ಹರಿಯಾಣ: ಕರ್ನಾಟಕದಲ್ಲಿ (Karnataka State) ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ (muslim reservation) ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಹರಿಯಾಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್ ಸರಕಾರ ಮೀಸಲಾತಿ ಕಲ್ಪಿಸಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಲಾಗಿದೆ. ಎಸ್ ಸಿ, ಎಸ್ ಟಿ, ಒಬಿಸಿ ವರ್ಗದ ಜನರಿಗೆ ಕಾಂಗ್ರೆಸ್ ವಂಚನೆ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಹರಿಯಾಣದ ಹಿಸಾರ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಹಾಳು ಮಾಡುವ ರೀತಿಯಲ್ಲಿ ಕಾಂಗ್ರೆಸ್ ವಕ್ಫ್ ಕಾನೂನನ್ನು ಮಾಡಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನ ದುಷ್ಟ ಪದ್ಧತಿಗಳಿಗೆ ದೊಡ್ಡ ಪುರಾವೆ ವಕ್ಫ್ ಕಾಯ್ದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಾಂಗ್ರೆಸ್ 2013 ರಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿತು. ಕಾಂಗ್ರೆಸ್ ವಕ್ಫ್ ಅನ್ನು ಸಂವಿಧಾನಕ್ಕಿಂತ ಮೇಲಿರಿಸಿತು. ಕಾಂಗ್ರೆಸ್ ಮೂಲಭೂತವಾದಿಗಳನ್ನು ಸಂತುಷ್ಟೀಕರಣ ಮಾಡಿತು. ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಅನ್ನು ತೃಪ್ತಿಪಡಿಸಿಕೊಳ್ಳಲು ತರಾತುರಿಯಲ್ಲಿ ತಿದ್ದುಪಡಿಗಳನ್ನು ಮಾಡಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: Basavaraj Bommai: ರೈಲ್ವೆ ಇಲಾಖೆಯಲ್ಲಿ ಕ್ರಾಂತಿ ಮಾಡಿರುವ ಪ್ರಧಾನಿ ಮೋದಿ: ಬಸವರಾಜ ಬೊಮ್ಮಾಯಿ