ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (ಜೆಎನ್ಯುಎಸ್ಯು) ಚುನಾವಣೆಯಲ್ಲಿ ಎಡಪಂಥೀಯ (JNU Election Result) ಒಕ್ಕೂಟವು ಭಾರಿ ಗೆಲುವು ಸಾಧಿಸಿದ್ದು, ಆರ್ಎಸ್ಎಸ್ ಬೆಂಬಲಿತ ಎಬಿವಿಪಿ ಅಭ್ಯರ್ಥಿಗಳ ವಿರುದ್ಧ ನಾಲ್ಕು ಕೇಂದ್ರೀಯ ಫಲಕ ಹುದ್ದೆಗಳನ್ನು ಗೆದ್ದುಕೊಂಡಿದೆ. ಅಖಿಲ ಭಾರತ ವಿದ್ಯಾರ್ಥಿ ಸಂಘ (AISA), ವಿದ್ಯಾರ್ಥಿ ಒಕ್ಕೂಟ (SFI) ಮತ್ತು ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ (DSF) ಗಳನ್ನು ಒಳಗೊಂಡ ಎಡಪಂಥೀಯ ಒಕ್ಕೂಟವು ABVP ಯೊಂದಿಗೆ ಜಿದ್ದಾ ಜಿದ್ದಿನ ಸ್ಪರ್ಧೆಯನ್ನು ಹೊಂದಿತ್ತು.
ಜೆಎನ್ಯುಎಸ್ಯು ಅಧ್ಯಕ್ಷೀಯ ಚುನಾವಣೆಯಲ್ಲಿ, ಎಡ ಮೈತ್ರಿಕೂಟದ ಅದಿತಿ ಮಿಶ್ರಾ 1,937 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಎಬಿವಿಪಿಯ ವಿಕಾಸ್ ಪಟೇಲ್ 1,488 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಡಪಕ್ಷದ ಕೆ. ಗೋಪಿಕಾ ಬಾಬು ಅವರು 3,101 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು. ಎಬಿವಿಪಿ ಅಭ್ಯರ್ಥಿ ತಾನ್ಯಾ ಕುಮಾರಿ ಅವರು 1,787 ಮತಗಳನ್ನು ಪಡೆದರು. ಪ್ರಧಾನ ಕಾರ್ಯದರ್ಶಿ ಹುದ್ದೆಗೆ, ಸುನಿಲ್ ಯಾದವ್ (ಎಡ) ಎಬಿವಿಪಿಯ ರಾಜೇಶ್ವರ್ ಕೆ ದುಬೆ ಅವರನ್ನು ಸ್ವಲ್ಪದರಲ್ಲಿ ಸೋಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ದಿಟ್ಟಿಸಿ ನೋಡಿದನೆಂದು ಪ್ರೊಫೆಸರ್ಗೆ ಎಬಿವಿಪಿ ಸದಸ್ಯೆಯಿಂದ ಕಪಾಳಮೋಕ್ಷ! ವಿಡಿಯೊ ನೋಡಿ
ಜಂಟಿ ಕಾರ್ಯದರ್ಶಿ ಚುನಾವಣೆಯಲ್ಲಿ, ಡ್ಯಾನಿಶ್ ಅಲಿ (ಎಡ) 2,083 ಮತಗಳನ್ನು ಪಡೆದು ಸುಲಭವಾಗಿ ಗೆದ್ದರು, ಎಬಿವಿಪಿಯ ಅನುಜ್ ಡಮಾರಾ 1,797 ಮತಗಳನ್ನು ಪಡೆದು ಹಿಂದಿಕ್ಕಿದರು. ಮಂಗಳವಾರ ನಡೆದ ಜೆಎನ್ಯುಎಸ್ಯು ಚುನಾವಣೆಯಲ್ಲಿ ಶೇ. 67 ರಷ್ಟು ಮತದಾನವಾಗಿದ್ದು, ಕಳೆದ ವರ್ಷ ಶೇ. 70 ರಷ್ಟು ಮತದಾನವಾಗಿತ್ತು. ಚುನಾವಣೆಗಳಲ್ಲಿ ವಿದ್ಯಾರ್ಥಿಗಳು ಡ್ರಮ್ ಬಾರಿಸುತ್ತಾ, ಘೋಷಣೆಗಳನ್ನು ಕೂಗುತ್ತಾ ಮತ್ತು ಕ್ಯಾಂಪಸ್ನಾದ್ಯಂತ ಸಂಭ್ರಮಾಚರಣೆಯನ್ನು ಮಾಡಿದ್ದಾರೆ.
2025–26ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯ ಮತದಾನ ನವೆಂಬರ್ 4ರಂದು ನಡೆದಿತ್ತು. ಅಕ್ಟೋಬರ್ 27ರೊಳಗಾಗಿ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಸಮಯಾವಕಾಶ ನೀಡಲಾಗಿತ್ತು. ಕಳೆದ ವರ್ಷ, ನಾಲ್ಕು ಪ್ರಮುಖ ಸ್ಥಾನಗಳಲ್ಲಿ ಮೂರನ್ನು ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಗೆದ್ದಿದ್ದರೆ, ಎಬಿವಿಪಿ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್) ಒಕ್ಕೂಟ ಕಾರ್ಯದರ್ಶಿ ಹುದ್ದೆಯನ್ನು ತನ್ನದಾಗಿಸಿಕೊಂಡಿತ್ತು. ಇದು ಸುಮಾರು ಒಂದು ದಶಕದ ಬಳಿಕ ಎಬಿವಿಪಿಯ ಮೊದಲ ಜಯವಾಗಿತ್ತು.
ನವರಾತ್ರಿ ಸಮಯದಲ್ಲಿ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯವು ಮತ್ತೆ ವಿವಾದ ಭುಗಿಲೆದಿತ್ತು. ಹಾಸ್ಟೆಲ್ ಆವರಣದಲ್ಲಿ ನಡೆದ ದಸರಾ ಆಚರಣೆ ಈ ವಿವಾದಕ್ಕೆ ಕಾರಣವಾಗಿದ್ದು, ನಡೆದ ಘರ್ಷಣೆಯಲ್ಲಿ ಹಲವಾರು ಮಂದಿಗೆ ಗಾಯಗಳಾಗಿತ್ತು. ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ರಾವಣ ಪ್ರತಿಕೃತಿ ಜೊತೆ ಅಫ್ಜಲ್ ಗುರು, ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ಇತರ ಪೋಟೋಗಳು ಉಳ್ಳ ಆಕೃತಿಯನ್ನು ದಹನ ಮಾಡಿದ್ದು, ಈ ಘರ್ಷಣೆಗೆ ಕಾರಣವಾಗಿತ್ತು. ಎಬಿವಿಪಿ ತನ್ನ ಪ್ರಕಟಣೆಯಲ್ಲಿ, “ವಿಜಯದಶಮಿ ದಿನ ದುಷ್ಟ ಶಕ್ತಿಗಳ ನಿರ್ನಾಮದ ಸಂಕೇತವಾಗಿ ರಾವಣನೊಂದಿಗೆ ನಕ್ಸಲಿಸಂ, ಮಾವೋವಾದಿ ಹಿಂಸಾಚಾರ ಮತ್ತು ಭಾರತ ವಿರೋಧಿ ಚಿಂತನೆಗಳನ್ನೂ ದಹನ ಮಾಡಿದ್ದೇವೆ. ಇದು ದೇಶವನ್ನು ಬಲಪಡಿಸುವ ಸಂಕಲ್ಪದ ಸಂಕೇತ” ಎಂದು ಹೇಳಿತ್ತು.