ರಾಂಚಿ, ಆ. 10: ನೇಮಕಾತಿ ಪರೀಕ್ಷೆಗಳಲ್ಲಿನ (Recruitment Exam Irregularities) ಅಕ್ರಮಗಳನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿಗಳು ಜಾರ್ಖಂಡ್ ವಿಧಾನಸಭೆಯತ್ತ (Jharkhand Assembly) ಮೆರವಣಿಗೆ ನಡೆಸಿದ ವೇಳೆ ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿ ಲಾಠಿಚಾರ್ಜ್ (Lathi Charge) ನಡೆಸಿದ್ದಾರೆ. ವಿಧಾನಸಭೆಗೆ ತೆರಳುವ ಮಾರ್ಗದಲ್ಲಿರುವ ಜಗನ್ನಾಥಪುರ ದೇವಸ್ಥಾನದ ಬಳಿ ಪ್ರತಿಭಟನಾಕಾರರು ಅಂತಿಮ ತಡೆಗೋಡೆಯನ್ನು ದಾಟಲು ಯತ್ನಿಸಿದಾಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ಲಾಠಿಚಾರ್ಜ್ನಲ್ಲಿ ಹಲವರು ಗಾಯಗೊಂಡಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಗಾಯಗೊಂಡ ಪ್ರತಿಭಟನಾಕಾರ ಸಂಜಯ್ ಮಹತೋ, “ನನ್ನ ತಲೆ ಮತ್ತು ಕಾಲುಗಳು ನೋಯುತ್ತಿವೆ. ತಲೆಯಿಂದ ರಕ್ತ ಬರುತ್ತಿದೆ” ಎಂದು ತಿಳಿಸಿದ್ದಾರೆ. ಮತ್ತೊಬ್ಬ ಪ್ರತಿಭಟನಾಕಾರ ಪಿಯೂಷ್ ಕುಮಾರ್ ಸೋನಿ, “ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಸರ್ಕಾರ ನಮ್ಮ ಮೇಲೆ ಲಾಠಿ ಬೀಸಿದೆ. ಅವರು ದೈಹಿಕವಾಗಿ ಗಾಯಗೊಳಿಸಬಹುದು, ಆದರೆ ನಮ್ಮ ಆಲೋಚನೆಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ರಾಂಚಿಯಲ್ಲಿ ನಡೆದ ಪ್ರತಿಭಟನೆ ವೇಳೆ ಲಾಠಿ ಬೀಸಿದ ಪೊಲೀಸರು:
ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಕುರಿತು ಸರ್ಕಾರವು ಪ್ರತಿಭಟನಾಕಾರರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ ಯಾವುದೇ ಒಮ್ಮತ ಮೂಡಿಲ್ಲ. ತಾವು ರದ್ದುಗೊಳಿಸುವಂತೆ ಒತ್ತಾಯಿಸಿರುವ ೧೩ ಪರೀಕ್ಷೆಗಳ ಪೈಕಿ ಕೇವಲ ಮೂರು ಪರೀಕ್ಷೆಗಳನ್ನು ರದ್ದುಗೊಳಿಸಲು ಸರ್ಕಾರ ಒಪ್ಪಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಜಾರ್ಖಂಡ್ ಲೋಕಸೇವಾ ಆಯೋಗ ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ಸಮಗ್ರ ಸುಧಾರಣೆಗಳನ್ನು ಜಾರಿಗೆ ತರಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆ. ಹದಿನಾಲ್ಕನೇ ಜಾರ್ಖಂಡ್ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆ ಸೇರಿ ಹಲವು ನೇಮಕಾತಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಕ್ರಮಗಳ ಕುರಿತು ಕೇಂದ್ರ ತನಿಖಾ ಸಂಸ್ಥೆ ಅಥವಾ ರಾಜ್ಯದ ಹೊರಗಿನ ನಿವೃತ್ತ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.
ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧದ ಪ್ರತಿಭಟನೆ ಹದಿನೇಳನೇ ದಿನಕ್ಕೆ ಕಾಲಿಟ್ಟಿದ್ದು, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಐವತ್ತೊಂದನೇ ಜನ್ಮದಿನದಂದೇ ಮೆರವಣಿಗೆ ನಡೆಯಿತು. ಬೆಳಗ್ಗೆ ಸುಮಾರು ಹತ್ತೂವರೆ ಗಂಟೆಗೆ ಹಳೆಯ ವಿಧಾನಸಭಾ ಕಟ್ಟಡದ ಹೊರಗಿನಿಂದ ಮೆರವಣಿಗೆ ಆರಂಭವಾಯಿತು.
ತುಮಕೂರು ಡಿಸಿ ಕಚೇರಿ ಎದುರು ಹೊರಗುತ್ತಿಗೆ ನೌಕರರ ಪ್ರತಿಭಟನೆ
ಒಂಬತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜೆಎಲ್ಕೆಎಂ ನಾಯಕ ದೇವೇಂದ್ರನಾಥ್ ಮಹತೋ ಕೂಡ ಆಂಬ್ಯುಲೆನ್ಸ್ನಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಈ ವೇಳೆ ಅವರು ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಅವರ ಭಾವಚಿತ್ರವನ್ನು ಹಿಡಿದಿದ್ದರು.
ವಿಧಾನಸಭೆಯತ್ತ ಸಾಗುವ ಮಾರ್ಗದಲ್ಲಿ ಮುಳ್ಳುತಂತಿಯ ತಡೆಗೋಡೆಗಳನ್ನು ಅಳವಡಿಸಿರುವುದನ್ನು ಮಹತೋ ವಿರೋಧಿಸಿದರು. ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಆಕ್ರೋಶ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
ಜಲಫಿರಂಗಿ ಪ್ರಯೋಗ
ಜಗನ್ನಾಥಪುರ ದೇವಸ್ಥಾನದ ಬಳಿ ಪೊಲೀಸರು ಜಲಫಿರಂಗಿ ಪ್ರಯೋಗಿಸಿದಾಗ ಪ್ರತಿಭಟನಾಕಾರರು ರಾಷ್ಟ್ರಧ್ವಜ ಬೀಸುತ್ತಾ ನೃತ್ಯ ಮಾಡಿದರು. ಆದರೆ ಮುಂದೆ ಸಾಗಲು ಯತ್ನಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡು ಪೊಲೀಸರು ಲಾಠಿಚಾರ್ಜ್ ನಡೆಸಿದರು. ಬಳಿಕ ವಿಧಾನಸಭೆಯಿಂದ ಸುಮಾರು ಇನ್ನೂರು ಮೀಟರ್ ದೂರದಲ್ಲಿ ಪೊಲೀಸರು ಹಲವು ಸುತ್ತು ಅಶ್ರುವಾಯು ಶೆಲ್ಗಳನ್ನು ಪ್ರಯೋಗಿಸಿದರು.
ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ಸುಧಾರಣಾ ವೇದಿಕೆ, ಸಮಾಜ ವಿರೋಧಿ ಶಕ್ತಿಗಳು ಪ್ರತಿಭಟನೆಯಲ್ಲಿ ಸೇರದಂತೆ ಸುಮಾರು ಐನೂರು ಸ್ವಯಂಸೇವಕರನ್ನು ನಿಯೋಜಿಸಿರುವುದಾಗಿ ತಿಳಿಸಿದೆ. ಇದೇ ವೇಳೆ ರಾಜ್ಯ ಸಚಿವ ಸುದಿವ್ಯ ಕುಮಾರ್, ಬಿಜೆಪಿ ತನ್ನ ರಾಜಕೀಯ ಉದ್ದೇಶಗಳಿಗಾಗಿ ಪ್ರತಿಭಟನೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ಆರೋಪಿಸಿದ್ದಾರೆ. ಸರ್ಕಾರವು ಪ್ರತಿಭಟನಾಕಾರರ ಶೇಕಡಾ 95ರಷ್ಟು ಬೇಡಿಕೆಗಳನ್ನು ಈಡೇರಿಸಿದ್ದರೂ ಪ್ರತಿಭಟನೆ ಮುಂದುವರಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಪ್ರತಿಭಟನೆ ವಿದ್ಯಾರ್ಥಿಗಳ ಚಳವಳಿಯಾಗಿರದೆ ಬಿಜೆಪಿಯ ರಾಜಕೀಯ ಉದ್ದೇಶಗಳಿಂದ ಪ್ರಭಾವಿತವಾಗಿರುವ ಚಳವಳಿಯಾಗಿ ಬದಲಾಗಿದೆ ಎಂದು ಸಚಿವರು ಆರೋಪಿಸಿದ್ದಾರೆ.