ಜೈಪುರ, ಆ.11: ಶಾಲಾ ಬಸ್ಗೆ ಬೆಂಕಿ ಹೊತ್ತಿಕೊಂಡು ಉರಿದಿದ್ದು (bus catches fire), ಅದೃಷ್ಟವಶಾತ್ ಹದಿನೇಳು ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಾಜಸ್ಥಾನದ (Rajasthan) ಜೈಸಲ್ಮೇರ್ನ ಧೌವಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದಂತೆಯೇ ಸಮಯಪ್ರಜ್ಞೆ ಮೆರೆದ ಬಸ್ ಚಾಲಕ ತಕ್ಷಣವೇ ಬಸ್ ನಿಲ್ಲಿಸಿ ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾನೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಬಸ್ಸಿನೊಳಗೆ ಇರಿಸಲಾಗಿದ್ದ ಬ್ಯಾಗ್ಗಳು, ಪುಸ್ತಕಗಳು ಮತ್ತು ಇತರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳನ್ನು ರವಾನಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ವೈರಿಂಗ್ನಲ್ಲಿ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಪಿತ್ಲಾ ಗ್ರಾಮದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಖಾಸಗಿ ಶಾಲೆಗೆ ಬಸ್, ಮಕ್ಕಳನ್ನು ಕರೆದೊಯ್ಯುತ್ತಿತ್ತು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮಹೇಂದ್ರ ಕುಮಾರ್ ಸಿರ್ವಿ ಹೇಳಿದ್ದಾರೆ. ಧೌವಾ ಸಮೀಪ ಬಸ್ ತಲುಪಿದಾಗ ಅದರ ಮುಂಭಾಗದ ಚಕ್ರವು ಏಕಾಏಕಿ ಗುಂಡಿಗೆ ಬಿದ್ದಿದೆ. ಬಳಿಕ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಎಂಜಿನ್ನಿಂದ ಹೊಗೆ ಕಾಣಿಸಿಕೊಂಡ ನಂತರ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ಬಸ್ನಿಂದ ಸುರಕ್ಷಿತವಾಗಿ ದೂರಕ್ಕೆ ಸ್ಥಳಾಂತರಿಸಲು ಸಹಾಯ ಮಾಡಿದರು.
ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿ; 20 ಮಂದಿಗೆ ಗಾಯ
ಕಳೆದ ವರ್ಷ ಅಕ್ಟೋಬರ್ 14 ರಂದು, ಜೈಸಲ್ಮೇರ್ನಿಂದ ಜೋಧ್ಪುರಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡು 19 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟರು. ಜೋಧ್ಪುರಕ್ಕೆ ಕರೆದೊಯ್ಯುವಾಗ ಮತ್ತೊಬ್ಬ ವ್ಯಕ್ತಿ ಮೃತಪಟ್ಟರು. ನಂತರ ಸಾವಿನ ಸಂಖ್ಯೆ 26ಕ್ಕೆ ಏರಿತು. ಉಳಿದ ಸಂತ್ರಸ್ತರು ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟರು. ಈ ದುರಂತವು ಬೆಂಕಿಯ ಸುರಕ್ಷತೆ ಮತ್ತು ಬಸ್ಗಳಲ್ಲಿ ತುರ್ತು ಸಿದ್ಧತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿತು.
ಕೇರಳಂನಲ್ಲಿ ಖಾಸಗಿ ಬಸ್ ಅಪಘಾತ: ಓರ್ವ ಸಾವು
ಕೇರಳಂನ ಮಲಪ್ಪುರಂ ಜಿಲ್ಲೆಯ ಕುಟ್ಟಿಪ್ಪುರಂ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇತ್ತೀಚೆಗೆ ಆಘಾತಕಾರಿ ಘಟನೆಯೊಂದು ನಡೆದಿತ್ತು. ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು ಒಬ್ಬ ವ್ಯಕ್ತಿ ಮೃತಪಟ್ಟು, 26 ಮಂದಿ ಗಾಯಗೊಂಡಿದ್ದರು. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಾರಿ ವೈರಲ್ ಆಗಿದೆ. ದೃಶ್ಯಾವಳಿಯಲ್ಲಿ ಬಸ್ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಉರುಳಿ ಬಿದ್ದಿರುವುದನ್ನು ಸೆರೆಹಿಡಿದಿದೆ.
ಜು. 26ರ ಬೆಳಗ್ಗೆ ಸುಮಾರು 11 ಗಂಟೆಗೆ ನಡೆದ ಈ ದುರಂತದಲ್ಲಿ ಒಬ್ಬರು ಮೃತಪಟ್ಟು, 26 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಡಿಫೆಂಡರ್ ಹೆಸರಿನ ಖಾಸಗಿ ಬಸ್ ಕೋಝಿಕ್ಕೋಡ್ನಿಂದ ತ್ರಿಶೂರ್ಗೆ ಪ್ರಯಾಣಿಸುತ್ತಿದ್ದಾಗ ಕೈಲಾಶ್ ಆಡಿಟೋರಿಯಂ ಬಳಿ ಈ ದುರಂತ ಸಂಭವಿಸಿದೆ. ಬಸ್ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಬಸ್ 25 ಮೀಟರ್ಗಿಂತಲೂ ಹೆಚ್ಚು ದೂರ ಸ್ಕಿಡ್ ಆಗಿ, ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದು ರಸ್ತೆಯ ಬದಿಗೆ ಉರುಳಿಕೊಂಡು ಹೋಗಿದೆ.