ನವದೆಹಲಿ: ಪಾಕಿಸ್ತಾನ (Pakistan) ಮತ್ತೊಂದು ಭಯೋತ್ಪಾದಕ ದಾಳಿಗೆ (terror attack,) ಸಂಚು ರೂಪಿಸಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಭಯೋತ್ಪಾದಕ ದಾಳಿಯಂತೆ (Pahalgam Attack) ಮತ್ತೊಂದು ದಾಳಿಯಾಗುವ ಸಾಧ್ಯತೆ ಇದೆ. ಪಹಲ್ಗಾಮ್ ನ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಅದಕ್ಕೆ ತಕ್ಕ ಉತ್ತರವನ್ನು ಭಾರತೀಯ ಸೇನೆ ನೀಡಿತ್ತು. ಮತ್ತೆ ಇಂತಹ ದಾಳಿಯಾದರೆ ಅದಕ್ಕೆ ತಕ್ಕ ಉತ್ತರ ನೀಡಲು ಭಾರತ ಸಿದ್ಧವಾಗಿದೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮನೋಜ್ ಕಟಿಯಾರ್ (Western Army Chief Lt Gen Manoj Katiyar) ಹೇಳಿದ್ದಾರೆ.
ಪಹಲ್ಗಾಮ್ ನಲ್ಲಿ ಏಪ್ರಿಲ್ 22ರಂದು ಭಯೋತ್ಪಾದಕ ದಾಳಿಯಂತೆ ಮತ್ತೊಂದು ದಾಳಿ ನಡೆಸಲು ಪಾಕಿಸ್ತಾನ ಪ್ರಯತ್ನಿಸಬಹುದು ಎಂದು ಹೇಳಿರುವ ಮನೋಜ್ ಕುಮಾರ್ ಕಟಿಯಾರ್, ಗಡಿಯಾಚೆಯಿಂದ ನಡೆಯುವ ಯಾವುದೇ ಹೊಸ ದಾಳಿಗೆ ಭಾರತ ಬಲವಾದ ಪ್ರತಿಕ್ರಿಯೆ ನೀಡಲು ಸಿದ್ಧವಾಗಿದೆ ಎಂದು ಎಚ್ಚರಿಸಿದ್ದಾರೆ.
ಪಶ್ಚಿಮ ಗಡಿಯಲ್ಲಿ ನಡೆಸಿರುವ ಭಾರತದ ದೊಡ್ಡ ಪ್ರಮಾಣದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಾದ ಆಪರೇಷನ್ ಸಿಂದೂರ್ ಕುರಿತು ಮಾತನಾಡಿದ ಅವರು, ಆಪರೇಷನ್ ಸಿಂದೂರ್ ನಲ್ಲಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲಾಯಿತು. ಆದರೆ ಪಾಕಿಸ್ತಾನ ಎಂದಿಗೂ ತನ್ನ ಮಾರ್ಗಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಪಾಕಿಸ್ತಾನ ನಡೆಸಬಹುದಾದ ಪ್ರತಿಯೊಂದು ನಡೆಗಳ ಮೇಲೆ ನಾವು ನಮ್ಮ ಕಣ್ಣಿಟ್ಟಿದ್ದೇವೆ. ಮತ್ತೆ ಅಂತಹ ದುಷ್ಕೃತ್ಯದಲ್ಲಿ ತೊಡಗಿದರೆ ಅದಕ್ಕೆ ಬಲವಾದ ಪ್ರತಿಕ್ರಿಯೆ ನೀಡಲಾಗುವುದು ಎಂದರು.
ಪಾಕಿಸ್ತಾನವು ತನ್ನ ಸ್ವಂತ ಹಿತಾಸಕ್ತಿಗಳಿಗಾಗಿ ಭಾರತದೊಂದಿಗೆ ಮುಖಾಮುಖಿಯಾಗಲು ಬಯಸುತ್ತದೆ. ಇನ್ನು ಅದು ಯಾವುದೇ ರೀತಿಯ ದುಸ್ಸಾಹಸವನ್ನು ಮಾಡಬಾರದು. 'ಆಪರೇಷನ್ ಸಿಂದೂರ್' ಇನ್ನೂ ಕೊನೆಗೊಂಡಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: Bihar Assembly Election: ಟಿಕೆಟ್ ಹಂಚಿಕೆ ವಿಚಾರದಲ್ಲಿ ಭುಗಿಲೆದ್ದ ಪ್ರತಿಭಟನೆ; ನಿತೀಶ್ ಕುಮಾರ್ ನಿವಾಸಕ್ಕೆ ಮುತ್ತಿಗೆ
'ಆಪರೇಷನ್ ಸಿಂದೂರ್' ನುಸುಳುತ್ತಿರುವ ಭಯೋತ್ಪಾದಕ ಗುಂಪುಗಳನ್ನು ತಟಸ್ಥಗೊಳಿಸುವ ಮತ್ತು ನಿಯಂತ್ರಣ ರೇಖೆಯಾದ್ಯಂತ ಅವರ ಲಾಂಚ್ ಪ್ಯಾಡ್ಗಳನ್ನು ಕೆಡವುವ ಗುರಿಯನ್ನು ಹೊಂದಿತ್ತು.ಇದರಲ್ಲಿ ಎಫ್ -16 ಜೆಟ್ಗಳು ಸೇರಿದಂತೆ ಕನಿಷ್ಠ ಒಂದು ಡಜನ್ ಪಾಕಿಸ್ತಾನಿ ಮಿಲಿಟರಿ ವಿಮಾನಗಳು ನಾಶವಾಗಿವೆ. ಅಲ್ಲದೇ ಹೆಚ್ಚಿನ ಮಿಲಿಟರಿ ಮೂಲ ಸೌಕರ್ಯಗಳಿಗೆ ಹಾನಿಯಾಗಿದ್ದವು. ಇದರಲ್ಲಿ ಹ್ಯಾಂಗರ್ ಗಳು, ರಾಡಾರ್ ಗಳು, ಕಮಾಂಡ್, ನಿಯಂತ್ರಣ ಕೇಂದ್ರಗಳು, ರನ್ ವೇ ಗಳು ಸೇರಿವೆ ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ತಿಳಿಸಿದ್ದರು ಎಂದರು.