ನವದೆಹಲಿ: ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ (NTA) ಮೇಜರ್ ಸರ್ಜರಿ ನಡೆದಿದೆ. ಪರೀಕ್ಷಾ ಅಕ್ರಮಗಳ ತಡೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬೆನ್ನಲ್ಲೇ 47 ಅಧಿಕಾರಿಗಳನ್ನು ಎನ್ಟಿಎ ವಜಾ ಮಾಡಿದೆ. ಮುಂದಿನ ಒಂದು ತಿಂಗಳೊಳಗೆ ವ್ಯಾಪಕ ರಚನಾತ್ಮಕ ಹಾಗೂ ತಾಂತ್ರಿಕ ಸುಧಾರಣೆಗಳನ್ನು ಜಾರಿಗೆ ತರುವ ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರ, ಈ ಪ್ರಕ್ರಿಯೆಯ ಭಾಗವಾಗಿ 47 ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
2017ರಲ್ಲಿ ಸ್ಥಾಪನೆಯಾದ NTA ದೇಶದ ಪ್ರಮುಖ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಾದ NEET-UG, JEE Main, CUET, UGC-NET ಸೇರಿದಂತೆ ವರ್ಷಕ್ಕೆ 15ರಿಂದ 20 ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ನಡೆಸುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಈ ಪರೀಕ್ಷೆಗಳ ಮೇಲೆ ಅವಲಂಬಿತವಾಗಿರುವುದರಿಂದ, ಸಂಸ್ಥೆಯ ಕಾರ್ಯವೈಖರಿಯನ್ನು ಮತ್ತಷ್ಟು ವಿಶ್ವಾಸಾರ್ಹಗೊಳಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.
ಸಿಬ್ಬಂದಿ ಬದಲಾವಣೆ ಮಾತ್ರವಲ್ಲ, ಸಂಪೂರ್ಣ ವ್ಯವಸ್ಥೆಯಲ್ಲೇ ಸುಧಾರಣೆ
ಮೂಲಗಳ ಪ್ರಕಾರ, ತೆರವುಗೊಳಿಸಲಾದ 47 ಸಿಬ್ಬಂದಿಯಲ್ಲಿ ಕೆಲವರ ವಿರುದ್ಧ ಶಿಸ್ತು ಕ್ರಮ ಮತ್ತು ಇಲಾಖಾ ತನಿಖೆ ನಡೆಯುವ ಸಾಧ್ಯತೆಯಿದೆ. ಸರ್ಕಾರ ಕೇವಲ ಸಿಬ್ಬಂದಿ ಬದಲಾವಣೆಗೆ ಸೀಮಿತವಾಗದೇ, NTAಯ ಆಡಳಿತ, ನಿರ್ವಹಣೆ ಮತ್ತು ಪರೀಕ್ಷಾ ಪ್ರಕ್ರಿಯೆಯನ್ನೇ ಸಂಪೂರ್ಣವಾಗಿ ಮರುಸಂರಚಿಸಲು ಮುಂದಾಗಿದೆ.
ಔಟ್ಸೋರ್ಸಿಂಗ್ ವ್ಯವಸ್ಥೆಗೆ ಹೊಸ ರೂಪ
ಪ್ರಸ್ತುತ NTA ಪ್ರಶ್ನೆಪತ್ರಿಕೆ ಮುದ್ರಣ, ಪರೀಕ್ಷಾ ಕೇಂದ್ರಗಳ ನಿರ್ವಹಣೆ, ತಾಂತ್ರಿಕ ಸೇವೆಗಳು ಸೇರಿದಂತೆ ಹಲವು ಕಾರ್ಯಗಳನ್ನು ಹೊರಗುತ್ತಿಗೆ ಸಂಸ್ಥೆಗಳ ಮೂಲಕ ನಿರ್ವಹಿಸುತ್ತದೆ. ಆದರೆ ಈ ವ್ಯವಸ್ಥೆಯಲ್ಲಿ ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ ಹೆಚ್ಚಿಸಲು ಸರ್ಕಾರ ಹೊಸ ನೀತಿಯನ್ನು ರೂಪಿಸುತ್ತಿದೆ. ಇದರಿಂದ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪ ಅಥವಾ ಅಕ್ರಮಗಳಿಗೆ ಅವಕಾಶ ಕಡಿಮೆಯಾಗುವ ನಿರೀಕ್ಷೆಯಿದೆ.
NEET ಸೋರಿಕೆ ವಿವಾದ: ಸಚಿವರ ರಾಜೀನಾಮೆ ಸಿಗುವವರೆಗೂ ಹೋರಾಟ ಎಂದ CJP
'ಲೀಕ್-ಪ್ರೂಫ್' ಪರೀಕ್ಷಾ ವ್ಯವಸ್ಥೆ ರೂಪಿಸುವ ಗುರಿ
ಪರೀಕ್ಷಾ ಸುಧಾರಣೆಗಾಗಿ ರಚಿಸಲಾದ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಹೊಸ ಕ್ರಮಗಳನ್ನು ಜಾರಿಗೆ ತರಲಾಗುತ್ತದೆ. ಕೃತಕ ಬುದ್ಧಿಮತ್ತೆ (AI), ಸುಧಾರಿತ ಡಿಜಿಟಲ್ ಮೇಲ್ವಿಚಾರಣೆ, ಬಲಿಷ್ಠ ಡೇಟಾ ಭದ್ರತಾ ವ್ಯವಸ್ಥೆ, ಪ್ರಶ್ನೆಪತ್ರಿಕೆ ಸುರಕ್ಷಿತ ನಿರ್ವಹಣೆ ಹಾಗೂ ರಿಯಲ್-ಟೈಮ್ ಮಾನಿಟರಿಂಗ್ ಸೇರಿದಂತೆ ಹಲವು ತಾಂತ್ರಿಕ ಕ್ರಮಗಳನ್ನು ಅಳವಡಿಸುವ ಕುರಿತು ಚರ್ಚೆ ನಡೆಯುತ್ತಿದೆ. ಇದರ ಉದ್ದೇಶ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯುವುದು.
NEET ವಿವಾದದ ಬಳಿಕ ಹೆಚ್ಚಿದ ಒತ್ತಡ
2024ರ NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆಯ ಪಾರದರ್ಶಕತೆ ಕುರಿತು ಪ್ರಶ್ನೆ ಎತ್ತಿದ್ದರೆ, ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿಯೂ ತನಿಖೆ ನಡೆದಿದ್ದು, ಪರೀಕ್ಷಾ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆ ಅಗತ್ಯ ಎಂಬ ಒತ್ತಾಯ ವ್ಯಕ್ತವಾಗಿತ್ತು.
ಪಾರದರ್ಶಕತೆ ಮತ್ತು ವಿಶ್ವಾಸ ಹೆಚ್ಚಿಸುವ ಪ್ರಯತ್ನ
ಕೇಂದ್ರ ಸರ್ಕಾರದ ಉದ್ದೇಶ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳನ್ನು ಇನ್ನಷ್ಟು ಪಾರದರ್ಶಕ, ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿಸುವುದಾಗಿದೆ. ಯೋಜನೆಯಂತೆ ಈ ಬದಲಾವಣೆಗಳು ಜಾರಿಯಾದರೆ, NTA ಸ್ಥಾಪನೆಯಾದ ಬಳಿಕದ ಅತಿದೊಡ್ಡ ಆಡಳಿತಾತ್ಮಕ ಮತ್ತು ತಾಂತ್ರಿಕ ಪುನರ್ರಚನೆಯಾಗಿ ಇದು ಗುರುತಿಸಿಕೊಳ್ಳಲಿದೆ. ಇದರ ಮೂಲಕ ವಿದ್ಯಾರ್ಥಿಗಳು ಯಾವುದೇ ಅನುಮಾನವಿಲ್ಲದೆ ನ್ಯಾಯಸಮ್ಮತ ಪರೀಕ್ಷಾ ವ್ಯವಸ್ಥೆಯಲ್ಲಿ ಭಾಗವಹಿಸುವಂತಾಗುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.