ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼ2024ರ ಸ್ಥಿತಿ ಮರುಕಳಿಸದಿರಲಿʼʼ: ವಯನಾಡ್‌ ಭೂ ಕುಸಿತಕ್ಕೆ ಮಿಡಿದ ದೇಶವಾಸಿಗಳ ಹೃದಯ; ಇನ್ನೂ ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ

Wayanad Landslide: ಕೇರಳಂನ ವಯನಾಡಿನಲ್ಲಿ ಮಂಗಳವಾರ (ಜು. 7) ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ನಂತರ ಐವರು ಮೃತಪಟ್ಟು, ಆರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಇನ್ನೂ ಹಲವರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮೇಪಾಡಿ ಪ್ರದೇಶದಲ್ಲಿ ರಕ್ಷಣಾ ಕಾರ್ಯವನ್ನು ಈಗ ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. 2024ರ ಸ್ಥಿತಿ ಮರುಕಳಿಸದಿರಲಿ ಎಂಬ ಪ್ರಾರ್ಥನೆ ದೇಶಾದ್ಯಂತ ಕೇಳಿ ಬರುತ್ತಿದೆ.

ವಯನಾಡಿನಲ್ಲಿ ಮುಂದುವರಿದ ರಕ್ಷಣಾ ಕಾರ್ಯಾಚರಣೆ

ತಿರುವನಂತಪುರಂ, ಜು. 8: ಕೇರಳಂನ (Keralam) ವಯನಾಡಿನಲ್ಲಿ ಮಂಗಳವಾರ (ಜು. 7) ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ (Landslide in Wayanad) ಸಂಭವಿಸಿದ ನಂತರ ಐವರು ಮೃತಪಟ್ಟು, ಆರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಇನ್ನೂ ಹಲವರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅವರನ್ನು ರಕ್ಷಿಸಲು, ರಕ್ಷಣಾ ತಂಡಗಳು ಈಗ ಕಾರ್ಯತಂತ್ರವನ್ನು ಬದಲಾಯಿಸಿವೆ. ಪ್ರತಿಕೂಲ ಹವಾಮಾನ ಸವಾಲುಗಳ ನಡುವೆಯೂ ರಕ್ಷಣಾ ಸಿಬ್ಬಂದಿ ಸ್ಥಳದಲ್ಲೇ ಉಳಿದು ಶೋಧ ಮತ್ತು ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದಾರೆ.

ಮೇಪಾಡಿ ಪ್ರದೇಶದಲ್ಲಿ ರಕ್ಷಣಾ ಕಾರ್ಯವನ್ನು ಈಗ ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. ಪ್ರಯತ್ನಗಳನ್ನು ವೇಗಗೊಳಿಸಲು ನಾಲ್ಕೂ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. “ನಾಪತ್ತೆಯಾದ ಐದು ಜನರನ್ನು ಹುಡುಕುವತ್ತ ಗಮನ ಸಾಗಿದೆ. ನಾವು ನಾಲ್ಕು ವಲಯಗಳಾಗಿ ವಿಂಗಡಿಸಿದ್ದೇವೆ. ನಮ್ಮಲ್ಲಿ ಉಪಕರಣಗಳು ಮತ್ತು ಮೃತದೇಹಗಳನ್ನು ಪತ್ತೆಹಚ್ಚಲು ತರಬೇತಿ ಪಡೆದ ಶ್ವಾನಗಳಿವೆ. ನಾವು ಎಲ್ಲವನ್ನೂ ಸಜ್ಜುಗೊಳಿಸಿದ್ದೇವೆ. ಸಾರಿಗೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ ಅದು ಮುಗಿದ ನಂತರ, ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಯೋಜಿಸುತ್ತೇವೆ” ಎಂದು ವಯನಾಡ್ ಪೊಲೀಸ್ ಮುಖ್ಯಸ್ಥ ಎಸ್. ದೇವ ಮನೋಹರ್ ಹೇಳಿದರು.

ರಕ್ಷಣಾ ಕಾರ್ಯಾಚರಣೆ ರಾತ್ರಿಯಿಡೀ ನಡೆಯಿತು ಎಂದು ತಿಳಿದುಬಂದಿದೆ. ಆದರೆ ಯಾವುದೇ ಯಶಸ್ಸು ಸಿಗಲಿಲ್ಲ. ಒಂದೇ ಒಂದು ಮೃತದೇಹವೂ ಪತ್ತೆಯಾಗಿಲ್ಲ. ಜೋಡಿ-ಸುರಂಗ ರಸ್ತೆ ನಿರ್ಮಾಣ ಸ್ಥಳದಲ್ಲಿ ಅಗೆದ ಮಣ್ಣನ್ನು ಸುಮಾರು ಮೂರರಿಂದ ನಾಲ್ಕು ಮೀಟರ್‌ಗಳವರೆಗೆ ಜೋಡಿಸಿದ್ದು ಅನಾಹುತಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.

ದೇವರ ನಾಡನ್ನು ನಡುಗಿಸಿದ ಮತ್ತೊಂದು ಭೂಕುಸಿತ; ಟ್ಯಾಂಕರನ್ನು 10 ಅಡಿ ತಳ್ಳಿದ ಭೀಕರ ಪ್ರವಾಹ

ವಯನಾಡಿನಲ್ಲಿ ಕೆಲವು ದಿನಗಳಿಂದ 200 ಮಿ.ಮೀ.ಗೂ ಹೆಚ್ಚು ಮಳೆಯಾಗುತ್ತಿದ್ದು, ನಿರಂತರ ಮಳೆಯು ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೋಝಿಕ್ಕೋಡ್‌ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಅನಕ್ಕೊಂಪೊಯಿಲ್-ಮೆಪ್ಪಾಡಿ ಸುರಂಗ ರಸ್ತೆ ಯೋಜನೆಯ ಸ್ಥಳದ ಬಳಿ ಭೂಕುಸಿತ ಸಂಭವಿಸಿದೆ. ಆ ಸಮಯದಲ್ಲಿ ನಿರ್ಮಾಣ ಕಾರ್ಮಿಕರು ಸ್ಥಳದಲ್ಲಿದ್ದರು.

ಕೇರಳ ಸಚಿವ ಟಿ. ಸಿದ್ದೀಕ್ ಇದನ್ನು ನಿರ್ಲಕ್ಷ್ಯದ ಪರಿಣಾಮದಿಂದಾದ ಮಾನವ ನಿರ್ಮಿತ ಭೂ ಕುಸಿತ ಎಂದು ಕರೆದಿದ್ದಾರೆ. ಅಧಿಕಾರಿಗಳು ಕೊಂಕಣ ರೈಲ್ವೆಗೆ ಭೂಕುಸಿತದ ಅಪಾಯದ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದರು ಎಂದು ಹೇಳಿದ್ದರು ಎನ್ನಲಾಗಿದೆ. ಗುತ್ತಿಗೆದಾರರು ಈ ಪ್ರದೇಶದಲ್ಲಿ ಕೆಲಸ ನಿಲ್ಲಿಸುವ ಆದೇಶಗಳನ್ನು ಪಾಲಿಸಿಲ್ಲ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಆರೋಪಿಸಿದ್ದಾರೆ.

ಸುರಂಗ ಕೊರೆದ ನಂತರ ಸಂಗ್ರಹವಾದ ಮಣ್ಣನ್ನು ಪ್ರದೇಶದಿಂದ ವಿಲೇವಾರಿ ಮಾಡುವವರೆಗೆ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ವಯನಾಡ್ ಜಿಲ್ಲಾಧಿಕಾರಿ ಜೂನ್ 20ರಂದು ಸೂಚಿಸಿದ್ದರು ಎಂದು ವರದಿಗಳು ಹೇಳಿವೆ. ಈ ಘಟನೆಯನ್ನು ಆಘಾತಕಾರಿ ಎಂದು ಬಣ್ಣಿಸಿದ ಸತೀಶನ್, ತಮ್ಮ ಸರ್ಕಾರವು ವಿವರವಾದ ತನಿಖೆಯನ್ನು ನಡೆಸಲಿದೆ. ನಿರ್ಮಾಣ ಕಂಪನಿಯು ಯಾವುದೇ ನಿಯಮಗಳನ್ನು ಉಲ್ಲಂಘಿಸಿದೆಯೇ ಎಂದು ಪರಿಶೀಲಿಸಲಿದೆ ಎಂದು ಹೇಳಿದರು.