ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉಕ್ಕಿ ಹರಿಯುವ ನದಿಯ ಮಧ್ಯೆ ಜೀವ ಪಣಕ್ಕಿಟ್ಟು ಶಾಲೆಗೆ ತೆರಳುವ ಮಕ್ಕಳು; ವೈರಲ್ ವಿಡಿಯೊ ಇಲ್ಲಿದೆ

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಕರುವಾ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ಪ್ರತಿದಿನ ಬೆಟ್ವಾ ನದಿಯ ಮೇಲಿನ ಕಿರಿದಾದ ಸ್ಟಾಪ್ ಡ್ಯಾಂ ದಾಟುತ್ತಿದ್ದಾರೆ. ಸುರಕ್ಷಿತ ರಸ್ತೆ ಬಳಸಲು 8–10 ಕಿ.ಮೀ. ಸುತ್ತು ಹೋಗಬೇಕಾಗಿರುವುದರಿಂದ ಮಕ್ಕಳು ಜೀವದ ಹಂಗು ತೊರೆದು ಈ ಅಪಾಯಕಾರಿ ಮಾರ್ಗವನ್ನೇ ಆಯ್ಕೆ ಮಾಡುತ್ತಿದ್ದಾರೆ. ವೈರಲ್ ವಿಡಿಯೋ ಬಳಿಕ ಆಡಳಿತ ಸೈಕಲ್ ವಿತರಣೆ, ತಾತ್ಕಾಲಿಕ ಸೇತುವೆ ನಿರ್ಮಾಣ ಹಾಗೂ ಹೊಸ ಶಾಲೆ ಆರಂಭಿಸುವ ಭರವಸೆ ನೀಡಿದೆ.

ನದಿ ದಾಟುವ ಮಕ್ಕಳ ವಿಡಿಯೊ ವೈರಲ್

ಭೋಪಾಲ್‌, ಆ. 4: ವಿಡಿಯೊ ಗೇಮ್‌ಗಳಾದ Subway Surfers ಅಥವಾ Super Mario ದೃಶ್ಯವನ್ನು ನೆನಪಿಸುವಂತೆ ಕಾಣುವ ಈ ದೃಶ್ಯ ವಾಸ್ತವದಲ್ಲಿ ಮಧ್ಯ ಪ್ರದೇಶದ ಶಾಲಾ ಮಕ್ಕಳ ದಿನನಿತ್ಯದ ಬದುಕಿನ ಕಹಿ ಸತ್ಯ. ವಿದಿಶಾ ಜಿಲ್ಲೆಯ ಪಲೋಹ್ ಗ್ರಾಮದ ಬಳಿ ಹರಿಯುವ ಬೆಟ್ವಾ ನದಿ ಮೇಲಿನ ಕಿರಿದಾದ ಸ್ಟಾಪ್ ಡ್ಯಾಂ ಅನ್ನು ದಾಟಿ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ಆತಂಕಕ್ಕೆ ಕಾರಣವಾಗಿದೆ.

ನದಿಯ ಆಚೆ ಇರುವ ಕರುವಾ ಗ್ರಾಮದ ಮಕ್ಕಳು ಪಲೋಹ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗೆ ತಲುಪಲು ಅಧಿಕೃತ ರಸ್ತೆ ಮಾರ್ಗವಿದ್ದರೂ, ಅದನ್ನು ಬಳಸಬೇಕಾದರೆ ಪ್ರತಿದಿನ 8 ರಿಂದ 10 ಕಿಲೋಮೀಟರ್ ಹೆಚ್ಚುವರಿ ಪ್ರಯಾಣ ಮಾಡಬೇಕಾಗುತ್ತದೆ. ಸಮಯ ಮತ್ತು ದೂರವನ್ನು ತಪ್ಪಿಸಲು ಮಕ್ಕಳು ವೇಗವಾಗಿ ಹರಿಯುವ ನೀರಿನ ಮಧ್ಯೆಯೇ ಸ್ಟಾಪ್ ಡ್ಯಾಂ ಮೇಲೆ ನಡೆದು ಶಾಲೆಗೆ ಹೋಗುವ ಅಪಾಯಕಾರಿ ಮಾರ್ಗವನ್ನೇ ಆಯ್ಕೆ ಮಾಡುತ್ತಿದ್ದಾರೆ.

ವೈರಲ್‌ ವಿಡಿಯೊ ಇಲ್ಲಿದೆ:



ವಿಡಿಯೊ ವೈರಲ್ ಆದ ಬಳಿಕ ಸ್ಥಳೀಯ ಆಡಳಿತ ಪರಿಶೀಲನೆ ನಡೆಸಿದ್ದು, ಘಟನೆ ನಿಜವೆಂದು ದೃಢಪಡಿಸಿದೆ. ವಿದಿಶಾ ಉಪವಿಭಾಗಾಧಿಕಾರಿ ಕ್ಷಿತಿಜ್ ಶರ್ಮಾ ಮಾತನಾಡಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸೈಕಲ್‌ಗಳನ್ನು ವಿತರಿಸಲಾಗುವುದು, ಇದರಿಂದ ಅವರು ಸುರಕ್ಷಿತ ರಸ್ತೆ ಮಾರ್ಗವನ್ನು ಬಳಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ನ್ಯಾಯ ಸಿಕ್ಕಿಲ್ಲ ಎಂದು ಬೇಸತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿದ ಯುವತಿ!

ಇದರ ಜತೆಗೆ, ಬೆಟ್ವಾ ನದಿಗೆ ತಾತ್ಕಾಲಿಕ ಸೇತುವೆ ನಿರ್ಮಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲದೆ, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕರುವಾ ಗ್ರಾಮ ಅಥವಾ ಸಮೀಪದ ಪ್ರದೇಶದಲ್ಲಿ ಹೊಸ ಶಾಲೆ ಆರಂಭಿಸುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಆದರೆ ಸ್ಥಳೀಯ ಮಕ್ಕಳು ಕಳೆದ ನಾಲ್ಕರಿಂದ ಐದು ವರ್ಷಗಳಿಂದ ಇದೇ ಮಾರ್ಗದಲ್ಲಿ ಶಾಲೆಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಮಳೆಗಾಲದಲ್ಲಿ ನದಿಯ ನೀರಿನ ಹರಿವು ಮತ್ತಷ್ಟು ಹೆಚ್ಚಾದರೂ, ಬೇರೆ ಪ್ರಾಯೋಗಿಕ ಪರ್ಯಾಯವಿಲ್ಲದ ಕಾರಣ ಜೀವದ ಹಂಗು ತೊರೆದು ಇದೇ ದಾರಿಯಲ್ಲಿ ಸಂಚರಿಸಬೇಕಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, "ಇಷ್ಟು ವರ್ಷಗಳಿಂದ ಮಕ್ಕಳು ಅಪಾಯದ ನಡುವೆ ಶಾಲೆಗೆ ತೆರಳುತ್ತಿದ್ದರೂ ಆಡಳಿತ ಮತ್ತು ಶಿಕ್ಷಣ ಇಲಾಖೆ ಏಕೆ ಕ್ರಮ ಕೈಗೊಂಡಿರಲಿಲ್ಲ?" ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ, ವಿಡಿಯೋ ವೈರಲ್ ಆದ ಬಳಿಕವೇ ಅಧಿಕಾರಿಗಳು ಎಚ್ಚೆತ್ತರೇ? ಎಂದು ಹಲವರು ಟೀಕಿಸಿದ್ದಾರೆ.

ಈ ಘಟನೆ ಗ್ರಾಮೀಣ ಪ್ರದೇಶಗಳಲ್ಲಿನ ಮೂಲಸೌಕರ್ಯ ಕೊರತೆ, ಶಾಲಾ ಸಂಪರ್ಕ ವ್ಯವಸ್ಥೆಯ ದುರ್ಬಲತೆ ಮತ್ತು ಮಕ್ಕಳ ಸುರಕ್ಷತೆಯ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.