ನವದೆಹಲಿ: ಕಳೆದೊಂದು ವಾರದಿಂದ ಯುದ್ದೋನ್ಮಾದದಲ್ಲಿರುವ ಭಾರತ ಮತ್ತು ಪಾಕಿಸ್ತಾನ ಇದೀಗ ಯುದ್ಧಕ್ಕೆ ಬ್ರೇಕ್ ಹಾಕಿ ಪರಸ್ಪರ ಒಪ್ಪಂದ ಮಾಡಿಕೊಂಡಿರುವ ಮಹತ್ವದ ಸಂಗತಿಯೊಂಧು ಬೆಳಕಿಗೆ ಬಂದಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಭುಗಿಲೆದ್ದಿರುವ ಪಕ್ಷುಬ್ದತೆ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆಯೊಂದನ್ನ ಹೊರಡಿಸಿದ್ದಾರೆ. ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆಸಹಿ ಒಪ್ಪಿಗೆ ಸೂಚಿಸಿವೆ ಎಂದು ಹೇಳಿದ್ದಾರೆ. ವಾರಗಳಿಂದ ನಡೆಯುತ್ತಿದ್ದ ಭಾರತ ಹಾಗೂ ಪಾಕಿಸ್ತಾನ ನಡುವೆ ಕೊನೆಗೂ ಕದನ ವಿರಾಮ ಘೋಷಣೆ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಎಕ್ಸ್ನಲ್ಲಿ ಟ್ವೀಟ್ ಮಾಡಿದ ಟ್ರಂಪ್ ಭಾರತ ಹಾಗೂ ಪಾಕಿಸ್ತಾನ ಪೂರ್ಣ ಪ್ರಮಾಣದ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದಾರೆ.ಇದರ ಬೆನ್ನಲ್ಲೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಇದನ್ನು ಖಚಿತಪಡಿಸಿದೆ.
India Pakistan news live Update: ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನದ ವಿರುದ್ಧ ಸೂಕ್ತ ಕ್ರಮ: ವಿಕ್ರಮ್ ಮಿಸ್ರಿ
ಪಹಲ್ಗಾಮ್ನಲ್ಲಿ ನಡೆದ ಪ್ರವಾಸಿಗರ ಮಾರಣಹೋಮಕ್ಕೆ ಪ್ರತೀಕಾರವಾಗಿ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರನ್ನು ಸದೆ ಬಡೆದಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಮತ್ತೆ ಭಾರತದ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದು, ಭಾರತದ ಗಡಿ ಜಿಲ್ಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ಮತ್ತು ಡ್ರೋನ್ ದಾಳಿಗಳನ್ನು ಮುಂದುವರೆಸಿದೆ. ಭಾರತೀಯ ಸೇನಾ ಪಡೆ ಕೂಡ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಉಭಯ ರಾಷ್ಟ್ರಗಳ ನಡುವಿನ ಪ್ರಕ್ಷುಬ್ದತೆ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಭಯೋತ್ಪಾದಕರು ಗಡಿಯಾಚೆಗಿದ್ದರೂ ಬಿಡುವುದಿಲ್ಲ: ರಾಜನಾಥ್ ಸಿಂಗ್
ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ನಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕವನ್ನು ವರ್ಚುವಲ್ ಆಗಿ ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಶ್ಲಾಘಿಸಿದರು. ʼʼಭಾರತ ಮಾತೆಯ ಹಣೆಯ ಮೇಲೆ ದಾಳಿ ಮಾಡಿದ, ಅನೇಕ ಕುಟುಂಬಗಳ ಸಿಂದೂರವನ್ನು ಅಳಿಸಿದ, ಭಾರತ ವಿರೋಧಿ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಭಾರತೀಯ ಸೇನೆಯು ಆಪರೇಷನ್ ಸಿಂದೂರ್ ಮೂಲಕ ಪಾಠ ಕಲಿಸಿದೆʼʼ ಎಂದು ತಿಳಿಸಿದರು.
ಪುಲ್ವಾಮಾ ದಾಳಿ ನಮ್ಮ ಯುದ್ದತಂತ್ರದ ನೈಪುಣ್ಯತೆ: ಪಾಕ್
2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ತನ್ನ ಭಾಗಿಯಾಗುವಿಕೆಯನ್ನು ಪಾಕಿಸ್ತಾನ ಹಲವು ವರ್ಷಗಳಿಂದ ನಿರಾಕರಿಸಿತ್ತು. ಆದರೆ ಇದೀಗ ಪಾಕ್ನ ವಾಯುಪಡೆಯ ಉನ್ನತ ಅಧಿಕಾರಿಯೇ ಈ ದಾಳಿಯನ್ನು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ವಾಯುಪಡೆಯ ಏರ್ ವೈಸ್ ಮಾರ್ಷಲ್ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕ (ಡಿಜಿಪಿಆರ್) ಔರಂಗಜೇಬ್ ಅಹ್ಮದ್ (Aurangzeb Ahmed) ಪತ್ರಿಕಾಗೋಷ್ಠಿಯಲ್ಲಿ, ಪುಲ್ವಾಮಾ ದಾಳಿಯನ್ನು ಪಾಕ್ ಸೇನೆಯ 'ಯುದ್ಧತಂತ್ರದ ಪ್ರತಿಭೆ'ಗೆ ಒಂದು ಉದಾಹರಣೆ ಎಂದು ಬಣ್ಣಿಸಿದ್ದಾರೆ.
ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ ಚೀನಾ
ಕುತಂತ್ರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ಮಾಡಿದೆ. ಈ ದಾಳಿಗೆ ಭಾರತೀಯ ಸೇನೆ ಸರಿಯಾಗಿಯೇ ತಿರುಗೇಟು ನೀಡಿದ್ದು, ಎಲ್ಲ ಡ್ರೋನ್ಗಳನ್ನು ಧ್ವಂಸ ಮಾಡಿದೆ. ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ಭಾರತ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಇತ್ತ ಚೀನಾ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನದ ಬೆನ್ನಿಗೆ ನಿಂತು ಬೆಂಬಲ ಸೂಚಿಸಿದೆ. ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸಿದ ಕೆಲವೇ ನಿಮಿಷಗಳ ನಂತರ, ಚೀನಾವು ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಬೀಜಿಂಗ್ ಇಸ್ಲಾಮಾಬಾದ್ ಜತೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದೆ.
ಏರ್ ಫೋರ್ಸ್ ಅಧಿಕಾರಿ ಹುತಾತ್ಮ
ಭಾರತವನ್ನು ಕೆಣಕಲು ಹೋಗಿ ಸರಿಯಾಗಿ ಪೆಟ್ಟು ತಿಂದರೂ ಬುದ್ಧಿ ಕಲಿಯದ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದೆ. ಪಾಕ್ನ ಈ ದಾಳಿಯಿಂದಾಗಿ ಮೇ 10ರಂದು ಭಾರತೀಯ ವಾಯುಪಡೆಯಲ್ಲಿ (Indian Air Force-IAF) ವೈದ್ಯಕೀಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜಸ್ಥಾನದ ನಿವಾಸಿ ಸುರೇಂದ್ರ ಕುಮಾರ್ (36) ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ಅವರು ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.
ಭಾರತದ ವಿರುದ್ದ ಯುದ್ಧ ಗೆದ್ದಿರುವುದಾಗಿ ಸುಳ್ಳು ಹೇಳಿದ ಪಾಕ್ ಪ್ರಧಾನಿ
ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿ ಭಾರತದ ಮೇಲೆ ಮತ್ತೆ ದಾಳಿ ಮಾಡಿದೆ. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಈ ನಡುವೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ʼʼಭಾರತವು ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಮೂಲಕ ಯುದ್ಧ ಮಾಡಿದೆ" ಎಂದು ಆರೋಪಿಸಿದರು. ಜತೆಗೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಾಯಕತ್ವ ವಹಿಸಿದ್ದಕ್ಕಾಗಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಭಾರತದ ವಿರುದ್ಧ ಯುದ್ಧ ಗೆದ್ದಿರುವುದಾಗಿಯೂ ಬೊಗಳೆ ಬಿಟ್ಟರು. ಆದರೆ ಈ ವೇಳೆ ಕದನ ವಿರಾಮ ಉಲ್ಲಂಘನೆ ಬಗ್ಗೆ ತುಟಿ ಬಿಚ್ಚಲಿಲ್ಲ.
ಭಾರತೀಯ ಸೇನೆಗೆ ಅಧಿಕಾರ
ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಪಾಕ್ ಉಲ್ಲಿಂಘಿಸಿದ್ದು, ಗಡಿ ಭಾಗದ 4 ರಾಜ್ಯಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ಕದನ ವಿರಾಮ ಉಲ್ಲಂಘನೆಯನ್ನು ಭಾರತ ಖಂಡಿಸಿದ್ದು, ಇದಕ್ಕೆ ಸೂಕ್ತ ತಿರುಗೇಟು ನೀಡುವುದಾಗಿ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತುರ್ತು ಸುದ್ದಿಗೋಷ್ಠಿಯಲ್ಲಿ ಪಾಕ್ ನಡೆಯನ್ನು ಟೀಕಿಸಿದರು. ಪಾಕಿಸ್ತಾನ ತನ್ನ ಸೇನೆಯ ಆಕ್ರಮಣವನ್ನು ನಿಯಂತ್ರಿಸಬೇಕು ಎಂದು ಸೂಚಿಸಿದರು. ಸೂಕ್ತ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಗೆ ಅಧಿಕಾರ ನೀಡಿದ್ದಾಗಿ ತಿಳಿಸಿದರು.
ಭಾರತೀಯ ಸೇನೆಯಿಂದ ತಕ್ಕ ಪ್ರತ್ಯುತ್ತರ
ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿ ಭಾರತದ ಮೇಲೆ ಮತ್ತೆ ದಾಳಿ ಮಾಡುತ್ತಿದೆ. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ. ಪಾಕ್ನ ದನ ವಿರಾಮ ಉಲ್ಲಂಘನೆಯ ಹಿನ್ನಲೆಯಲ್ಲಿ ತುರ್ತು ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಜಮ್ಮುವಿನಲ್ಲಿ ಬಿಎಸ್ಎಫ್ ಯೋಧ ಹುತಾತ್ಮ
ಪಾಕಿಸ್ತಾನದ ಅಪ್ರಚೋದಿನ ದಾಳಿಗೆ ಬಿಎಸ್ಎಸ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಜತೆಗೆ 7 ಮಂದಿ ಗಾಯಗೊಂಡಿದ್ದಾರೆ. ಮೇ 10ರಂದು ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಸಮೀಪ ಪಾಕ್ ಶೆಲ್ ದಾಳಿ ನಡೆಸಿದ್ದು, ಬಿಎಸ್ಎಫ್ ಯೋಧ ಮೊಹಮ್ಮದ್ ಇಮ್ತಿಯಾಸ್ (Mohammed Imteyaz) ವೀರ ಮರಣ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಡಿ ರಾಜ್ಯಗಳ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಜಮ್ಮು ಕಾಶ್ಮೀರದ ಜತೆಗೆ ಗಡಿ ರಾಜ್ಯಗಳಾದ ಪಂಜಾಬ್, ರಾಜಸ್ಥಾನ, ಗುಜರಾತ್ನಲ್ಲಿಯೂ ಪಾಕಿಸ್ತಾನದಿಂದ ದಾಳಿ ನಡೆಸಿದೆ ಎಂದು ವರದಿ ತಿಳಿಸಿದೆ.
ಗುಂಡಿನ ಶಬ್ದ ಕೇಳುತ್ತಿವೆ .. ಕದನ ವಿರಾಮ ಎಲ್ಲಿದೆ ಎಂದ ಓಮರ್ ಅಬ್ದುಲ್ಲಾ
ಕದನ ವಿರಾಮ ಜಾರಿಗೆ ಬಂದ ಕೇವಲ 3 ಗಂಟೆ ಅವಧಿಯಲ್ಲಿ ಪಾಕಿಸ್ತಾನದ ಇದನ್ನು ಉಲ್ಲಂಘಿಸಿದೆ. ಜಮ್ಮು ಕಾಶ್ಮೀರದ ಹಲವೆಡೆಗಳಲ್ಲಿ ದಾಳಿ ನಡೆಸಿದೆ. ಶ್ರೀನಗರ ಮೇಲೆ ಪಾಕ್ನ ಹಲವು ಡ್ರೋನ್ಗಳು ಹಾರಾಡುತ್ತಿದ್ದು, ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಇದನ್ನು ಖಚಿತಪಡಿಸಿದ್ದಾರೆ.
ಕದನ ವಿರಾಮದ ಬೆನ್ನಲ್ಲೇ ಪಾಕ್ ಪುಂಡಾಟ; ಗಡಿ ನಿಯಂತ್ರಣ ರೇಖೆ ಬಳಿ ಮತ್ತೆ ಅಟ್ಯಾಕ್
ಸತತ ದಾಳಿ-ಪ್ರತಿದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ಇಂದು ಕದನ ವಿರಾಮ ಘೋಷಿಸಿತ್ತು. ಸ್ವತಃ ಪಾಕ್ ಮುಂದಾಗಿ ಭಾರತದ ಜೊತೆ ಒಪ್ಪಂದ ಮಾಡಿಕೊಂಡು ಯುದ್ಧಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ತನ್ನ ಛಾಳಿ ಬಿಡದ ಪಾಕಿಸ್ತಾನ ಕದನ ವಿರಾಮ ಘೋಷಿಸಿದ ಕೆಲವೇ ಕೆಲವು ಗಂಟೆಗಳಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ದಾಳಿ ನಡೆಸಿದೆ.
ಕದನ ವಿರಾಮ ಒಪ್ಪಂದಕ್ಕೆ ವಿಶ್ವಸಂಸ್ಥೆ ಸ್ವಾಗತ
ಭಾರತ ಮತ್ತು ಪಾಕಿಸ್ತಾನ ಶನಿವಾರ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ನಿರ್ಧಾರವನ್ನು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಸ್ವಾಗತಿಸಿದ್ದಾರೆ.
ಅಲ್ಪಾವಧಿ ಪಾಕ್ ವೀಸಾ ರದ್ದತಿಯಲ್ಲಿ ನೋ ಚೇಂಜ್
ಭಾರತ ಮತ್ತು ಪಾಕಿಸ್ತಾನ ಮಿಲಿಟರಿ ಕ್ರಮವನ್ನು ನಿಲ್ಲಿಸುವ ಬಗ್ಗೆ ಒಪ್ಪಂದಕ್ಕೆ ಬಂದಿದ್ದರೂ, ಅಲ್ಪಾವಧಿ ವೀಸಾ ಹೊಂದಿರುವ ಪಾಕಿಸ್ತಾನಿಗಳಿಗೆ ನಿಷೇಧ ಸೇರಿದಂತೆ ದೇಶಗಳ ನಡುವಿನ ಎಲ್ಲಾ ಇತರ ಕ್ರಮಗಳು ಮುಂದುವರಿಯಲಿವೆ. ಸಿಂಧೂ ಜಲ ಒಪ್ಪಂದವು ಸಹ ಸ್ಥಗಿತಗೊಳ್ಳಲಿದೆ.
ಸಿಂಧೂ ನದಿ ನೀರು ಒಪ್ಪಂದ ರದ್ದತಿಯಲ್ಲಿ ಬದಲಾವಣೆ ಇಲ್ಲ
ಸಿಂಧೂ ನದಿ ನೀರು ಒಪ್ಪಂದವು ಅಮಾನತಿನಲ್ಲಿ ಯಾವುದೇ ಬದಲಾವಣೆ ಉಲ್ಲ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಕದನ ವಿರಾಮವನ್ನು ಸ್ವಾಗತಿಸಿದ ಮೆಹಬೂಬಾ ಮುಫ್ತಿ
ಕೆಲ ದಿನಗಳ ಕಾಲ ನಡೆದ ಮಿಲಿಟರಿ ಚಕಮಕಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮವನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸ್ವಾಗತಿಸಿದ್ದಾರೆ. ಅವರು ಇದನ್ನು "ಜಮ್ಮು ಮತ್ತು ಕಾಶ್ಮೀರದ ಜನರಿಗೆ ಒಳ್ಳೆಯ ಸುದ್ದಿ" ಎಂದು ಕರೆದಿದ್ದಾರೆ.
ಪಾಕಿಸ್ತಾನದ ಮಿಲಿಟರಿ ಮೂಲಸೌಕರ್ಯ ನಾಶ
ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮಿಲಿಟರಿ ಮೂಲಸೌಕರ್ಯಕ್ಕೆ ಭಾರಿ ಹೊಡೆತ ನೀಡಿವೆ ಎಂದು ಕರ್ನಲ್ ಸೋಫಿಯಾ ಖುರೇಷಿ ಶನಿವಾರ ನವದೆಹಲಿಯಲ್ಲಿ ರಕ್ಷಣಾ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
S-400 ರಕ್ಷಣಾ ವ್ಯವಸ್ಥೆಗಳ ಕುರಿತು ಪಾಕಿಸ್ತಾನದ ಸುಳ್ಳು ಹೇಳಿದೆ
ಭಾರತದ S-400 ಸುದರ್ಶನ ಚಕ್ರ ವಾಯು ರಕ್ಷಣಾ ವ್ಯವಸ್ಥೆಗಳನ್ನು ತನ್ನ JF-17 ಜೆಟ್ಗಳಿಂದ ನಾಶಪಡಿಸಿದೆ ಎಂದು ಪಾಕಿಸ್ತಾನ ಸುಳ್ಳು ಹೇಳಿಕೆಗಳನ್ನು ನೀಡಿದೆ. ಭಾರತವು ಈ ಹೇಳಿಕೆಯನ್ನು ಸಂಪೂರ್ಣವಾಗಿ ಆಧಾರ ರಹಿತ ಎಂದು ಖರೇಷಿ ಸ್ಪಷ್ಟಪಡಿಸಿದ್ದಾರೆ.
ಪಾಕ್ನ ಸುಳ್ಳುಗಳನ್ನು ಬಯಲು ಮಾಡಿದ ಖರೇಷಿ
ರಕ್ಷಣಾ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಲ್ ಸೋಫಿಯಾ ಖುರೇಷಿ, ಭಾರತೀಯ ಪಡೆಗಳು ತಮ್ಮ ಪ್ರದೇಶದೊಳಗಿನ ಮಸೀದಿಗಳ ಮೇಲೆ ದಾಳಿ ಮಾಡಿವೆ ಎಂದು ಹೇಳಿದ್ದ ಪಾಕಿಸ್ತಾನದ ಸುಳ್ಳುಗಳನ್ನು ಬಯಲು ಮಾಡಿದ್ದಾರೆ. ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಪಾಕಿಸ್ತಾನದ ವಾಯಪ್ರದೇಶ ರೀ ಓಪನ್
ಭಾರತದೊಂದಿಗೆ ಕದನ ವಿರಾಮ ಘೋಷಿಸಿದ ನಂತರ ಎಲ್ಲಾ ವಿಮಾನಗಳಿಗೆ ತಮ್ಮ ವಾಯುಪ್ರದೇಶವನ್ನು ಮತ್ತೆ ತೆರೆಯಲಾಗುವುದು ಎಂದು ಪಾಕಿಸ್ತಾನದ ವಾಯುಯಾನ ಪ್ರಾಧಿಕಾರ ತಿಳಿಸಿದೆ.ಇದಕ್ಕೂ ಮೊದಲು, ಭಾರತದಿಂದ ಬರುವ ಎಲ್ಲಾ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು.
ಕದನ ವಿರಾಮದ ಬಗ್ಗೆ ಖಚಿತಪಡಿಸಿದ ಜೈಶಂಕರ್
ಭಾರತ ಮತ್ತು ಪಾಕಿಸ್ತಾನ ಇಂದು ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿವೆ. ಭಾರತವು ಭಯೋತ್ಪಾದನೆಯ ವಿರುದ್ಧ ದೃಢ ಮತ್ತು ರಾಜಿಯಾಗದ ನಿಲುವನ್ನು ನಿರಂತರವಾಗಿ ಕಾಯ್ದುಕೊಂಡಿದೆ. ಅದು ಹಾಗೆಯೇ ಮುಂದುವರಿಯುತ್ತದೆ" ಎಂದು ಎಕ್ಸ್ನಲ್ಲಿ ಪೋಸ್ಟ್ನಲ್ಲಿ ಇಎಎಂ ಜೈಶಂಕರ್ ಹೇಳಿದ್ದಾರೆ.
ಕದನ ವಿರಾಮದ ಕುರಿತು ಡಿಜಿಎಂಒಗೆ ಕರೆ ಮಾಡಿದ ಪಾಕ್
ಪಾಕಿಸ್ತಾನವು ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಿಗೆ ಕರೆ ಮಾಡಿದೆ ಈ ಸಮಯದಲ್ಲಿ ಉಭಯ ರಾಷ್ಟ್ರಗಳು ಸಂಜೆ 5 ಗಂಟೆಯಿಂದ ಭೂಮಿ, ಸಮುದ್ರ ಮತ್ತು ಗಾಳಿಯಲ್ಲಿ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಒಪ್ಪಿಕೊಂಡರು ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದರು.
ಮೇ 12 ರಂದು ಮುಂದಿನ ಸುದ್ದಿಗೋಷ್ಠಿ
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿಯ ಕುರಿತು ಮೇ 12 ರಂದು ಮತ್ತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಳ್ಳುವುದಾಗಿ ಘೋಷಿಸಿದರು. ಇಂದು ಕೇವಲ 15ನಿಮಿಷಗಳ ಮಾಧ್ಯಮಗೋಷ್ಠಿಯಲ್ಲಿ ಸಂಜೆ 5 ಗಂಟೆಯಿಂದ ಭಾರತ ಮತ್ತು ಪಾಕಿಸ್ತಾನ ಭೂಮಿ, ವಾಯು ಮತ್ತು ಸಮುದ್ರದಲ್ಲಿನ ಎಲ್ಲಾ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುತ್ತವೆ ಎಂದು ದೃಢಪಡಿಸಿದರು.
ಭಾಗಶಃ ಅಲ್ಲ, ಪೂರ್ಣ ಪ್ರಮಾಣದ ಕದನ ವಿರಾಮ ಎಂದ ಪಾಕ್
ಉಭಯ ರಾಷ್ಟ್ರಗಳ ನಡುವೆ ದಿನದಿಂದ ದಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಂತರ ಉಭಯ ದೇಶಗಳ ನಡುವೆ ಪೂರ್ಣ ಪ್ರಮಾಣದ ಕದನ ವಿರಾಮವನ್ನು ಘೋಷಿಸಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಹೇಳಿದ್ದಾರೆ.
ಕದನ ವಿರಾಮದ ಬಗ್ಗೆ ಸರ್ಕಾರದಿಂದ ಅಧಿಕೃತ ಘೋಷಣೆ
ಭಾರತ ಮತ್ತು ಪಾಕ್ ಇಂದು ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಮತ್ತು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಸರ್ಕಾರ ಖಚಿತ ಪಡಿಸಿದೆ.
ಭಾರತ- ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಕ್ಸ್ನಲ್ಲಿ ಟ್ವೀಟ್ ಮಾಡಿ ಭಾರತ ಹಾಗೂ ಪಾಕಿಸ್ತಾನ ಪೂರ್ಣ ಪ್ರಮಾಣದ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದಾರೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ರಾತ್ರಿಯಿಡೀ ನಡೆದ ಸುದೀರ್ಘ ಮಾತುಕತೆಯ ನಂತರ, ಭಾರತ ಮತ್ತು ಪಾಕಿಸ್ತಾನಗಳು ಸಂಪೂರ್ಣ ಮತ್ತು ತಕ್ಷಣದ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ಧಿವಂತಿಕೆಯನ್ನು ಬಳಸಿದ್ದಕ್ಕಾಗಿ ಎರಡೂ ದೇಶಗಳಿಗೆ ಅಭಿನಂದನೆಗಳು ಎಂದು ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.