಚನೆಗಳು ವಿಭಿನ್ನವಾಗಿ ಕಾಣುತ್ತವೆ. ಇದು ಮೊಘಲ್ ಕಟ್ಟಡಗಳು ಅಥವಾ ಹಿಂದೂ ದೇವಾಲಯಗಳಂತೆ ಇರದೆ, ಸರಳ ಮತ್ತು ಜ್ಯಾಮಿತೀಯ ರೂಪದಲ್ಲಿದೆ. ಇದು 18ನೇ ಶತಮಾನದ ಸ್ಮಾರಕಕ್ಕಿಂತ ಆಧುನಿಕ ಬೌಹೌಸ್ ಶೈಲಿಯ ವಿನ್ಯಾಸಕ್ಕೆ ಹತ್ತಿರವಾಗಿದೆ. ಇಂದು, ಈ ಕಲ್ಲಿನ ರಚನೆಗಳು ಹೊಸ ರಾಜಕೀಯ ಸಭೆಗೆ ಸಾಕ್ಷಿಯಾಗಿವೆ.
ಇತ್ತೀಚಿನ ಪರೀಕ್ಷಾ ಪದ್ಧತಿಯ ಅಕ್ರಮಗಳು, ಪ್ರಮುಖವಾಗಿ ನೀಟ್-ಯುಜಿ ಪೇಪರ್ ಸೋರಿಕೆ ಮತ್ತು ಸಿಬಿಎಸ್ಇ ಒಎಸ್ಎಂ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಜಂತರ್ ಮಂತರ್ನಲ್ಲಿ ಶಾಂತಿಯುತ ಧರಣಿ ನಡೆಸಿದ್ದಾರೆ. ಮಾಧ್ಯಮಗಳ ಪ್ರಕಾರ, 1,000ಕ್ಕೂ ಹೆಚ್ಚು ದೆಹಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಜಂತರ್ ಮಂತರ್ ಮತ್ತೆ ಸಾರ್ವಜನಿಕ ಪ್ರತಿಭಟನೆಯ ಪ್ರಮುಖ ಸ್ಥಳವಾಗುತ್ತಿದೆ.
ಪ್ರತಿಭಟನೆಗೆ ಜಂತರ್ ಮಂತರ್ ಬಳಕೆ ಏಕೆ?
1993ರಲ್ಲಿ ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳವಾಗಿ ಗುರುತಿಸಲಾಯಿತು. ಇದಕ್ಕೂ ಮುನ್ನ ಇಂಡಿಯಾ ಗೇಟ್ ಬಳಿಯ ಬೋಟ್ ಕ್ಲಬ್ನಲ್ಲಿ ಪ್ರದರ್ಶನಗಳು ನಡೆಯುತ್ತಿದ್ದವು. 1988ರ ರೈತರ ಪ್ರತಿಭಟನೆಯ ನಂತರ, ಮುಖ್ಯ ಪ್ರತಿಭಟನಾ ವಲಯವನ್ನು ಜಂತರ್ ಮಂತರ್ ರಸ್ತೆಗೆ ಸ್ಥಳಾಂತರಿಸಲಾಯಿತು. ಇದು ಸಂಸತ್ತಿಗೆ ಹತ್ತಿರವಾಗಿದ್ದು, ರಾಜಕೀಯ ಕೇಂದ್ರಕ್ಕೆ ಸುಲಭ ಪ್ರವೇಶ ನೀಡುತ್ತದೆ ಮತ್ತು ನಗರದ ಇತರ ಭಾಗಗಳಿಗೆ ತೊಂದರೆಯಾಗದಂತೆ ಪೊಲೀಸರು ಇದನ್ನು ನಿರ್ವಹಿಸಬಹುದು.
ಸಿಂಧು ಜಲ ಒಪ್ಪಂದ ಅಮಾನತು ಮುಂದುವರಿಕೆ; ಪಾಕ್ಗೆ ಭಾರತದ ಖಡಕ್ ಎಚ್ಚರಿಕೆ
ಐತಿಹಾಸಿಕ ಚಳುವಳಿಗಳು
2011ರಲ್ಲಿ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ, 2012-2013ರ ನಿರ್ಭಯಾ ಪ್ರಕರಣದ ಪ್ರತಿಭಟನೆಗಳು ಮತ್ತು 2016ರ ರೋಹಿತ್ ವೇಮುಲ ಪ್ರಕರಣ ಸೇರಿ ಹಲವು ಪ್ರಮುಖ ಚಳುವಳಿಗಳು ಇಲ್ಲಿ ನಡೆದಿವೆ. ತಮಿಳುನಾಡಿನ ರೈತರ ಪ್ರತಿಭಟನೆ ಮತ್ತು ಒನ್ ರ್ಯಾಂಕ್ ಒನ್ ಪೆನ್ಷನ್ಗಾಗಿ ಮಾಜಿ ಸೈನಿಕರ ಹೋರಾಟಕ್ಕೂ ಇದು ವೇದಿಕೆಯಾಗಿದೆ. 2017ರಲ್ಲಿ ಹಸಿರು ನ್ಯಾಯಾಧೀಕರಣವು ಪರಿಸರ ಕಾಳಜಿಯಿಂದ ಇಲ್ಲಿ ಪ್ರತಿಭಟನೆಯನ್ನು ನಿರ್ಬಂಧಿಸಿತ್ತಾದರೂ, 2018ರಲ್ಲಿ ಸುಪ್ರೀಂ ಕೋರ್ಟ್ ಪ್ರತಿಭಟನಾ ಹಕ್ಕನ್ನು ಪುನಃಸ್ಥಾಪಿಸಿತು.
ಜಂತರ್ ಮಂತರ್ನ ನೈಜ ಇತಿಹಾಸ
ಇದು ಮೂಲತಃ ಪ್ರತಿಭಟನಾ ಸ್ಥಳವಾಗಿರಲಿಲ್ಲ. ಅಂಬರ್ನ ರಜಪೂತ ರಾಜ ಮಹಾರಾಜ ಸವಾಯಿ ಜೈ ಸಿಂಗ್ II 1724ರಲ್ಲಿ ನಿರ್ಮಿಸಿದ 18ನೇ ಶತಮಾನದ ಖಗೋಳ ವೀಕ್ಷಣಾಲಯವಾಗಿದೆ. ಜೈಪುರದಲ್ಲಿ ಸಿಕ್ಕ ದಾಖಲೆಗಳ ಪ್ರಕಾರ ಇದರ ನಿಜವಾದ ಹೆಸರು 'ಜಂತ್ರ'. ಇದು ಸಂಸ್ಕೃತ ಪದವಾಗಿದ್ದು, ಖಗೋಳ ಉಪಕರಣಗಳು ಎಂದರ್ಥ. ಈ ವಿಶಿಷ್ಟ ಕಲ್ಲಿನ ರಚನೆಗಳನ್ನು ಸಮಯವನ್ನು ಲೆಕ್ಕಹಾಕಲು ಮತ್ತು ಸೂರ್ಯನ ಸ್ಥಾನವನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ. ಇಂದು ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲ್ಪಟ್ಟಿದೆ.