ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼನಿಮ್ಮಲ್ಲಿ ನಂಬಿಕೆ ಇರಿಸಿದ್ದೇವೆ, ನಿಮ್ಮ ಕೊಡುಗೆ ದೇಶಕ್ಕೆ ಅಗತ್ಯʼʼ: ಜೆನ್‌ ಝೀ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂದೇಶ

Narendra Modi: ದೆಹಲಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (IIT Delhi) ಕ್ಯಾಂಪಸ್‌ನಲ್ಲಿ ಜೆನ್‌ ಝೀ ಸಮುದಾಯದ ಜತೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ, ವಿಕಸಿತ ಭಾರತದ ಗುರಿ ಸಾಧನೆಗೆ ಯುವ ಜನತೆ ಕೈ ಜೋಡಿಸುವಂತೆ ಮನವಿ ಮಾಡಿದರು.

ದೆಹಲಿ ಐಐಟಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು

ದೆಹಲಿ, ಆ. 8: ʼʼನಾವು ನಿಮ್ಮಲ್ಲಿ ನಂಬಿಕ ಇಟ್ಟಿದ್ದೇವೆ. ದೇಶಕ್ಕೆ ನಿಮ್ಮ ಸೇವೆ ಅಗತ್ಯವಿದೆʼʼ-ದೆಹಲಿಯಲ್ಲಿ ನಡೆದ ಕಾಕ್ರೋಚ್‌ ಜನತಾ ಪಾರ್ಟಿಯ (CJP) ಬೃಹತ್‌ ಪ್ರತಿಭಟನೆ ಬಳಿಕ ಮೊದಲ ಬಾರಿ ಯುವ ಜನತೆಯ ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತನಾಡಿದ ಪರಿ ಇದು. ದೆಹಲಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (IIT Delhi) ಕ್ಯಾಂಪಸ್‌ನಲ್ಲಿ ಅವರು ಜೆನ್‌ ಝೀ ಸಮುದಾಯದ ಜತೆ ಮಾತನಾಡಿದರು. ವಿಕಸಿತ ಭಾರತದ ಗುರಿ ಸಾಧನೆಗೆ ಯುವ ಜನತೆ ಕೈ ಜೋಡಿಸುವಂತೆ ಇದೇ ವೇಳೆ ಅವರು ಮನವಿ ಮಾಡಿದರು.

ಪ್ರತಿ ಪೀಳಿಗೆಗೂ ರಾಷ್ಟ್ರೀಯ ಜವಾಬ್ದಾರಿ ಇದೆ ಎಂದು ಹೇಳಿದ ಅವರು, ಯುವಜನತೆಯ ಗುರಿಗಳು ದೇಶದ ಸಮಗ್ರ ಅಭಿವೃದ್ಧಿಯನ್ನು ಒಳಗೊಂಡಿರಬೇಕು ಎಂದು ಸೂಚಿಸಿದರು. "ಪ್ರತಿಯೊಂದು ಪೀಳಿಗೆಯೂ ತನ್ನ ಕಾಲದ ನಿರ್ದಿಷ್ಟ ಸವಾಲುಗಳನ್ನು ಎದುರಿಸುತ್ತದೆ ಮತ್ತು ತನ್ನದೇ ಆದ ರಾಷ್ಟ್ರೀಯ ಜವಾಬ್ದಾರಿಯನ್ನು ಸಹ ಹೊಂದಿದೆ. ನಿಮ್ಮ ಜೀವನದ ಮುಂದಿನ 30ರಿಂದ 35 ವರ್ಷಗಳಲ್ಲಿ ನೀವು ಏನೇ ಮಾಡಿದರೂ ಅದು ವಿಕಸಿತ ಭಾರತದತ್ತ ನಮ್ಮ ಪ್ರಯಾಣದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ, ನೀವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ದೇಶಕ್ಕೆ ಹೇಗೆ ಪ್ರಯೋಜನಕಾರಿ? ಇದು ರಾಷ್ಟ್ರದ ಯಾವ ಅಗತ್ಯಗಳನ್ನು ಪೂರೈಸುತ್ತದೆ? ಎಂಬುದನ್ನು ಗಮನಿಸಬೇಕುʼʼ ಎಂದರು.

ಐಐಟಿ ದೆಹಲಿಯಲ್ಲಿ ನರೇಂದ್ರ ಮೋದಿ ಭಾಷಣ:



ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಬದಲಾವಣೆಗಳಿಗೆ ಹೊಂದಿಕೊಳ್ಳುವವರು "ಅಂತಿಮವಾಗಿ ಗೆಲ್ಲುತ್ತಾರೆ" ಎಂದು ಅವರು ಸಲಹೆ ನೀಡಿದರು.

ʼʼಪ್ರಧಾನಿ ನರೇಂದ್ರ ಮೋದಿ ಮಗಳಿಗೆ ಜೀವದಾನ ನೀಡಿದ್ದಾರೆʼʼ: ಕೃತಜ್ಞತೆ ಸಲ್ಲಿಸಿದ ಕ್ಷಮೆಯಾಚಿಸಿದ ಬಾಲಕಿಯ ತಾಯಿ

"ಜಾಗತೀಕರಣದ ಸಮೀಕರಣವು ವೇಗವಾಗಿ ಬದಲಾಗುತ್ತಿದೆ. ಜಾಗತಿಕ ಶಕ್ತಿಯು ಕ್ಷಣ ಕ್ಷಣಕ್ಕೂ ವಿಕಸನಗೊಳ್ಳುತ್ತಿದೆ. ಮುಂದಿನ 20 ಅಥವಾ 30 ವರ್ಷಗಳಲ್ಲಿ ಜಗತ್ತು ಹೇಗಿರುತ್ತದೆ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಜಗತ್ತು, ತಂತ್ರಜ್ಞಾನ, ಕೈಗಾರಿಕೆಗಳು ಮತ್ತು ವೃತ್ತಿಗಳು ಎಲ್ಲವೂ ವಿಕಸನಗೊಳ್ಳುತ್ತವೆ. ಆದರೆ ಇದೆಲ್ಲದರ ನಡುವೆ, ಒಂದು ವಿಷಯವನ್ನು ನೆನಪಿಡಿ: ಕಲಿಯುತ್ತಲೇ ಇರುವವರು ಯಶಸ್ವಿಯಾಗುತ್ತಾರೆ" ಎಂದು ಅವರು ಹೇಳಿದರು.

ನರೇಂದ್ರ ಮೋದಿ ಭಾಷಣ:



ಸರ್ಕಾರದ ಪಾತ್ರ

ಸ್ಕೈರೂಟ್‌ನ ವಿಕ್ರಮ್ -1 ರಾಕೆಟ್‌ನ ಯಶಸ್ವಿ ಉಡಾವಣೆಯನ್ನು ಉಲ್ಲೇಖಿಸಿದ ಪ್ರಧಾನಿ, ಯುವ ಜನರು ತಮ್ಮ ಕೊಡುಗೆಗಳನ್ನು ನೀಡಲು ಸರ್ಕಾರವು ವಿವಿಧ ಮಾರ್ಗಗಳನ್ನು ತೆರೆದಿದೆ ಎಂದು ಒತ್ತಿ ಹೇಳಿದರು. "ಯುವ ಜನತೆ ಕೊಡುಗೆ ನೀಡಬಹುದಾದ ವಿವಿಧ ಮಾರ್ಗಗಳನ್ನು ನಾವು ತೆರೆದಿದ್ದೇವೆ. ಹೊಸ ವಲಯಗಳನ್ನು ಆರಂಭಿಸಿದ್ದೇವೆ. ನಾನು ಮೊದಲು ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಮಾತನಾಡಿದ್ದೆ. ಇಂದು ಅದೇ ಬಾಹ್ಯಾಕಾಶ ವಲಯವು ನಮ್ಮ ಯುವಕರಿಗೆ ಅವಕಾಶಗಳ ಆಕಾಶವಾಗಿದೆ" ಎಂದು ತಿಳಿಸಿದರು. "ನಮ್ಮ ಡ್ರೋನ್ ವಲಯವೂ ವಿಸ್ತರಿಸುತ್ತಿದೆ. ರಾಷ್ಟ್ರೀಯ ಭದ್ರತೆ ಮತ್ತು ಔಷಧಿಗಳ ಸಾಗಣೆಯಲ್ಲಿ ಡ್ರೋನ್‌ಗಳನ್ನು ಬಳಸಲಾಗುತ್ತಿದೆ" ಎಂದರು.

ಸ್ವಾಮಿ ವಿವೇಕಾನಂದರ ತತ್ತ್ವ ಉಲ್ಲೇಖಿಸಿ ದೇಶದ ಯುವ ಜನತೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ವಿವರಿಸಿದ ಪ್ರಧಾನಿ ನರೇಂದ್ರ ಮೋದಿ

2026ರ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಸಿಜೆಪಿ ಪ್ರತಿಭಟನೆಯ ನಂತರ ಪ್ರಧಾನಿ ಮೋದಿ ಮೊದಲ ಬಾರಿ ಯುವ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಹಿಂದೆ ವಿಡಿಯೊ ಮೂಲಕ ಸಂದೇಶ ನೀಡಿದ್ದರು ಮುಖಾಮುಖಿಯಾಗಿ ಮಾತನಾಡಿದ್ದು ಇದು ಮೊದಲ ಬಾರಿ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author