ಚೆನ್ನೈ, ಜೂ. 16: ಜೂನ್ 21ರಂದು ನಡೆಯಲಿರುವ ನೀಟ್ (NEET) ಮರುಪರೀಕ್ಷೆಗೆ ಉನ್ನತ ಮಟ್ಟದ, ಗೌಪ್ಯ, ಸೇನಾ ದರ್ಜೆಯ ಭದ್ರತೆ ಹಾಗೂ ಎಐ ಆಧಾರಿತ ಮುಖ ಗುರುತಿಸುವಿಕೆ (AI Facial Recognition) ವ್ಯವಸ್ಥೆಗಳನ್ನು ಜಾರಿಗೊಳಿಸಿರುವುದು ಈಗಾಗಲೇ ಹೆಚ್ಚಿರುವ ಪರೀಕ್ಷಾ ಒತ್ತಡವನ್ನು ಇನ್ನಷ್ಟು ಹೆಚ್ಚಿಸುವುದರ ಜತೆ ಅಭ್ಯರ್ಥಿಗಳಿಗೆ ಹೊಸ ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದು ತಮಿಳುನಾಡು ಬಿಜೆಪಿ ಮಾಜಿ ನಾಯಕ ಕೆ. ಅಣ್ಣಾಮಲೈ (K. Annamalai) ಹೇಳಿದ್ದಾರೆ. ಅಣ್ಣಾಮಲೈ ಅವರ ಈ ಹೇಳಿಕೆಗೆ ಬಿಜೆಪಿಯಿಂದ ತೀಕ್ಷ್ಣ ಪ್ರತಿಕ್ರಿಯೆ ಬಂದಿದೆ. ಬಿಜೆಪಿಯಿಂದ ಹೊರಬಂದ ಬೆನ್ನಲ್ಲೆ ಅಣ್ಣಾಮಲೈ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೇಯಲ್ಲಿ ಪದವಿ ಪೂರ್ವ ವೈದ್ಯಕೀಯ ಸೀಟುಗಳಿಗೆ ನಡೆದ, ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ರದ್ದುಗೊಂಡಿತ್ತು. ಮರುಪರೀಕ್ಷೆಗಾಗಿ, ವಾಯುಪಡೆಯು ದೇಶಾದ್ಯಂತ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸಲಿದ್ದು, ಕೇಂದ್ರ ಮೀಸಲು ಮೀಸಲು ಪೊಲೀಸ್ ಪಡೆ (CRPF) ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ, ಪರೀಕ್ಷಾ ಕೇಂದ್ರಗಳಿಗೆ ಸ್ಥಳಾಂತರಿಸಲು ಸಹಾಯ ಮಾಡುತ್ತಾರೆ. ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಬಿಡುವ ಮೊದಲು ಬಯೋಮೆಟ್ರಿಕ್ ಮತ್ತು ಮುಖ ಗುರುತಿಸುವಿಕೆ ಪರಿಶೀಲನೆ ಇರಲಿದೆ. ಪ್ರಧಾನ ಮಂತ್ರಿ ಕಚೇರಿಯಿಂದ ನೇರ ಮೇಲ್ವಿಚಾರಣೆಯೊಂದಿಗೆ ಬಹು ಹಂತದ ಮೇಲ್ವಿಚಾರಣೆಯನ್ನು ಒಳಗೊಂಡಿದೆ ಎಂದು ಅಣ್ಣಾಮಲೈ ಹೇಳಿದರು.
“ಇವು ಉನ್ನತ ಮಟ್ಟದ, ಗೌಪ್ಯ, ಸೇನಾ ದರ್ಜೆಯ ಸಾಫ್ಟ್ವೇರ್ ಖರೀದಿಸಲು ಮಾಡಿರುವ ವ್ಯವಸ್ಥೆಗಳಲ್ಲ. ಇವು 2026ರ ಜೂನ್ 21ರಂದು ನಡೆಯಲಿರುವ ನೀಟ್ ಮರುಪರೀಕ್ಷೆಗಾಗಿ ಶಿಕ್ಷಣ ಸಚಿವಾಲಯ ಮಾಡಿರುವ ವ್ಯವಸ್ಥೆಗಳು” ಎಂದು ಕೆ. ಅಣ್ಣಾಮಲೈ ಕೇಂದ್ರ ಸರ್ಕಾರವನ್ನು ಟೀಕಿಸುತ್ತ ಎಕ್ಸ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಣ್ಣಾಮಲೈ ಪೋಸ್ಟ್ ಇಲ್ಲಿದೆ:
ವಿನೋದ್ ಸೆಲ್ವಂ ಪೋಸ್ಟ್ ಇಲ್ಲಿದೆ:
ಬಿಜೆಪಿ ಪ್ರತಿದಾಳಿ
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ವಿನೋದ್ ಸೆಲ್ವಂ, ''ಬಯೋಮೆಟ್ರಿಕ್ ಪರಿಶೀಲನೆ, ಸಿಸಿಟಿವಿ ನಿಗಾ ವ್ಯವಸ್ಥೆ ಮತ್ತು ಭದ್ರತಾ ತಪಾಸಣೆಗಳು ಯಾವುದೇ ಗಂಭೀರ ಹಾಗೂ ದೊಡ್ಡ ಪ್ರಮಾಣದ ಪರೀಕ್ಷೆಗಳಲ್ಲಿ ಸಾಮಾನ್ಯ ಕ್ರಮಗಳಾಗಿವೆ'' ಎಂದು ಹೇಳಿದರು. ಗಾವೊಕಾವೊದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ''ಇದು ಚೀನಾದ ಅತ್ಯಂತ ಸ್ಪರ್ಧಾತ್ಮಕ ಮತ್ತು ಪ್ರಮಾಣೀಕೃತ ರಾಷ್ಟ್ರೀಯ ಕಾಲೇಜು ಪ್ರವೇಶ ಪರೀಕ್ಷೆಯಾಗಿದ್ದು, ವಿಶ್ವವಿದ್ಯಾಲಯ ಪ್ರವೇಶಕ್ಕೆ ವಿದ್ಯಾರ್ಥಿಗಳ ಅಂಕಗಳೇ ಪ್ರಮುಖ ನಿರ್ಧಾರಕ ಅಂಶವಾಗಿರುತ್ತವೆ'' ಎಂದರು.
ಪರೀಕ್ಷಾ ಅಕ್ರಮ ತಡೆಗೆ ಕೇಂದ್ರದ ಬಿಗಿ ಕ್ರಮ: ದೇಶಾದ್ಯಂತ ಟೆಲಿಗ್ರಾಮ್ ಆ್ಯಪ್ಗೆ ತಾತ್ಕಾಲಿಕ ನಿಷೇಧ
''ಚೀನಾದ ಗಾವೊಕಾವೊ ಪರೀಕ್ಷೆಯನ್ನು ಪ್ರತಿವರ್ಷ 1.3 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ವಿಶ್ವದ ಅತ್ಯಂತ ಕಠಿಣ ಪರೀಕ್ಷಾ ನಿಯಮಾವಳಿಗಳ ಅಡಿಯಲ್ಲಿ ಬರೆಯುತ್ತಾರೆ. ಅದನ್ನು ಯಾರೂ ಮಿಲಟರೀಕರಣ ಎಂದು ಕರೆಯುವುದಿಲ್ಲ. ಬದಲಿಗೆ ಅದನ್ನು ಅರ್ಹತೆಯನ್ನು ರಕ್ಷಿಸುವುದು ಎಂದು ಕರೆಯುತ್ತಾರೆ'' ಎಂದು ವಿನೋದ್ ಸೆಲ್ವಂ ತಿಳಿಸಿದರು. ʼʼವಿದ್ಯಾರ್ಥಿಗಳಿಗೆ ವ್ಯವಸ್ಥೆಯ ಮೇಲಿನ ವಿಶ್ವಾಸ ಬೇಕೇ ಹೊರತು, ಮಾನದಂಡಗಳನ್ನು ಜಾರಿಗೊಳಿಸುವ ಪ್ರತಿ ಬಾರಿ ರಾಜಕೀಯ ಭಯ ಹುಟ್ಟಿಸುವ ಪ್ರಯತ್ನಗಳ ಅಗತ್ಯವಿಲ್ಲʼʼ ಎಂದರು.
ಅಣ್ಣಾಮಲೈ ವಾದವೇನು?
ದೀರ್ಘ ಸಮಯದ ತಪಾಸಣೆ ಮತ್ತು ಹೆಚ್ಚುವರಿ ಭದ್ರತಾ ಕ್ರಮಗಳು ಅಭ್ಯರ್ಥಿಗಳ ಮಾನಸಿಕ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಅವರ ಪರೀಕ್ಷಾ ಒತ್ತಡವನ್ನು ಮತ್ತಷ್ಟು ಹೆಚ್ಚಿಸಲಿವೆ ಎಂಬುದು ಅಣ್ಣಾಮಲೈ ಅಭಿಪ್ರಾಯ.
ʼʼಸೋರಿಕೆಯನ್ನು ತಡೆಗಟ್ಟಲು ಸರ್ಕಾರ ತೆಗೆದುಕೊಂಡಿರುವ ಪ್ರಯತ್ನಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿ ಮೆಚ್ಚುತ್ತಾರೆ. ಆದರೆ ಪ್ರವೇಶಕ್ಕೂ ಮುನ್ನ ಪರಿಶೀಲನೆ ಹೆಚ್ಚಳ, ವಿಸ್ತೃತ ಶೋಧನೆ ಮತ್ತು ಒಟ್ಟಾರೆ ಪರೀಕ್ಷಾ ಸಮಯವನ್ನು 180 ನಿಮಿಷಗಳಿಂದ 195 ನಿಮಿಷಗಳಿಗೆ ಹೆಚ್ಚಿಸುವುದರಿಂದ ವಿದ್ಯಾರ್ಥಿಗಳ ಪರೀಕ್ಷಾ ಒತ್ತಡ ಮತ್ತುಷ್ಟು ಹೆಚ್ಚಾಗುತ್ತದೆʼʼ ಎಂದು ಅಣ್ಣಾಮಲೈ ವಾದಿಸಿದರು.
ವಿದ್ಯಾರ್ಥಿಗಳು ಪ್ರಸ್ತುತ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಣ್ಣಾಮಲೈ ಹೇಳಿದರು. ಇತ್ತ ಪ್ರವೇಶ ಕಾರ್ಡ್ಗೆ ಸಂಬಂಧಿಸಿದ ತಾಂತ್ರಿಕ ದೋಷಗಳು ಮತ್ತು ಸರ್ವರ್ ಸಮಸ್ಯೆಗಳನ್ನು ಎನ್ಟಿಎ ಒಪ್ಪಿಕೊಂಡಿದೆ. ತಮ್ಮ ತಂಡಗಳು ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿವೆ ಎಂದು ಒತ್ತಿ ಹೇಳಿದೆ.