ನವದೆಹಲಿ: ದೆಹಲಿ-ಎನ್ಸಿಆರ್ನಲ್ಲಿ ಸೋಮವಾರ 4.0 ತೀವ್ರತೆಯ ಭೂಕಂಪ (Delhi Earthquake) ಸಂಭವಿಸಿದ್ದು, ಭೂಮಿಯ ಕಂಪನಕ್ಕೆ ಜನತೆ ಬೆಚ್ಚಿ ಬಿದ್ದಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಉತ್ತರ ಭಾರತದಾದ್ಯಂತ ಕಂಪನದ ಅನುಭವವಾಗಿದ್ದು, ದೆಹಲಿ ಕೇಂದ್ರಬಿಂದುವಾಗಿದೆ. ಬೆಳಗ್ಗೆ 5.36 ಸುಮಾರಿಗೆ ಭೂಮಿ ಕಂಪಿಸಿದೆ. ಭೂಮಿಯ ಕಂಪನಕ್ಕೆ ಬೆದರಿದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪನದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. 5 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.
ಭೂಕಂಪನದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ದೆಹಲಿ ಪೊಲೀಸರು ದೆಹಲಿಯ ಜನರೇ ನೀವೆಲ್ಲರೂ ಸುರಕ್ಷಿತವಾಗಿದ್ದೀರಿ ಎಂದು ನಾವು ಭಾವಿಸುತ್ತೇವೆ. ತುರ್ತು ಸಂದರ್ಭಗಳಲ್ಲಿ ನಾಗರಿಕರು 112 ಸಹಾಯವಾಣಿಗೆ ಕರೆ ಮಾಡಿ ಎಂದು ಹೇಳಿದ್ದಾರೆ. ಭೂಮಿ ಕಂಪಿಸಿದ್ದರಿಂದ ಭಯಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ತನ್ನ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕನೊಬ್ಬ ಭೂಕಂಪನದ ಅನುಭವದ ಬಗ್ಗೆ ಮಾತನಾಡಿ ರೈಲು ಅಪಘಾತಕ್ಕೀಡಾದಂತೆ ಅಥವಾ ಸೇತುವೆ ಕುಸಿದಂತೆ ಭಾಸವಾಯಿತು ಎಂದು ಹೇಳಿದರು. ನಾನು ವೇಟಿಂಗ್ ರೂಂನಲ್ಲಿದ್ದೆ, ಯಾವುದೋ ಸೇತುವೆ ಅಥವಾ ಏನಾದರೂ ಕುಸಿದಂತೆ ಭಾಸವಾಯಿತು. ಎಲ್ಲರೂ ಹೊರಗೆ ಓಡಿ ಹೋದೆವು ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Delhi Earthquake: ದೆಹಲಿಯಲ್ಲಿ ಪ್ರಬಲ ಭೂಕಂಪ; 4.0 ತೀವ್ರತೆ ದಾಖಲು
ಗಾಜಿಯಾಬಾದ್ ನಿವಾಸಿಯೊಬ್ಬರು ಈ ಹಿಂದೆಂದೂ ಇಂತಹ ಅನುಭವ ಆಗಿರಲಿಲ್ಲ ಎಂದು ಹೇಳಿದರು. "ನಡುಕಗಳು ತುಂಬಾ ಬಲವಾಗಿದ್ದವು. ರೈಲು ಹತ್ತಿರದಲ್ಲಿ ಚಲಿಸುತ್ತಿರುವಂತೆ ಭಾಸವಾಯಿತು. ಎಲ್ಲವೂ ನಡುಗುತ್ತಿತ್ತು. ನನಗೆ ಇದುವರೆಗೆ ಈ ರೀತಿ ಅನುಭವ ಆಗಿರಲಿಲ್ಲ. ಇಡೀ ಕಟ್ಟಡವೇ ನಡುಗುತ್ತಿತ್ತು ಎಂದು ಹೇಳಿದ್ದಾರೆ.