ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊರ್ಮುಜ್ ಜಲಸಂಧಿ ಬಿಕ್ಕಟ್ಟು; ಜೈಶಂಕರ್ ಜತೆ ರೂಬಿಯೋ ಚರ್ಚೆ: ಅಮೆರಿಕ ಆದೇಶ ಪಾಲಿಸಲು ವಾಣಿಜ್ಯ ನೌಕೆಗಳಿಗೆ ಸೂಚನೆ

Hormuz Strait: ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ನೌಕೆಗಳು ಅಮೆರಿಕದ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ, ಎಸ್. ಜೈಶಂಕರ್ ಜತೆಗಿನ ಮಾತುಕತೆಯಲ್ಲಿ ತಿಳಿಸಿದ್ದಾರೆ. ಒಮಾನ್ ಗಲ್ಫ್‌ನಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವ ಘಟನೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ರಾಜತಾಂತ್ರಿಕ ಮಾತುಕತೆಗಳ ಅಗತ್ಯವನ್ನು ಒತ್ತಿ ಹೇಳಿದೆ.

ಜೈ ಶಂಕರ್ - ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ

ನವದೆಹಲಿ, ಜೂ. 13: ಇರಾನ್ ಬಂದರುಗಳ ಮೇಲಿನ ನೌಕಾ ದಿಗ್ಬಂಧನ ಮುಂದುವರಿದಿರುವ ಹಿನ್ನೆಲೆಯಲ್ಲಿ ಹೊರ್ಮುಜ್ ಜಲಸಂಧಿಯಲ್ಲಿ ಚಲಿಸುವ ಎಲ್ಲ ವಾಣಿಜ್ಯ ನೌಕೆಗಳು ವಾಷಿಂಗ್ಟನ್‌ನ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ (Marco Rubio) ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S.Jaishankar) ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ದೂರವಾಣಿ ಸಂಭಾಷಣೆಯ ವೇಳೆ ರೂಬಿಯೋ, ಜಲಸಂಧಿಯಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಕಾಯ್ದುಕೊಳ್ಳಲು ಈ ದಿಗ್ಬಂಧನ ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಅಮೆರಿಕ ಸೇನೆಯ ಆದೇಶಗಳನ್ನು ಉಲ್ಲಂಘಿಸುವುದು ಮತ್ತು ಇರಾನ್ ತೈಲದ ಅಕ್ರಮ ಸಾಗಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು. ಪ್ರಸ್ತುತ ಯುರೋಪ್ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಇತ್ತೀಚೆಗೆ ಒಮಾನ್ ಗಲ್ಫ್‌ನಲ್ಲಿ ವಾಣಿಜ್ಯ ನೌಕೆಯೊಂದರ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವುದನ್ನು ಅತ್ಯಂತ ತೀವ್ರವಾಗಿ ಖಂಡಿಸಿದರು.

ಜೈಶಂಕರ್‌ ಅವರ ಎಕ್ಸ್‌ ಪೋಸ್ಟ್‌:



"ಅಮೆರಿಕ ನೌಕಾಸೇನೆ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವುದಕ್ಕೆ ಭಾರತದ ಪರವಾಗಿ ತೀವ್ರ ಪ್ರತಿರೋಧವನ್ನು ದಾಖಲಿಸಿದ್ದೇನೆ. ವಾಣಿಜ್ಯ ನೌಕೆಗಳ ಮೇಲಿನ ಇಂತಹ ಭೀಕರ ದಾಳಿಗಳು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ" ಎಂದು ಜೈಶಂಕರ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಒಮಾನ್ ಬಳಿ ಅಮೆರಿಕ ಪಡೆಗಳು ನಡೆಸಿದ ದಾಳಿಗೆ ತುತ್ತಾದ ನೌಕೆಯಲ್ಲಿದ್ದ 24 ಸಿಬ್ಬಂದಿಗಳ ಪೈಕಿ 21 ಜನರನ್ನು ರಕ್ಷಿಸಲಾಗಿದೆ. ಆದರೆ, ಅಮೆರಿಕದ ಸೂಚನೆಗಳನ್ನು ಪಾಲಿಸಲು ನೌಕೆ ವಿಫಲವಾದ ಕಾರಣ ಅದನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸಮರ್ಥಿಸಿಕೊಂಡಿದೆ.

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ; 20 ಭಾರತೀಯ ಸಿಬ್ಬಂದಿಯಿದ್ದ ‘ಜಲವೀರ್’ ನೌಕೆಯಲ್ಲಿ ಆತಂಕ

13 ಭಾರತೀಯರು ಬಲಿ

ಫೆಬ್ರವರಿ 28ರಂದು ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಜಂಟಿ ದಾಳಿಯೊಂದಿಗೆ ಆರಂಭವಾದ ಈ ಪಶ್ಚಿಮ ಏಷ್ಯಾ ಯುದ್ಧ ಮತ್ತು ಇರಾನ್ ಬಂದರುಗಳ ನೌಕಾ ದಿಗ್ಬಂಧನವು ಅನೇಕ ಭಾರತೀಯರ ಜೀವಕ್ಕೆ ಕುತ್ತು ತಂದಿದೆ. ಸಂಘರ್ಷದ ಆರಂಭದಿಂದ ಇದುವರೆಗೆ ಕನಿಷ್ಠ 13 ಭಾರತೀಯರು ಪ್ರಾಣ ಕಳೆದುಕೊಂಡಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮರುಸ್ಥಾಪನೆಗಾಗಿ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಭಾರತ ಒತ್ತು ನೀಡಿದ್ದು, ವಾಣಿಜ್ಯ ನೌಕೆಗಳ ಮೇಲಿನ ದಾಳಿಗಳು ತಕ್ಷಣ ನಿಲ್ಲಬೇಕೆಂದು ವಿದೇಶಾಂಗ ಸಚಿವಾಲಯ ಆಗ್ರಹಿಸಿದೆ.

ದೆಹಲಿಯಲ್ಲಿರುವ ಅಮೆರಿಕದ ಹಿರಿಯ ರಾಜತಾಂತ್ರಿಕರಿಗೆ ಭಾರತವು ಈಗಾಗಲೇ ಈ ಕುರಿತು ಸಮನ್ಸ್ ಜಾರಿಗೊಳಿಸಿ ತನ್ನ ಕಠಿಣ ನಿಲುವನ್ನು ಪ್ರದರ್ಶಿಸಿದೆ. ಪ್ರಸ್ತುತ ಅಮೆರಿಕ ಮತ್ತು ಇರಾನ್ ನಡುವೆ ಸೂಕ್ಷ್ಮ ಕದನ ವಿರಾಮವಿದ್ದರೂ, ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸುವ ಒಪ್ಪಂದದ ಕುರಿತು ಉಭಯ ದೇಶಗಳ ನಡುವೆ ಗಂಭೀರ ಮಾತುಕತೆಗಳು ಮತ್ತು ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿದಿವೆ.