ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾಮಿಡಿ ಶೋನಲ್ಲಿ ಪುರುಷ ಶವದ ಕುರಿತು ಹೇಳಿಕೆ: ಮುಂಬೈ ವೈದ್ಯಕೀಯ ವಿದ್ಯಾರ್ಥಿನಿ ವಿರುದ್ಧ ತನಿಖೆ

ಮುಂಬೈನ ಕೆಇಎಂ ಆಸ್ಪತ್ರೆಯ ಎಂಬಿಬಿಎಸ್ ವಿದ್ಯಾರ್ಥಿನಿ ಸೆಜಾಲ್ ಪವಾರ್ ಕಾಮಿಡಿ ಶೋನಲ್ಲಿ ವೈದ್ಯಕೀಯ ಶವಗಳ ಕುರಿತು ನೀಡಿದ ಅಸೂಕ್ಷ್ಮ ಹಾಸ್ಯಾತ್ಮಕ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ದೇಹದಾನಿಗಳ ಗೌರವಕ್ಕೆ ಧಕ್ಕೆ ತಂದ ಆರೋಪದ ಹಿನ್ನೆಲೆ ಆಸ್ಪತ್ರೆ ಆಡಳಿತ ತನಿಖೆಗೆ ಆದೇಶಿಸಿದ್ದು, ವೈದ್ಯಕೀಯ ವಿದ್ಯಾರ್ಥಿ ಸಂಘಟನೆಗಳು ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ಸಾರ್ವಜನಿಕ ಆಕ್ರೋಶದ ಬಳಿಕ ವಿದ್ಯಾರ್ಥಿನಿ ಕ್ಷಮೆಯಾಚಿಸಿದ್ದಾರೆ.

ಕಾಮಿಡಿಯನ್ ಪ್ರಣೀತ್ ಮೋರೆ- ವಿದ್ಯಾರ್ಥಿನಿ ಸೆಜಾಲ್ ಪವಾರ್

ಮುಂಬೈ: ಮುಂಬೈ (Mumbai)ನ ಕೆಇಎಂ ಆಸ್ಪತ್ರೆಯ (KEM Hospital) ಎಂಬಿಬಿಎಸ್ ವಿದ್ಯಾರ್ಥಿನಿ ಸೆಜಾಲ್ ಪವಾರ್ (Sejal Pawar), ಕಾಮಿಡಿಯನ್ ಪ್ರಣೀತ್ ಮೋರೆ (Pranit More) ಅವರ ಶೋನಲ್ಲಿ ವೈದ್ಯಕೀಯ ಶವಗಳ ಜನನಾಂಗದ ಗಾತ್ರವನ್ನು ಹೋಲಿಸುವ ಕುರಿತು 'ಹಾಸ್ಯ'ವಾಗಿ ನೀಡಿದ ಹೇಳಿಕೆಯು, ಮೂರು ತಿಂಗಳ ನಂತರ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆ ಮೂಲಕ ದೇಹದಾನಿಗಳಿಗೆ ಅಪಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದ್ದು ಅವರ ವಿರುದ್ಧ ಆಸ್ಪತ್ರೆ ಆಡಳಿತ ಮಂಡಳಿಯು ತನಿಖೆಗೆ ಆದೇಶಿಸಿದೆ.

"ಮೃತ ದೇಹಗಳ ಬಗ್ಗೆ ಮಾತನಾಡುವಾಗ ನಾವು ಅತ್ಯಂತ ಸಂವೇದನಾಶೀಲರಾಗಿರುತ್ತೇವೆ. ಇಂತಹ ಬೇಜವಾಬ್ದಾರಿ ಕಾಮೆಂಟ್‌ಗಳನ್ನು ಸಹಿಸಲು ಸಾಧ್ಯವಿಲ್ಲ" ಎಂದು ಕೆಇಎಂ ಆಸ್ಪತ್ರೆಯ ಡೀನ್ ಡಾ. ಹರೀಶ್ ಪಾಠಕ್ ತಿಳಿಸಿದ್ದು, ಈ ಪ್ರಕರಣದ ತನಿಖೆಗಾಗಿ ಇಬ್ಬರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದ್ದಾರೆ. ಅಖಿಲ ಭಾರತ ವೈದ್ಯಕೀಯ ವಿದ್ಯಾರ್ಥಿಗಳ ಸಂಘ (ಎಐಎಂಎಸ್ಎ) ಕೂಡ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಮತ್ತೊಂದೆಡೆ, ಇದೇ ಶೋನಲ್ಲಿ ಹಿಮಾಂಶು ಜಾಂಗ್ರಾ ಎಂಬ ವ್ಯಕ್ತಿ, ಡೇಟಿಂಗ್ ವೇಳೆ ಕೇವಲ 370 ರೂಪಾಯಿ ಬಿರಿಯಾನಿಗೆ ಖರ್ಚು ಮಾಡಿದ್ದಕ್ಕೆ ತಾನು ಮಹಿಳೆಯಿಂದ ದೈಹಿಕ ಸಾಮೀಪ್ಯವನ್ನು ನಿರೀಕ್ಷಿಸಬಹುದು ಎಂಬ ಲೈಂಗಿಕ ದೌರ್ಜನ್ಯ ಪ್ರೇರಿತ ಹೇಳಿಕೆ ನೀಡಿದ್ದನು. ಈ '370 ರೂ. ಬಿರಿಯಾನಿ' ವಿವಾದ ಮತ್ತು ಶವಗಳ ಕುರಿತಾದ ಅಸೂಕ್ಷ್ಮ ಹಾಸ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿವೆ.

ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕನನ್ನು ಸಿನಿಮೀಯ ಶೈಲಿಯಲ್ಲಿ ರಕ್ಷಣೆ ಮಾಡಿದ ಕಾನ್‌ಸ್ಟೆಬಲ್!

ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಸೆಜಾಲ್ ಪವಾರ್ ಮತ್ತು ಹಿಮಾಂಶು ಇಬ್ಬರೂ ಕ್ಷಮೆಯಾಚಿಸಿದ್ದಾರೆ. "ಜನರ ಭಾವನೆಗಳಿಗೆ ಧಕ್ಕೆಯಾಗಿರುವುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನನ್ನ ಉದ್ದೇಶ ಯಾರಿಗೂ ಗೌರವ ಕಡಿಮೆ ಮಾಡುವುದಾಗಿರಲಿಲ್ಲ. ಆದರೂ ಪ್ರಭಾವವೇ ಮುಖ್ಯ ಎಂದು ನನಗೆ ಅರಿವಾಗಿದೆ. ಇದೊಂದು ದೊಡ್ಡ ಪಾಠವಾಗಿದ್ದು, ನನ್ನ ತಪ್ಪಿಗೆ ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ" ಎಂದು ಸೆಜಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆಗಾಗಿ ನಿಸ್ವಾರ್ಥವಾಗಿ ದೇಹದಾನ ಮಾಡುವ ದಾನಿಗಳ ಕೊಡುಗೆಗೆ ಅತ್ಯುನ್ನತ ಗೌರವ ನೀಡಬೇಕು ಎಂದು ಎಐಎಂಎಸ್‌ಎ ನೆನಪಿಸಿದೆ. ಇಂತಹ ಅಸೂಕ್ಷ್ಮ ಕಂಟೆಂಟ್‌ಗಳನ್ನು ಸಾಮಾಜಿಕ ಮಾಧ್ಯಮ ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಪ್ರಸಾರ ಮಾಡದಂತೆ ಮತ್ತು ಹರಡದಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ವಿದ್ಯಾರ್ಥಿ ಸಂಘಟನೆಯು ತುರ್ತು ಮನವಿ ಮಾಡಿದೆ. ಈ ಘಟನೆಯು ವೈದ್ಯಕೀಯ ವೃತ್ತಿಪರತೆ ಮತ್ತು ಸಾರ್ವಜನಿಕ ನೈತಿಕತೆಯ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.