ತಿರುವನಂತಪುರಂ, ಜು. 14: ಕೇರಳಂನ ಮಾಜಿ ಉನ್ನತ ಶಿಕ್ಷಣ ಸಚಿವ ಹಾಗೂ ಸಿಪಿಐ(ಎಂ) ನಾಯಕ ಕೆ.ಟಿ. ಜಲೀಲ್ (KT Jaleel) ವಿರುದ್ಧ ವಿದ್ಯಾರ್ಥಿಗಳನ್ನು ಸಾರ್ವಜನಿಕವಾಗಿ ಅವಮಾನಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ+ ಪಡೆದ ವಿದ್ಯಾರ್ಥಿಗಳಿಗೆ ಪಾಲಕ್ಕಾಡಿನಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಜಲೀಲ್ ಮಾತನಾಡುವ ವೇಳೆ, ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನವನ್ನು ಪರೀಕ್ಷಿಸುವ ಉದ್ದೇಶದಿಂದ "ನಿಮಗೆ ಇಂಗ್ಲಿಷ್ ವರ್ಣಮಾಲೆ ಗೊತ್ತೇ?" ಎಂದು ಪ್ರಶ್ನಿಸಿದ್ದರು. ಅಲ್ಲದೆ, ಹಿಂದಿಯಲ್ಲಿ ವಿಳಾಸ ಬರೆಯುವಾಗ ತಪ್ಪು ಮಾಡಿದ ವಿದ್ಯಾರ್ಥಿಯನ್ನು ವೇದಿಕೆಗೆ ಕರೆದು ಕಿವಿ ಹಿಂಡಿರುವ ದೃಶ್ಯಗಳು ದೂರದರ್ಶನ ವಾಹಿನಿಗಳಲ್ಲಿ ಪ್ರಸಾರವಾಗಿದ್ದವು. ಈ ದೃಶ್ಯಾವಳಿಗಳ ಆಧಾರದ ಮೇಲೆ ಮಕ್ಕಳ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜಲೀಲ್, ತಾವು ರಾಜಕೀಯಕ್ಕೆ ಸೇರುವ ಮೊದಲು ಶಿಕ್ಷಕರಾಗಿದ್ದೆ ಮತ್ತು ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ರೀತಿಯಲ್ಲಿಯೇ ಮಾತನಾಡಿದ್ದೇನೆ ಎಂದು ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಾಜಿ ಸಚಿವನಿಂದ ವಿದ್ಯಾರ್ಥಿಗಳಿಗೆ ಅವಮಾನ:
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಪಠ್ಯೇತರ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅದನ್ನೇ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಯ ಕಿವಿ ಹಿಡಿದಿದ್ದು ಕೇವಲ ತಮಾಷೆಗಾಗಿ ಮಾತ್ರ, ಅವನಿಗೆ ಯಾವುದೇ ನೋವುಂಟು ಮಾಡುವ ಉದ್ದೇಶ ಇರಲಿಲ್ಲ ಎಂದಿದ್ದಾರೆ.
ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಜೆನ್ ಝೀ ಉದ್ಯೋಗಿ
ʼʼವಿಡಿಯೊದಲ್ಲಿಯೇ ವಿದ್ಯಾರ್ಥಿ ನಗುತ್ತಿರುವುದು ಕಾಣುತ್ತದೆ. ಆದರೂ ನನ್ನ ಮಾತು ಅಥವಾ ವರ್ತನೆಯಿಂದ ಯಾರಿಗಾದರೂ ಅವಮಾನವಾಗಿದ್ದರೆ ಕ್ಷಮೆ ಕೇಳಲು ಸಿದ್ಧʼʼ ಎಂದು ಜಲೀಲ್ ತಿಳಿಸಿದ್ದಾರೆ.
ಇನ್ನೊಂದೆಡೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ವಿದ್ಯಾರ್ಥಿ ಸಂಘಟನೆ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್ (MSF) ಜಲೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಸಾರ್ವಜನಿಕ ವೇದಿಕೆಯಲ್ಲಿ ವಿದ್ಯಾರ್ಥಿಗಳನ್ನು ಮುಜುಗರಕ್ಕೀಡು ಮಾಡುವುದು ಮತ್ತು ಅವಮಾನಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಟೀಕಿಸಿದೆ.
ಪ್ರಸ್ತುತ ಪ್ರಕರಣದ ಕುರಿತು ಮಕ್ಕಳ ಹಕ್ಕುಗಳ ಆಯೋಗ ತನಿಖೆ ನಡೆಸುತ್ತಿದ್ದು, ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಘಟನೆ ಕೇರಳಂನಲ್ಲಿ ಶಿಕ್ಷಣ, ಮಕ್ಕಳ ಹಕ್ಕುಗಳು ಹಾಗೂ ಸಾರ್ವಜನಿಕ ವೇದಿಕೆಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದುಕೊಳ್ಳುವ ರೀತಿಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.