ಭುವನೇಶ್ವರ: ಹಣಕ್ಕಾಗಿ ಮಗನೇ ತಂದೆಗೆ ಬೆದರಿಕೆ (Threat) ಹಾಕಿರುವ ಘಟನೆ ಒಡಿಶಾದ (Odisha) ಕಲಹಂಡಿ ಜಿಲ್ಲೆಯಲ್ಲಿ (Kalahandi district) ನಡೆದಿದೆ. ಮಾವೋವಾದಿ ಎಂದು ಹೇಳಿ ತಂದೆಯಿಂದ 35 ಲಕ್ಷ ರೂ. ಸುಲಿಗೆ ಮಾಡಲು ಮಗ ಯತ್ನಿಸಿದ್ದಾನೆ. ನಾರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ರುಪ್ರಾ ರಸ್ತೆ ಪ್ರದೇಶದಲ್ಲಿ ಗುತ್ತಿಗೆದಾರರೊಬ್ಬರ ಮಗ ಮಾವೋವಾದಿಯಂತೆ (Maoist fake threat) ನಟಿಸಿ ತನ್ನ ಕುಟುಂಬಕ್ಕೆ ನಕಲಿ ಬೆದರಿಕೆ ಪತ್ರವನ್ನು (Threat letter) ಬರೆದು ಕಳುಹಿಸಿದ್ದಾನೆ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಕಲಹಂಡಿ ಜಿಲ್ಲೆಯ ಶ್ರೀಮಂತ ಕುಟುಂಬದ ಯುವಕನೊಬ್ಬ ತನ್ನ ತಂದೆಗೆ ಮಾವೋವಾದಿಯ ಹೆಸರಿನಲ್ಲಿ ಬೆದರಿಕೆ ಪತ್ರವನ್ನು ಕಳುಹಿಸಿದ್ದಾನೆ. ಇದರಲ್ಲಿ ಆತ 35 ಲಕ್ಷ ರೂ. ಸುಲಿಗೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆ ನಾರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ರುಪ್ರಾ ರಸ್ತೆ ಪ್ರದೇಶದಲ್ಲಿ ನಡೆದಿದೆ. ಸ್ಥಳೀಯ ಗುತ್ತಿಗೆದಾರರೊಬ್ಬರ ಏಕೈಕ ಮಗ ಮಾವೋವಾದಿಗಳಂತೆ ನಟಿಸಿ ತಂದೆಯಿಂದಲೇ ಲಕ್ಷಾಂತರ ರೂಪಾಯಿ ಹಣಕ್ಕಾಗಿ ಬೇಡಿಕೆ ಇಡುವ ಯೋಜನೆಯನ್ನು ರೂಪಿಸಿದ್ದ ಎನ್ನಲಾಗಿದೆ.
ಇದಕ್ಕಾಗಿ ಯುವಕ ತನ್ನ ತಂದೆಗೆ ಮಾವೋವಾದಿಗಳ ಹೆಸರಿನಲ್ಲಿ ಪತ್ರವೊಂದನ್ನು ಕಳುಹಿಸಿದ್ದು ಹಣವನ್ನು ಪಾವತಿಸದಿದ್ದರೆ ಇಡೀ ಕುಟುಂಬವನ್ನು ಕೊಲ್ಲಲಾಗುವುದು ಎಂದು ಎಚ್ಚರಿಸಿದ್ದಾನೆ. ಮಾವೋವಾದಿಗಳ ಹೆಸರಿನಲ್ಲಿ ಬರೆಯಲಾದ ಈ ಪತ್ರವು ಮನೆಯವರೆಲ್ಲರಲ್ಲಿ ಭಯವನ್ನು ಸೃಷ್ಟಿಸಿತ್ತು. ಮಗ ತಂದೆಯ ಬಳಿಯೇ ಹಣ ಪಾವತಿಸುವಂತೆ ಒತ್ತಡ ಹೇರುವ ಉದ್ದೇಶವನ್ನು ಹೊಂದಿದ್ದ. ಆದರೆ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಂದೆ ನಾರ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ.
ತನಿಖೆ ವೇಳೆ ಮಗನೇ ತನ್ನ ಕುಟುಂಬದಿಂದ ಹಣ ಪಡೆಯಲು ಮಾವೋವಾದಿಗಳ ಹೆಸರಿನಲ್ಲಿ ಬೆದರಿಕೆ ಪತ್ರವನ್ನು ಬರೆದಿದ್ದಾನೆ ಎಂದು ಪೊಲೀಸರು ಪತ್ತೆ ಹೆಚ್ಚಿದ್ದಾರೆ. ಆರೋಪಿ ಕೂಡ ತಪ್ಪೊಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: Naxalism: ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಗಣನೀಯ ಇಳಿಕೆ- ಮೋದಿ ಸರ್ಕಾರದಿಂದ ಮಹತ್ವದ ಸಾಧನೆ!
ಈ ಕುರಿತು ಮಾಹಿತಿ ನೀಡಿರುವ ನಾರ್ಲಾ ಪೊಲೀಸರು, ಅಕ್ಟೋಬರ್ 7ರಂದು ಮಾವೋವಾದಿಗಳು ಹಣಕ್ಕಾಗಿ ಕಳುಹಿಸಿದ್ದಾರೆ ಎನ್ನಲಾದ ಪತ್ರ ಸಿಕ್ಕಿದೆ. ತನಿಖೆ ವೇಳೆ ಒಬ್ಬ ಶಂಕಿತನನ್ನು ನಾವು ಬಂಧಿಸಿದ್ದೇವೆ. ಆತ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತಿಪ್ಪೆಗುಂಡಿಯಲ್ಲಿ ಸ್ಫೋಟ
ತಿಪ್ಪೆಗುಂಡಿಯಲ್ಲಿ ಸ್ಫೋಟಗೊಂಡ ಘಟನೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಚಿಂಚೋಳಿ (ಹೆಚ್) ಗ್ರಾಮದಲ್ಲಿರುವ ನಡೆದಿದೆ. ತನಿಖೆ ವೇಳೆ ತಿಪ್ಪೆಗುಂಡಿಯಲ್ಲಿ ಒಂದು ನಾಡಪಿಸ್ತೂಲ್ ಹಾಗೂ ಮೂರು ಗುಂಡುಗಳು ಪತ್ತೆಯಾಗಿವೆ.
ಟೈಲರ್ ಅಂಗಡಿಯ ಮಾಲೀಕರಾದ ಮಾಳಪ್ಪ ಅಂಬಣ್ಣ ಹೂಗೊಂಡ ಎಂಬವರು ದೈನಂದಿನಂತೆ ತಮ್ಮ ಅಂಗಡಿಯ ಕಸದ ರಾಶಿಗೆ ಬೆಂಕಿ ಹಚ್ಚುತ್ತಿದ್ದಾಗ ಭಾರೀ ಸ್ಪೋಟದ ಶಬ್ದ ಕೇಳಿಬಂದಿದೆ. ಇದರಿಂದ ಸ್ಥಳೀಯರು ಆತಂಕಗೊಂಡರು. ಕಸದ ರಾಶಿಯನ್ನು ಪರಿಶೀಲಿಸಿದಾಗ ಶಂಕಾಸ್ಪದ ಲೋಹದ ವಸ್ತುವೊಂದು ಪತ್ತೆಯಾಗಿದೆ. ಇದರಲ್ಲಿ ನಾಡಪಿಸ್ತೂಲ್, ಎರಡು ನಿಷ್ಕ್ರಿಯ ಗುಂಡುಗಳು ಇರುವುದು ದೃಢಪಟ್ಟಿದೆ. ತಕ್ಷಣವೇ ಮಾಳಪ್ಪ ಅವರು ಕಾಳಗಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣ ದಾಖಲಾಗಿದೆ.