ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IED Blast: ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟ; ತಪ್ಪಿದ ಭಾರಿ ದುರಂತ

ಅಸ್ಸಾಂನ ಕೊಕ್ರಜಾರ್​​ ಜಿಲ್ಲೆಯಲ್ಲಿ ಗುರುವಾರ (ಅಕ್ಟೋಬರ್‌ 23) ಬೆಳಗಿನ ಜಾವ ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟ ಸಂಭವಿಸಿ ಕೆಲ ಹೊತ್ತು ರೈಲು ಸೇವೆಗಳು ಸ್ಥಗಿತಗೊಂಡವು. ಸದ್ಯ ಹಳಿಯನ್ನು ದುರಸ್ತಿಗೊಳಿಸಲಾಗಿದ್ದು, ರೈಲು ಸಂಚಾರ ಸಾಮಾನ್ಯ ಸ್ಥಿತಿಗೆ ಬಂದಿದೆ. ಘಟನೆಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಮತ್ತು ರೈಲು ಹಳಿತಪ್ಪಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ರೈಲ್ವೆ ಹಳಿಯಲ್ಲಿ  ಐಇಡಿ ಸ್ಫೋಟ

-

Ramesh B Ramesh B Oct 23, 2025 2:14 PM

ದಿಸ್‌ಪುರ, ಅ. 23: ಅಸ್ಸಾಂನ ಕೊಕ್ರಜಾರ್​​ ಜಿಲ್ಲೆಯಲ್ಲಿ ಗುರುವಾರ (ಅಕ್ಟೋಬರ್‌ 23) ಬೆಳಗಿನ ಜಾವ ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟ (IED Blast) ಸಂಭವಿಸಿದೆ. ಇದರಿಂದ ಮೂರು ಅಡಿ ಉದ್ದದ ಹಳಿಗೆ ಹಾನಿಯಾಗಿದ್ದು, ರೈಲು ಸೇವೆಗಳು ಕೆಲಕಾಲ ಸ್ಥಗಿತಗೊಂಡವು. ಸದ್ಯ ಹಳಿಯನ್ನು ದುರಸ್ತಿಗೊಳಿಸಲಾಗಿದ್ದು, ರೈಲು ಸಂಚಾರ ಸಾಮಾನ್ಯ ಸ್ಥಿತಿಗೆ ಬಂದಿದೆ. ಕೊಕ್ರಜಾರ್ ರೈಲು ನಿಲ್ದಾಣದಿಂದ ಸುಮಾರು ಐದು ಕಿ.ಮೀ. ದೂರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಸಾವು-ನೋವು ಸಂಭವಿಸಿಲ್ಲ ಮತ್ತು ರೈಲು ಹಳಿತಪ್ಪಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟ ಸಂಭವಿಸಿದ ಕೂಡಲೇ ಭದ್ರತಾ ಸಿಬ್ಬಂದಿ ಮತ್ತು ರೈಲ್ವೆ ಎಂಜಿನಿಯರ್‌ಗಳು ಸ್ಥಳಕ್ಕೆ ಧಾವಿಸಿ ಮುನ್ನೆಚ್ಚರಿಕೆ ಕ್ರಮವಾಗಿ ದುರಸ್ತಿ ಕಾರ್ಯ ಮತ್ತು ಪರಿಶೀಲನೆಗಾಗಿ ರೈಲು ಸೇವೆಗಳನ್ನು ಸ್ಥಗಿತಗೊಳಿಸೊದರು. ಇದರಿಂದ ಭಾರಿ ಅನಾಹುತ ತಪ್ಪಿದೆ.

ಭದ್ರತಾ ಸಿಬ್ಬಂದಿಯಿಂದ ಸ್ಥಳ ಪರಿಶೀಲನೆ:



ಈ ಸುದ್ದಿಯನ್ನೂ ಓದಿ: IED Blast: ನಕ್ಸಲ್‌ ವಿರೋಧಿ ಕಾರ್ಯಾಚರಣೆ ವೇಳೆ ಐಇಡಿ ಸ್ಫೋಟ; ಮೂವರು ಯೋಧರಿಗೆ ಗಾಯ

"ಗುರುವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಯುಪಿ ಅಜರಾ ಶುಗರ್ ಗೂಡ್ಸ್‌ ರೈಲು ಸಲಕತಿ ಮತ್ತು ಕೊಕ್ರಝಾರ್ ನಡುವೆ ಹಾದುಹೋಗುತ್ತಿದ್ದಾಗ ಸಮಸ್ಯೆ ಕಂಡುಬಂತು. ಕೂಡಲೇ ರೈಲನ್ನು ನಿಲ್ಲಿಸಿ ಪರಿಶೀಲಿಸಿದಾಗ ಶಂಕಿತ ಬಾಂಬ್ ಸ್ಫೋಟದಿಂದಾಗಿ ಹಳಿಗೆ ಹಾನಿಯಾಗಿರುವುದು ಗೊತ್ತಾಯಿತು" ಎಂದು ಈಶಾನ್ಯ ಗಡಿನಾಡು ರೈಲ್ವೆ (NFR) ತಿಳಿಸಿದೆ.

ರಾಜ್ಯ, ರೈಲ್ವೆ ಪೊಲೀಸರು ಮತ್ತು ಗುಪ್ತಚರ ಅಧಿಕಾರಿಗಳು ಘಟನೆ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸದ್ಯ ಈ ಮಾರ್ಗದಲ್ಲಿ ರೈಲು ಸಂಚಾರ ಯಥಾಸ್ಥಿತಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಬೆಳಗ್ಗೆ 5.25ಕ್ಕೆ ಹಳಿಯನ್ನು ದುರಸ್ತಿಗೊಳಿಸಲಾಗಿದೆ. ಘಟನೆ ಬಳಿಕ ಸುಮಾರು 8 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಈ ಭಾಗದಲ್ಲಿ ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಲಾಗಿದೆ" ಎಂದು ಎನ್‌ಎಫ್‌ಆರ್‌ ತಿಳಿಸಿದೆ.

ಕೊಕ್ರಝಾರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪರಾಜ್ ಸಿಂಗ್ ಮಾತನಾಡಿ, ʼʼಹಳಿಯ ಒಂದು ಸಣ್ಣ ಭಾಗಕ್ಕೆ ಮಾತ್ರ ಹಾನಿಯಾಗಿದ್ದು, ಅದನ್ನು ತಕ್ಷಣವೇ ದುರಸ್ತಿ ಮಾಡಲಾಗಿದೆ. ರೈಲು ಸೇವೆ ಈಗ ಪುನರಾರಂಭಗೊಂಡಿದೆ. ರೈಲ್ವೆ ಮತ್ತು ಭದ್ರತಾ ಅಧಿಕಾರಿಗಳು ಸ್ಫೋಟ ನಡೆದ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಿ ರೈಲು ಸೇವೆಯನ್ನು ಪುನಃಸ್ಥಾಪಿಸಿದ್ದಾರೆ. ಘಟನೆ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆʼʼ ಎಂದಿದ್ದಾರೆ. ಸ್ಫೋಟದ ಹಿಂದೆ ನಕ್ಸಲರ ಕೈವಾಡವಿದೆಯೇ ಅಥವಾ ಸ್ಥಳೀಯರ ಕೃತ್ಯವೇ ಎನ್ನುವುದು ತನಿಖೆ ಬಳಿಕ ಗೊತ್ತಾಗಲಿದೆ.