ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉತ್ತಮ ವೇತನಕ್ಕೆ ಆಗ್ರಹಿಸಿ ನೋಯ್ಡಾದಲ್ಲಿ ಭಾರಿ ಪ್ರತಿಭಟನೆ: ಭುಗಿಲೆದ್ದ ಕಾರ್ಮಿಕರ ಆಕ್ರೋಶ; ವಾಹನಗಳಿಗೆ ಬೆಂಕಿ

ಉತ್ತರ ಪ್ರದೇಶದ ನೋಯ್ಡಾ ಫೇಸ್-2 ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರು ವೇತನ ಹೆಚ್ಚಳ ಮತ್ತು ಸೌಲಭ್ಯಗಳಿಗಾಗಿ ನಡೆಸಿದ ಪ್ರತಿಭಟನೆ ಹಿಂಸೆಗೆ ತಿರುಗಿದೆ. ಇದರಿಂದ ವಾಹನ ಧ್ವಂಸವಾಗಿದ್ದು, ಕಲ್ಲು ತೂರಾಟ ನಡೆದಿದೆ. ಹರಿಯಾಣದಲ್ಲಿ ಕನಿಷ್ಠ ವೇತನ ಹೆಚ್ಚಳವಾದ ಹಿನ್ನೆಲೆ, ಅದೇ ಮಾದರಿಯಲ್ಲಿ ವೇತನ ನೀಡಬೇಕೆಂದು ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದು, ಶೀಘ್ರದಲ್ಲೇ ಮಾಲೀಕರೊಂದಿಗೆ ಮಾತುಕತೆ ನಡೆಯಲಿದೆ.

ನೋಯ್ಡಾದಲ್ಲಿ ಆಕ್ರೋಶಕ್ಕೆ ತುತ್ತಾದ ವಾಹನ

ಲಖನೌ, ಏ. 13: ನೋಯ್ಡಾದ (Noida) ಕಾರ್ಖಾನೆ ಕಾರ್ಮಿಕರ ಬೃಹತ್ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ವಾಹನಗಳನ್ನು ಧ್ವಂಸಗೊಳಿಸಿ ಕಲ್ಲು ತೂರಾಟ ನಡೆಸಿದ್ದಾರೆ. ನೋಯ್ಡಾದ ಫೇಸ್-2 ಪ್ರದೇಶದಲ್ಲಿರುವ ಕೈಗಾರಿಕಾ ಘಟಕಗಳ ಕಾರ್ಮಿಕರು ವೇತನ ಹೆಚ್ಚಳ ಮತ್ತು ಇತರ ಸವಲತ್ತುಗಳಿಗೆ ಆಗ್ರಹಿಸಿ ನಡೆಸುತ್ತಿರುವ ಈ ಪ್ರತಿಭಟನೆಯಿಂದಾಗಿ ಸೋಮವಾರ (ಏಪ್ರಿಲ್‌ 13) ಬೆಳಗ್ಗೆ ಸಂಚಾರಕ್ಕೆ ತಿರುಗಿ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಸ್ಥಳಕ್ಕೆ ಹೆಚ್ಚಿನ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ.

ಹರಿಯಾಣ ಸರ್ಕಾರವು ಇತ್ತೀಚೆಗೆ ಕಾರ್ಮಿಕರ ಕನಿಷ್ಠ ವೇತನವನ್ನು ಶೇ. 35ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿರುವುದು ಈ ಕಿಚ್ಚಿಗೆ ಕಾರಣವಾಗಿದೆ. ಹರಿಯಾಣದಲ್ಲಿ ಕರಕುಶಲ ಕಾರ್ಮಿಕರ ವೇತನ 11,274 ರುಪಾಯಿಯಂದ 15,220 ರುಪಾಯಿಗೆ ಏರಿಕೆಯಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡ ನೋಯ್ಡಾ ಕಾರ್ಮಿಕರು, ಪಕ್ಕದ ರಾಜ್ಯದಲ್ಲಿ ಸಮಾನ ಕೆಲಸಕ್ಕೆ ಹೆಚ್ಚಿನ ವೇತನ ಸಿಗುತ್ತಿರುವಾಗ ತಮಗೂ ವೇತನ ಹೆಚ್ಚಳ ಮಾಡಬೇಕೆಂದು ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ನೋಯ್ಲಾಡದಲ್ಲಿ ಭುಗಿಲೆದ್ದ ಹಿಂಸಾಚಾರ:



ಪ್ರತಿಭಟನೆ ನಿರತ ಲಕ್ಷ್ಮಿ ಮಾತನಾಡಿ, "ನಮಗೆ ತಿಂಗಳಿಗೆ 20,000 ರುಪಾಯಿ ಕನಿಷ್ಠ ವೇತನ ಮತ್ತು ಓವರ್‌ಟೈಮ್ ಭತ್ಯೆ ಬೇಕು. ಇಲ್ಲಿ ನಮ್ಮನ್ನು ಶೋಷಿಸಲಾಗುತ್ತಿದೆ, ಮಹಿಳೆಯರಿಗೆ ಸುರಕ್ಷತೆ ಇಲ್ಲ ಮತ್ತು ಸರಿಯಾದ ಸಮಯಕ್ಕೆ ಊಟವೂ ಸಿಗುತ್ತಿಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ. ಅಕ್ಷಯ್ ಎಂಬ ಮತ್ತೊಬ್ಬ ಕಾರ್ಮಿಕ, ʼʼಗುರುಗ್ರಾಮದ ಕಂಪನಿಗಳು ಈಗಾಗಲೇ ಹೆಚ್ಚಿನ ವೇತನ ನೀಡುತ್ತಿವೆ. ಆದರೆ ನಮಗೆ ಕೇವಲ 10,000 ರುಪಾಯಿ ನೀಡಲಾಗುತ್ತಿದೆʼʼ ಎಂದು ದೂರಿದ್ದಾರೆ.

ಮಗಳ ಮೃತದೇಹದೊಂದಿಗೆ ದಿನ ಕಳೆದ ತಂದೆ; ವಾಸನೆ ಹೊರಬರದಿರಲು ಪರ್‌ಫ್ಯೂಮ್‌ ಸ್ಪ್ರೇ

ಯೋಗಿ ಆದಿತ್ಯನಾಥ್ ಹೇಳಿದ್ದೆನು?

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಪ್ರತಿ ಕಾರ್ಮಿಕರಿಗೂ ಗೌರವಯುತ ವೇತನ ಮತ್ತು ಸುರಕ್ಷಿತ ಕೆಲಸದ ವಾತಾವರಣ ಸಿಗಬೇಕು. ಕೈಗಾರಿಕೆಗಳು ಕಾರ್ಮಿಕ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ಸೂಚಿಸಿದ್ದಾರೆ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಅಲ್ಲದೆ, ಇದು "ಸತ್ತು ಹೋಗಿರುವ ನಕ್ಸಲಿಸಂ ಅನ್ನು ಪುನಶ್ಚೇತನಗೊಳಿಸುವ ಪಿತೂರಿ" ಇರಬಹುದು ಎಂದು ಎಚ್ಚರಿಸಿದ್ದಾರೆ.

ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಶಾಂತಿ ಕಾಪಾಡುವಂತೆ ಕಾರ್ಮಿಕರಲ್ಲಿ ಮನವಿ ಮಾಡಿದ್ದು, ವದಂತಿಗಳಿಗೆ ಕಿವಿಗೊಡದಂತೆ ಮತ್ತು ಯಾವುದೇ ಸಹಾಯಕ್ಕಾಗಿ ಜಿಲ್ಲಾಡಳಿತದ ಕಂಟ್ರೋಲ್ ರೂಂ ಸಂಖ್ಯೆಗಳನ್ನು ಸಂಪರ್ಕಿಸುವಂತೆ ವಿನಂತಿಸಿದ್ದಾರೆ. ಕಾರ್ಮಿಕ ಇಲಾಖೆಯು ಶೀಘ್ರದಲ್ಲೇ ಕೈಗಾರಿಕಾ ಮಾಲೀಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದೆ. ಸದ್ಯಕ್ಕೆ ಕೈಗಾರಿಕಾ ವಲಯದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸರು ನಿರಂತರ ಗಸ್ತು ನಡೆಸುತ್ತಿದ್ದಾರೆ.