ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Pan Masala Ad: ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್‌ ಖ್ಯಾತ ನಟರಿಗೆ ನ್ಯಾಯಾಲಯದಿಂದ ನೋಟಿಸ್

Pan Masala Ad: ವಿಮಲ್ ಪಾನ್ ಮಸಾಲದ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ವಿರುದ್ಧ ನೋಟಿಸ್ ಜಾರಿ ಮಾಡಲು ಜೈಪುರದ ಜಿಲ್ಲಾ ಗ್ರಾಹಕ ವಿವಾದ ವೇದಿಕೆಯು ಆದೇಶ ಹೊರಡಿಸಿದೆ.

ಮುಂಬೈ: ಪಾನ್ ಮಸಾಲ ಜಾಹೀರಾತಿನ (Pan Masala Ad) ಮೂಲಕ ಗ್ರಾಹಕರನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬ ಆರೋಪ ದಡಿ ವಿಮಲ್ ಪಾನ್ ಮಸಾಲದ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ವಿರುದ್ಧ ನೋಟಿಸ್ ಜಾರಿ ಮಾಡಲು ಜೈಪುರದ ಜಿಲ್ಲಾ ಗ್ರಾಹಕ ವಿವಾದ ವೇದಿಕೆಯು ಆದೇಶ ಹೊರಡಿಸಿದೆ. ನಟರು ಗುಟ್ಕಾ, ಪಾನ್‌ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡು ಅದನ್ನು ಪ್ರಚಾರ ಮಾಡವುದಕ್ಕೆ ಕೋಟಿ ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ. ಖ್ಯಾತ ನಟರು ಇಂತಹ ಜಾಹೀರಾತಿನಲ್ಲಿ ತೊಡಗಿಸಿಕೊಳ್ಳುವುದರಿಂದ ಹೆಚ್ಚು ನೆಗೆಟಿವ್ ಪರಿಣಾಮ ಬೀರುತ್ತದೆ ಎಂಬ ದೂರಿನ ಆಧಾರದ ಮೇರೆಗೆ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಯೋಗೇಂದ್ರ ಸಿಂಗ್ ಬಡಿಯಾಲ್ ಎನ್ನುವ ವಕೀಲ ಜೈಪುರದ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ವೇದಿಕೆಯಲ್ಲಿ ಈ ದೂರು ನೀಡಿದ್ದಾರೆ. ವಿಮಲ್‌ನಲ್ಲಿ ಕೇಸರಿ ಸೇರಿಸಲಾಗಿದೆ ಎಂಬ ತಪ್ಪು ಪ್ರಚಾರವನ್ನು ನಟರು ಹರಡುತ್ತಿದ್ದಾರೆ ಎಂದಿದ್ದಾರೆ. ʼʼಈ ಜಾಹೀರಾತಿನಲ್ಲಿ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರು ಕಾಣಿಸಿಕೊಂಡಿದ್ದು, ಪಾನ್ ಮಸಾಲದಲ್ಲಿ ಕೇಸರಿ ಇದೆ ಎಂದು ಹೇಳಿ ಗ್ರಾಹಕರ ದಾರಿ ತಪ್ಪಿಸಲಾಗುತ್ತದೆʼʼ ಎಂದು ವಕೀಲ ಯೋಗೇಂದ್ರ ಸಿಂಗ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.



ʼʼಮಾರುಕಟ್ಟೆಯಲ್ಲಿ ಕೇಸರಿ ಎಷ್ಟು ದುಬಾರಿ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ಒಂದು ಕೆಜಿ ಕೇಸರಿಗೆ 4-5 ಲಕ್ಷ ರೂ. ಇದ್ದು, ತಂಬಾಕಿನ ಪಾನ್ ಮಸಾಲದಲ್ಲಿ ಬರೀ 5 ರೂಪಾಯಿಗೆ ಕೇಸರಿ ನೀಡಲು ಸಾಧ್ಯವಿಲ್ಲ. ಇದರಲ್ಲಿ ಕೇಸರಿಯ ಸತ್ವ ಇದೆ ಎಂದು ಜನರನ್ನು ಮೋಡಿ ಮಾಡುವ ತಂತ್ರ ಬಳಸಿದ್ದಾರೆ. ಇದರ ತಯಾರಿಕರಿಗೆ ಲಾಭ ಸಿಗುವ ತಂತ್ರ ಹೆಣೆದು ಜಾಹೀರಾತು ಸಿದ್ಧಪಡಿಸಲಾಗಿದೆ. ಜನರು ನಿಯಮಿತವಾಗಿ ಪಾನ್ ಮಸಾಲ ಸೇವಿಸುತ್ತಿದ್ದರೆ ಆರೋಗ್ಯಕ್ಕೆ ಹಾನಿ ಕಾರಕವಾಗಲಿದೆ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆ ಬರುವ ಸಾಧ್ಯತೆ ಇದೆʼʼ ಎಂದು ಆರೋಪಿಸಿರುವ ಅವರು ಜಿಲ್ಲಾ ಗ್ರಾಹಕ ವಿವಾದ ಪರಿಹಾರ ವೇದಿಕೆಯ ಮೊರೆ ಹೋಗಿದ್ದಾರೆ.

ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರನ್ನು ವಂಚಿಸಿದ್ದಕ್ಕಾಗಿ ಉತ್ಪನ್ನದ ಪ್ರಚಾರಕ್ಕೆ ಭಾಗಿಯಾದ ಉತ್ಪಾದನಾ ಸಂಸ್ಥೆ ಮತ್ತು ಅದರ ರಾಯಭಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಯೋಗೇಂದ್ರ ಸಿಂಗ್ ಬಡಿಯಾಲ್ ಆಗ್ರಹಿಸಿದ್ದಾರೆ. ಹೀಗಾಗಿ ವೇದಿಕೆಯ ಅಧ್ಯಕ್ಷೆ ಗ್ಯಾರ್ಸಿಲಾಲ್ ಮೀನಾ ಮತ್ತು ಸದಸ್ಯೆ ಹೇಮಲತಾ ಅಗರ್ವಾಲ್, ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಪಾನ್‌ ಮಸಾಲ ತಯಾರಿಕಾ ಕಂಪನಿ ಮತ್ತು ನಟರು 30 ದಿನದಲ್ಲಿ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.

ಇದನ್ನು ಓದಿ: Electronic City Fly Over: ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ರಾತ್ರಿ ವಾಹನ ಸಂಚಾರ ಬಂದ್

ಮೂವರು ಖ್ಯಾತ ನಟರಿಗೆ ಮಾತ್ರವಲ್ಲದೆ ವಿಮಲ್ ಪಾನ್ ಮಸಾಲ ತಯಾರಿಕಾ ಕಂಪನಿ ಜೆಬಿ ಇಂಡಸ್ಟ್ರೀಸ್‌ನ ಅಧ್ಯಕ್ಷ ವಿಮಲ್ ಕುಮಾರ್ ಅಗರ್‌ವಾಲ್ ಅವರಿಗೂ ಇದೇ ತರನಾದ ನೋಟಿಸ್ ಜಾರಿಗೊಳಿಸಿ, ಮಾರ್ಚ್ 19ರಂದು ಬೆಳಗ್ಗೆ 10 ಗಂಟೆಗೆ ಎಲ್ಲರೂ ಪ್ರತಿಕ್ರಿಯೆ ಸಲ್ಲಿಸಲು ಹಾಜರಾಗುವಂತೆ ನಿರ್ದೇಶನ ನೀಡಿದೆ. ಒಂದು ವೇಳೆ ಈ ದಿನಾಂಕದಂದು ತಾವು ವೈಯಕ್ತಿಕವಾಗಿ ಅಥವಾ ನಿಮ್ಮ ಪ್ರತಿನಿಧಿ ಹಾಜರಾಗಲು ವಿಫಲವಾದ ಸಂದರ್ಭ‌ದಲ್ಲಿ ವಿಚಾರಣೆಯ ದಿನಾಂಕದಂದು ದೂರನ್ನು ಪಕ್ಷಾತೀತವಾಗಿ ನಿರ್ಧರಿಸಲಾಗುವುದು ಎಂದು ಆಯೋಗ ನೋಟಿಸ್‌ನಲ್ಲಿ ತಿಳಿಸಿದೆ.