ನವದೆಹಲಿ: ಶನಿವಾರ ಬೆಳಗಿನ ಜಾವ ನಡೆದ ಪ್ರಮುಖ (Operatio Sindoor) ಬೆಳವಣಿಗೆಯಲ್ಲಿ, ಶ್ರೀನಗರದ ಸೇನಾ ನೆಲೆಯಿಂದ ಹಾರಿಸಲಾದ ಭಾರತೀಯ ಕ್ಷಿಪಣಿಗಳು (Indian missiles) ಶನಿವಾರ ಪಾಕಿಸ್ತಾನದ (pakistan) ವಾಯುಪಡೆಯ ಎರಡು ಯುದ್ಧ ವಿಮಾನಗಳನ್ನು (fighter jets) ಹೊಡೆದುರುಳಿಸಿವೆ ಎಂದು ಮೂಲಗಳು ತಿಳಿಸಿವೆ. ಒಂದು ಪಾಕಿಸ್ತಾನಿ ಯುದ್ಧ ವಿಮಾನವನ್ನು ಶ್ರೀನಗರದ ಲಾಸ್ಜನ್ ಬಳಿ ಹೊಡೆದುರುಳಿಸಲಾಯಿತು, ಮತ್ತು ಇನ್ನೊಂದನ್ನು ಉತ್ತರ ಕಾಶ್ಮೀರದಲ್ಲಿ ಹೊಡೆದುರುಳಿಸಲಾಯಿತು.
ಪಾಕಿಸ್ತಾನ ನಿನ್ನೆ ರಾತ್ರಿ ವಾಯುದಾಳಿಯ ತೀವ್ರತೆಯನ್ನು ಹೆಚ್ಚಿಸಿದ ನಂತರ ಭಾರತ ಇಂದು ಬೆಳಿಗ್ಗೆ ಶ್ರೀನಗರದಿಂದ ಐದು ಕ್ಷಿಪಣಿಗಳನ್ನು ಹಾರಿಸಿತು. ಭಾರತದ ನಾಗರಿಕರು ಮತ್ತು ಸೇನಾ ನೆಲೆಯನ್ನು ಗುರಿಯಾಗಿಸಿ ಪಾಕಿಸ್ತಾನ ನಡೆಸುತ್ತಿದ್ದ ನಿರಂತರ ದಾಳಿಗೆ ಭಾರತ ಇದೀಗ ತಕ್ಕ ಪ್ರತ್ಯುತ್ತರ ನೀಡಿದೆ. ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಿಂದ ಗುಜರಾತ್ವರೆಗೆ ಭಾರತದ 26 ಸ್ಥಳಗಳಲ್ಲಿ ಪಾಕಿಸ್ತಾನ ಹೊಸ ಡ್ರೋನ್ ದಾಳಿಯನ್ನು ನಡೆಸಿದ ನಂತರ ಕೌಂಟರ್ ಅಟ್ಯಾಕ್ ಶುರು ಮಾಡಿದ ಭಾರತ, ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ ಮತ್ತು ಶೇಖುಪುರ ನಗರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ.
ರಕ್ಷಣಾ ಮೂಲಗಳ ಪ್ರಕಾರ, ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ನಲ್ಲಿರುವ ಪಾಕಿಸ್ತಾನದ ವಾಯುಪಡೆ ನೆಲೆಯ ಮೇಲೂ ಭಾರತ ದಾಳಿ ಮಾಡಿದೆ. ಸಿಯಾಲ್ಕೋಟ್ ಮತ್ತು ನರೋವಾಲ್ನಲ್ಲಿರುವ ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ಅಟ್ಯಾಕ್ ನಡೆದಿದೆ.
ಪದೇ ಪದೇ ಕದನ ವಿರಾಮ ಉಲ್ಲಂಘನೆಗೆ ಪ್ರತೀಕಾರವಾಗಿ ಭಾರತ ರಾತ್ರೋರಾತ್ರಿ ದಾಳಿ ನಡೆಸಿದ್ದರಿಂದ ಪಾಕಿಸ್ತಾನದ ಮೂರು ಸೇನಾ ವಾಯುನೆಲೆಗಳು ಧ್ವಂಸಗೊಂಡಿವೆ ಎಂದು ಪಾಕಿಸ್ತಾನ ಸೇನೆ ದೃಢಪಡಿಸಿದೆ. ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ, ಶೋರ್ಕೋಟ್ನ ರಫಿಕಿ ವಾಯುನೆಲೆ ಮತ್ತು ಚಕ್ವಾಲ್ನ ಮುರಿಯದ್ ವಾಯುನೆಲೆಯ ಮೇಲೆ ಈ ದಾಳಿ ನಡೆದಿದೆ. ಪಾಕಿಸ್ತಾನ ಶುಕ್ರವಾರ ಭಾರತದ 26 ಸ್ಥಳಗಳಲ್ಲಿ ಡ್ರೋನ್ ದಾಳಿ ನಡೆಸಿದ ನಂತರ, ಭಾರತ ಪಾಕಿಸ್ತಾನದ ಮೇಲೆ ರಾತ್ರಿಯಿಡೀ ದಾಳಿ ಮಾಡಲು ಗಾಳಿಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯನ್ನು ಬಳಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Operation Sindoor: ಭಾರತದ ವಿರುದ್ಧ ಪಾಕಿಸ್ತಾನದಿಂದ ʻಆಪರೇಷನ್ ಬುನ್ಯಾನ್ ಉಲ್ ಮರ್ಸೂಸ್ʼ; ಮತ್ತೆ ಮಿಸೈಲ್ ಅಟ್ಯಾಕ್