ದೆಹಲಿ, ಮೇ 11: ಪಶ್ಚಿಮ ಏಷ್ಯಾ ಸಂಘರ್ಷ ತಣ್ಣಗಾಗದ ಹಿನ್ನೆಲೆಯಲ್ಲಿ ಇಂಧನ ಸಾಗಾಟ ವ್ಯವಸ್ಥೆಯ ಮೇಲೆ ಬಿದ್ದ ಹೊಡೆತದಿಂದ ಜಗತ್ತು ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ (ಮೇ 10) ಹೈದರಾಬಾದ್ನಲ್ಲಿ ಮಾತನಾಡಿ ಮಿತವ್ಯಯದ ಬಗ್ಗೆ ಸಲಹೆ ನೀಡಿದ್ದರು. ಆದಷ್ಟು ಪೆಟ್ರೋಲ್-ಡೀಸೆಲ್ ಬಳಕೆ ಕಡಿಮೆ ಮಾಡಿ ಬಸ್, ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುವಂತೆ ಕರೆ ನೀಡಿದ್ದರು. ಆದರೆ ಇದೀಗ ಮೋದಿ ಟ್ರೋಲ್ಗೆ ಗುರಿಯಾಗಿದ್ದಾರೆ. ಗುಜರಾತ್ನ ಸೋಮನಾಥಪುರದಲ್ಲಿ ಸೋಮವಾರ ಮೋದಿ ಭರ್ಜರಿ ರೋಡ್ ಶೋ ಹಮ್ಮಿಕೊಂಡಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
ಗುಜರಾತ್ನ ಗಿರ್ನಲ್ಲಿರುವ ಸೋಮನಾಥ ದೇವಸ್ಥಾನ ನವೀಕರಣಗೊಂಡು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮನಾಥ ಅಮೃತ ಮಹೋತ್ಸವ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಗುಲಕ್ಕೆ ಆಗಮಿಸಿದ ಮೋದಿ ಭರ್ಜರಿ ರೋಡ್ ಶೋ ನಡೆಸಿದರು. ನಿನ್ನೆಯಷ್ಟೇ ತೈಲ ಬಳಕೆ ತಗ್ಗಿಸಿ ಎಂದು ಕರೆ ನೀಡಿದ್ದ ಮೋದಿ ಇಂದು ಮಾಡುತ್ತಿರುವುದಾದರೂ ಏನು ಹಲವರು ಪ್ರಶ್ನಿಸಿದ್ದಾರೆ.
ಮೋದಿ ವಿರುದ್ಧದ ಎಕ್ಸ್ ಪೋಸ್ಟ್:
ಒಂದೇ ದಿನ 3 ರೋಡ್ ಶೋ
ಸೋಮವಾರ 12 ಗಂಟೆಗಳ ಅವಧಿಯಲ್ಲಿ ಮೋದಿ ಸೋಮನಾಥ ಸೇರಿದಂತೆ 3 ರೋಡ್ ಶೋ ನಡೆಸಿದ್ದು ಸದ್ಯ ಭಾರಿ ವಿವಾದಕ್ಕೆ ಗುರಿಯಾಗಿದೆ. ಶರ್ಮ ವೀವ್ಸ್ (sharma_views) ಎನ್ನುವ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಡಿರುವ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ʼʼಹೈದರಾಬಾದ್ನಲ್ಲಿ ಮಾತನಾಡಿದ ಮೋದಿ ಇಂಧನ ಉಳಿಸಿ, ಮೆಟ್ರೋ ಬಳಸಿ, ವರ್ಕ್ ಫ್ರಮ್ ಹೋಂ ಜಾರಿಗೊಳಿಸಿ, ಚಿನ್ನ ಖರೀದಿಸಬೇಡಿ ಎಂದು ಕರೆ ನೀಡಿದರು. ಅದಾಗಿ ಕೆಲವೇ ಹೊತ್ತಲ್ಲಿ ಮೋದಿ ಗುಜರಾತ್ನ ಜಾಮ್ನಗರದಲ್ಲಿ ರೇಂಜ್ ರೋವರ್ನಲ್ಲಿ ರೋಡ್ ಶೋ ನಡೆಸಿದರು. ಅದೂ ಅತಿಯಾಗಿ ಇಂಧನ ಬಳಸುವ ಎಸ್ಯುವಿಯಲ್ಲಿ. ಜತೆಗೆ ಅವರ ಹಿಂದೆ ಬೆಂಗಾವಲು ಪಡೆಗಳ ಹಲವು ವಾಹನಗಳೂ ಇದ್ದವುʼʼ ಎಂದು ಬರೆದುಕೊಂಡಿದ್ದಾರೆ.
ಮತ್ತೊಮ್ಮೆ ಸ್ವದೇಶಿ ಮಂತ್ರ ಜಪಿಸಿದ ಪ್ರಧಾನಿ ನರೇಂದ್ರ ಮೋದಿ; ಭಾರತೀಯ ಉತ್ಪನ್ನ ಖರೀದಿಗೆ ಕರೆ
ದೀಪಲ್ ತ್ರಿವೇದಿ ಎನ್ನುವವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ʼʼಮೋದಿ ಅವರ ವಿಮಾನ ಮತ್ತು ಬೆಂಗಾವಲು ಪಡೆಗಳ ವಾಹನ ಪೆಟ್ರೋಲ್ ಅಥವಾ ಡೀಸೆಲ್ನಿಂದ ಸಂಚರಿಸುತ್ತಿಲ್ಲ. ಬದಲಾಗಿ ನೀರಿನಲ್ಲಿ ಓಡುತ್ತವೆʼʼ ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯಸಭೆಯ ಮಾಜಿ ಸಂಸದ ಮೃಣಾಲ್ ಪಾಂಡೆ, ʼʼಮೋದಿ ಅವರ ಬೆಂಗಾವಲು ಪಡೆಯ ವಾಹನ ಗೋಮೂತ್ರ ಅಥವಾ ಕಬ್ಬಿನ ಜ್ಯೂಸ್ನಿಂದ ಚಲಿಸುತ್ತವೆʼʼ ಎಂದಿದ್ದಾರೆ. ಕಳೆದ ತಿಂಗಳಲ್ಲಿ ಮೋದಿ 40 ಸಾರ್ವಜನಿಕ ಸಭೆ ಮತ್ತು 10 ರೋಡ್ ಶೋಗಳಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ 100ಕ್ಕೂ ಹೆಚ್ಚು ಕಾರ್ ಬಳಕೆಯಾಗಿದೆ. ಅಲ್ಲದೆ ಮೋದಿ ಖಾಸಗಿ ವಿಮಾನ ಮತ್ತು ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಿದ್ದಾರೆ. ಇದಕ್ಕೆಲ್ಲ ಎಷ್ಟು ಇಂಧನ ಖರ್ಚಾಗಿರಬಹುದೆಂದು ಲೆಕ್ಕ ಹಾಕಿ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ಮೋದಿ ಅವರ ಹೇಳಿಕೆ ಸದ್ಯ ಟ್ರೋಲಿಗರಿಗೆ ಆಹಾರವಾಗಿದೆ.
ಸರ್ಕಾರ ರಚಿಸಲು ಬಹುಮತ ನೀಡಿದ ಪಶ್ಚಿಮ ಬಂಗಾಳದ ಜನತೆಗೆ ಅಡ್ಡಬಿದ್ದು ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ
ಮೋದಿ ನೀಡಿದ ಸಲಹೆ ಏನು?
ಹೈದರಾಬಾದ್ನಲ್ಲಿ ಭಾನುವಾರ ಮಾತನಾಡಿದ ಮೋದಿ, ಇರಾನ್ ಯುದ್ಧದ ಪರಿಣಾಮ ತಪ್ಪಿಸಲು ಮತ್ತು ವಿದೇಶಿ ವಿನಿಮಯ ರಕ್ಷಣೆಗಾಗಿ 1 ವರ್ಷದವರೆಗೆ ಚಿನ್ನ ಖರೀದಿಸುವುದನ್ನು ನಿಲ್ಲಿಸುವುದು ಸೇರಿ ಹಲವು ಸಲಹೆ ನೀಡಿದ್ದರು. ಪೆಟ್ರೋಲ್-ಡೀಸೆಲ್ ಮಿತವಾಗಿ ಬಳಸಬೇಕು, ಆಫೀಸ್ ಬದಲು ವರ್ಕ್ ಫ್ರಮ್ ಹೋಂಗೆ ಅದ್ಯತೆ ನೀಡಬೇಕು, ವಿದೇಶ ಪ್ರವಾಸಕ್ಕೆ ನಿಯಂತ್ರಣ ಹೇರಬೇಕು ಎಂದು ಕರೆ ನೀಡಿದ್ದರು. ಒಟ್ಟಿನಲ್ಲಿ ಕೋವಿಡ್ ಕಾಲದ ಮಿತವ್ಯಯಕ್ಕೆ ಆದ್ಯತೆ ನೀಡಬೇಕು ಎಂದಿದ್ದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.