ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಕಸಿತ ಭಾರತ@2047 ಗುರಿಗೆ ರಾಜ್ಯಗಳ ಸಹಕಾರ ಅಗತ್ಯ: ಪ್ರಧಾನಿ ಮೋದಿ

11ನೇ ನೀತಿ ಆಯೋಗ ಆಡಳಿತ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತ@2047 ಗುರಿ, ಮಾನವ ಅಭಿವೃದ್ಧಿ, ಯುವಶಕ್ತಿ, ಮಹಿಳಾ ಸಬಲೀಕರಣ, ಜಲ ಸಂರಕ್ಷಣೆ ಹಾಗೂ ಉತ್ತಮ ಆಡಳಿತ ಕುರಿತು ರಾಜ್ಯಗಳೊಂದಿಗೆ ಚರ್ಚೆ ನಡೆಸಿದರು.

ಪ್ರಧಾನಿ ಮೋದಿ

ನವದೆಹಲಿ, ಜೂನ್ 12: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಗುರುವಾರ ನಡೆದ 11ನೇ ನೀತಿ ಆಯೋಗ (NITI Aayog) ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ, 'ವಿಕಸಿತ ಭಾರತ@2047ಗಾಗಿ ಸಮಗ್ರ ಮಾನವ ಅಭಿವೃದ್ಧಿ' (Inclusive Human Development for Viksit Bharat@2047) ವಿಷಯದ ಕುರಿತು ರಾಜ್ಯಗಳೊಂದಿಗೆ ಮಹತ್ವದ ಚರ್ಚೆ ನಡೆಸಿದರು. ರಾಷ್ಟ್ರಪತಿ ಭವನ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಸಭೆಯಲ್ಲಿ 28 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ 5 ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು (Lieutenant Governors) ಮತ್ತು ಆಡಳಿತಾಧಿಕಾರಿಗಳು ಭಾಗವಹಿಸಿದ್ದರು. ಇದೇ ಮೊದಲ ಬಾರಿಗೆ ಎಲ್ಲಾ 28 ರಾಜ್ಯಗಳ ಮುಖ್ಯಮಂತ್ರಿಗಳು ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿರುವುದು ವಿಶೇಷ.

ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತದ ಬೆಳವಣಿಗೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಆತ್ಮನಿರ್ಭರ ಭಾರತ, ಸುಧಾರಣೆಗಳ ವೇಗ ಮತ್ತು ಜಾಗತಿಕ ಅತ್ಯುತ್ತಮ ಪದ್ಧತಿಗಳ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು.

ದೇಶದ 70 ಕೋಟಿಗೂ ಹೆಚ್ಚು ಯುವಜನರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಇದು ಭಾರತದ ಅತಿದೊಡ್ಡ ಶಕ್ತಿಯಾಗಿದೆ ಎಂದು ಪ್ರಧಾನಿ ಹೇಳಿದರು. ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಸಾಮರ್ಥ್ಯ ವೃದ್ಧಿಯ ಮೂಲಕ ಈ ಜನಸಂಖ್ಯಾ ಲಾಭವನ್ನು ಅಭಿವೃದ್ಧಿಯ ಲಾಭವನ್ನಾಗಿ ಪರಿವರ್ತಿಸಬೇಕು ಎಂದು ರಾಜ್ಯಗಳಿಗೆ ಸಲಹೆ ನೀಡಿದರು.



ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ ಪ್ರಧಾನಿ, 'ಲಕ್ಷಪತಿ ದೀದಿ' ಯೋಜನೆಯಡಿ 3 ಕೋಟಿ ಮಹಿಳೆಯರ ಸಂಖ್ಯೆಯನ್ನು 6 ಕೋಟಿಗೆ ಹೆಚ್ಚಿಸುವ ಗುರಿ ಹೊಂದಬೇಕು ಎಂದರು. ಮಹಿಳೆಯರಿಗೆ ಸುರಕ್ಷಿತ ಮತ್ತು ಭದ್ರ ವಾತಾವರಣ ಕಲ್ಪಿಸುವ ಅಗತ್ಯವನ್ನೂ ಒತ್ತಿ ಹೇಳಿದರು.

ಒಂದು ಜಿಲ್ಲೆ - ಒಂದು ಉತ್ಪನ್ನ ಯೋಜನೆಗೆ ಉತ್ತೇಜನ ನೀಡುವ ಮೂಲಕ ರಫ್ತು ಆಧಾರಿತ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದು ರಾಜ್ಯಗಳಿಗೆ ಸಲಹೆ ನೀಡಿದರು. ಜೊತೆಗೆ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಹೊಸ ಗುರುತನ್ನು ನಿರ್ಮಿಸುತ್ತಿದ್ದು, ಈ ಕ್ಷೇತ್ರದಲ್ಲಿ ಹೂಡಿಕೆ ಆಕರ್ಷಿಸಲು ರಾಜ್ಯಗಳು ನೀತಿಗಳನ್ನು ರೂಪಿಸಬೇಕು ಎಂದರು.

ಮಾದಕ ವಸ್ತುಗಳ ದುರ್ಬಳಕೆ, ಸೈಬರ್ ವಂಚನೆ ಮುಂತಾದ ಸಾಮಾಜಿಕ ಸವಾಲುಗಳನ್ನು ತಡೆಗಟ್ಟಲು ಜಾಗೃತಿ ಅಭಿಯಾನ ಹಾಗೂ ಪರಿಣಾಮಕಾರಿ ಆಡಳಿತ ಅಗತ್ಯ ಎಂದು ಪ್ರಧಾನಿ ಹೇಳಿದರು. ಎಲ್ ನಿನೋ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆ ಮತ್ತು ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವಂತೆ ರಾಜ್ಯಗಳಿಗೆ ಮನವಿ ಮಾಡಿದರು.

2047ರೊಳಗೆ ವಿಕಸಿತ ಭಾರತ ಗುರಿ ಸಾಧಿಸಲು ಜಿಲ್ಲಾಮಟ್ಟದ ಪ್ರಗತಿಯ ಮೇಲ್ವಿಚಾರಣೆ, 100 ದಿನಗಳ ಹಾಗೂ 5 ವರ್ಷಗಳ ಗುರಿ ನಿಗದಿ ಮತ್ತು ಉತ್ತಮ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಪ್ರಧಾನಿ ಮೋದಿ ಸೂಚಿಸಿದರು.

ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ಮತ್ತು ಆಡಳಿತಾಧಿಕಾರಿಗಳು ಪ್ರಧಾನಿ ಮೋದಿ ಅವರ 12 ವರ್ಷಗಳ ಆಡಳಿತಾವಧಿಯನ್ನು ಅಭಿನಂದಿಸಿ, ಜಾಗತಿಕ ಭೌಗೋಳಿಕ ಹಾಗೂ ರಾಜಕೀಯ ಸವಾಲುಗಳ ನಡುವೆಯೂ ಭಾರತದ ಬೆಳವಣಿಗೆಗೆ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸುವ ಭರವಸೆ ನೀಡಿದರು.