ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಿಂದೂ ಧರ್ಮ ದೂಷಿಸುವ ಪ್ರವೃತ್ತಿ ಅಪಾಯಕಾರಿ: ನರೇಂದ್ರ ಮೋದಿ ವಾಗ್ದಾಳಿ

Narendra Modi: 23ನೇ ಆವೃತ್ತಿಯ ಹಿಂದೂಸ್ಥಾನ್‌ ಟೈಮ್ಸ್‌ ಲೀಡರ್‌ಶಿಪ್‌ ಸಮ್ಮಿಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ''ದೇಶದಲ್ಲಿ ಹಿಂದೂ ಧರ್ಮವನ್ನು, ನಂಬಿಕೆಯನ್ನು ದೂಷಿಸುವ ಪ್ರವೃತ್ತಿ ಬೆಳೆಯುತ್ತಿದೆ. ದೇಶದ ಬೆಳವಣಿಗೆ ಜತೆಗೆ ಹಿಂದೂ ಧರ್ಮವನ್ನು ಥಳುಕು ಹಾಕುವುದು ಸರಿಯಲ್ಲʼʼ ಎಂದು ಹೇಳಿದರು.

ಹಿಂದೂ ಧರ್ಮ ದೂಷಿಸುವ ಪ್ರವೃತ್ತಿ ಅಪಾಯಕಾರಿ: ನರೇಂದ್ರ ಮೋದಿ

ನರೇಂದ್ರ ಮೋದಿ (ಸಂಗ್ರಹ ಚಿತ್ರ). -

Ramesh B
Ramesh B Dec 6, 2025 8:32 PM

ದೆಹಲಿ, ಡಿ. 6: ''ದೇಶದಲ್ಲಿ ಹಿಂದೂ ಧರ್ಮವನ್ನು, ನಂಬಿಕೆಯನ್ನು ದೂಷಿಸುವ ಪ್ರವೃತ್ತಿ ಬೆಳೆಯುತ್ತಿದೆ. ದೇಶದ ಬೆಳವಣಿಗೆ ಜತೆಗೆ ಹಿಂದೂ ಧರ್ಮವನ್ನು ಥಳುಕು ಹಾಕುವುದು ಸರಿಯಲ್ಲʼʼ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ತಿಳಿಸಿದರು. 23ನೇ ಆವೃತ್ತಿಯ ಹಿಂದೂಸ್ಥಾನ್‌ ಟೈಮ್ಸ್‌ ಲೀಡರ್‌ಶಿಪ್‌ ಸಮ್ಮಿಟ್‌ನಲ್ಲಿ (Hindustan Times Leadership Summit 2025) ಅವರು ಮಾತನಾಡಿದರು. ಜಗತ್ತು ಛಿದ್ರಗೊಂಡಾಗ ಭಾರತವು ಸೇತುವೆ ಕಟ್ಟುವ ಕೆಲಸ ನಿರ್ವಹಿಸುತ್ತದೆ ಎಂದು ತಿಳಿಸಿದರು.

"ಭಾರತದ ನಿಧಾನಗತಿಯ ಬೆಳವಣಿಗೆಯನ್ನು ಹಿಂದೂ ಬೆಳವಣಿಗೆಯ ದರ ಎಂದು ಕರೆಯುವ ಮೂಲಕ ಸನಾತನ ಧರ್ಮದ ಜೀವನ ವಿಧಾನವನ್ನು ಅಪಖ್ಯಾತಿಗೊಳಿಸುವ ಪ್ರಯತ್ನ ನಡೆಯುತ್ತಿದೆ" ಎಂದು ಪ್ರಧಾನಿ ಹೇಳಿದರು.

"ನಾವು 21ನೇ ಶತಮಾನದ ಒಂದು ಭಾಗ ಕಳೆದುಹೋದ ಕಾಲಘಟ್ಟದಲ್ಲಿದ್ದೇವೆ. ಜಗತ್ತು ಅದೆಷ್ಟೋ ಏರಿಳಿತಗಳನ್ನು ಕಂಡಿದೆ - ಆರ್ಥಿಕ ಬಿಕ್ಕಟ್ಟು, ಜಾಗತಿಕ ಸಾಂಕ್ರಾಮಿಕ ರೋಗ ಇತ್ಯಾದಿ. ಈ ಸನ್ನಿವೇಶಗಳು ಒಂದಲ್ಲ ಒಂದು ರೀತಿಯಲ್ಲಿ ಜಗತ್ತಿಗೆ ಸವಾಲು ಒಡ್ಡಿವೆ. ಇಂದು ಜಗತ್ತು ಅನಿಶ್ಚಿತತೆಯ ಗೂಡಾಗಿದೆ. ಆದರೆ ಇದರ ಮಧ್ಯೆ ಭಾರತವು ವಿಭಿನ್ನವಾಗಿ ದೃಢವಾಗಿ ನಿಂತಿದೆ. ನಮ್ಮ ದೇಶ ಆತ್ಮವಿಶ್ವಾಸದಲ್ಲಿದೆ" ಎಂದು ಮೋದಿ ಬಣ್ಣಿಸಿದರು. "ಜಗತ್ತು ನಿಧಾನಗತಿಯ ಬಗ್ಗೆ ಮಾತನಾಡುವಾಗ, ಭಾರತವು ಬೆಳವಣಿಗೆಯ ಕಥೆಗಳನ್ನು ಹೇಳುತ್ತುದೆ. ಜಗತ್ತು ಬಿಕ್ಕಟ್ಟನ್ನು ಎದುರಿಸುವಾಗೆಲ್ಲ ಭಾರತವು ನಂಬಿಕೆಯ ಸ್ತಂಭವಾಗಿ ಕಾರ್ಯ ನಿರ್ವಹಿಸುತ್ತದೆʼʼ ಎಂದು ವಿವರಿಸಿದರು.

ಹಿಂದೂಸ್ಥಾನ್‌ ಟೈಮ್ಸ್‌ ಲೀಡರ್‌ಶಿಪ್‌ ಸಮ್ಮಿಟ್‌ನ ಎಕ್ಸ್‌ ಪೋಸ್ಟ್‌:



ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ

ಇದೇ ವೇಲೆ ನರೇಂದ್ರ ಮೋದಿ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಆ ಸರ್ಕಾರಕ್ಕೆ ತನ್ನ ಪ್ರಜೆಗಳ ಮೇಲೆ ನಂಬಿಕೆ ಇರಲಿಲ್ಲ ಎಂದರು. ʼʼನಮ್ಮ ಸರ್ಕಾರ ಕೆಲಸ ಮಾಡುವ ರೀತಿಯನ್ನು ಬದಲಾಯಿಸಿದೆ. ಇಲ್ಲಿನ ಪ್ರಜೆಗಳ ಪೌರತ್ವವನ್ನು ನಿರ್ಧರಿಸಲು ಅವರ ಸ್ವದೃಢಿಕೃತ ದಾಖಲೆ ಸಾಕುʼʼ ಎಂದು ಹೇಳಿದರು.

ಒಂದು ಸರ್ಕಾರ ತನ್ನ ನಾಗರಿಕರ ಮೇಲೆ ನಂಬಿಕೆ ಇಡುವುದು ಮುಖ್ಯ ಎಂದು ಪ್ರಧಾನಿ ಹೇಳಿದರು. "ದೇಶವನ್ನು ವಸಾಹತುಶಾಹಿ ಮನಸ್ಥಿತಿಯಿಂದ ಹೊರ ತರಬೇಕು. ಈ ಕಾರ್ಯ ಪ್ರತಿಯೊಂದು ಮೂಲೆಯಲ್ಲೂ ಆಗಬೇಕು. ಮುಂದಿನ 10 ವರ್ಷಗಳ ಕಾಲ ನಾಗರಿಕರನ್ನು ಆ ದೂರದೃಷ್ಟಿಯೊಂದಿಗೆ ಮುನ್ನಡೆಸಲು ನಾನು ಬಯಸುತ್ತೇನೆ" ಎಂದು ಮೋದಿ ತಿಳಿಸಿದರು.

ಪಿಎಂ ಮೋದಿ ಜೊತೆ ಭೋಜನ ಸ್ವೀಕರಿಸಿದ ಬಳಿಕ ರಷ್ಯಾಗೆ ಮರಳಿದ ವ್ಲಾಡಿಮಿರ್‌ ಪುಟಿನ್‌!

ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ

ʼದೇಶ ಮೊದಲುʼ ಘೋಷಣೆಯನ್ನು ಪುನರುಚ್ಚರಿಸಿದ ಮೋದಿ ನಾಗರಿಕರಿಗಾಗಿ ತೆರಿಗೆ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ ಎಂದು ವಿವರಿಸಿದರು. ಈ ಸುಧಾರಣೆಗಳು ರಾಷ್ಟ್ರ ಮೊದಲು ಎಂಬ ಕಲ್ಪನೆಯಿಂದ ನಡೆಸಲ್ಪಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. "ಒಂದು ದಶಕದ ಹಿಂದೆ ಇದು ಯೋಚಿಸಲೂ ಸಾಧ್ಯವಿರಲಿಲ್ಲ" ಎಂದು ಹೇಳಿದರು.

"ಈಗ ಪ್ರತಿಯೊಂದು ವಲಯದಲ್ಲೂ ಸುಧಾರಣೆ ಕಾಣುತ್ತಿದೆ. ನಮ್ಮ ವೇಗ, ನಿರ್ದೇಶನ ಸ್ಥಿರವಾಗಿದೆ" ಎಂದರು. ಅವರು 2025ರ ವರ್ಷವನ್ನು ಒಂದು ದೊಡ್ಡ ಉದಾಹರಣೆಯಾಗಿ ಉಲ್ಲೇಖಿಸಿದರು. "ಈ ವರ್ಷದ ಅತಿದೊಡ್ಡ ಸುಧಾರಣೆಯೆಂದರೆ ಮುಂದಿನ ಪೀಳಿಗೆಯ ಜಿಎಸ್‌ಟಿ. ಅದರ ಫಲಿತಾಂಶವು ಸ್ಪಷ್ಟವಾಗಿದೆ. ನೇರ ತೆರಿಗೆ ವ್ಯವಸ್ಥೆಯನ್ನು ಸಹ ಪ್ರಮುಖವಾಗಿ ಸುಧಾರಿಸಲಾಗಿದೆ. ಈಗ ವರ್ಷಕ್ಕೆ 12 ಲಕ್ಷ ರೂ.ವರೆಗಿನ ಆದಾಯದ ಮೇಲೆ ಶೂನ್ಯ ತೆರಿಗೆ ಇದೆ" ಎಂದು ಅವರು ವಿವರಿಸಿದರು.