ತಿರುವನಂತಪುರಂ, ಜು.18: ಹೋಟೆಲ್ ಒಂದರ ಲಿಫ್ಟ್ನಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor) ಅವರು ಕೆಲವು ನಿಮಿಷಗಳ ಕಾಲ ಸಿಲುಕಿಕೊಂಡಿದ್ದ ಘಟನೆ ನಡೆದಿದೆ. ನಂತರ ಅವರನ್ನು ರಕ್ಷಿಸಲಾಯಿತು. ಕೇರಳಂನ (Keralam) ತಿರುವನಂತಪುರಂನಲ್ಲಿ ರೋಟರಿ ಕ್ಲಬ್ ಆಫ್ ತ್ರಿವೇಂದ್ರಂ ಪೂರ್ವದ ಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಲು ಕಾಂಗ್ರೆಸ್ ಸಂಸದ ತರೂರ್ ಆಗಮಿಸಿದ್ದ ವೇಳೆ ಖಾಸಗಿ ಹೋಟೆಲ್ನಲ್ಲಿ ಈ ಘಟನೆ ಸಂಭವಿಸಿದೆ.
ಘಟನೆಯ ದೃಶ್ಯಗಳಲ್ಲಿ ತರೂರ್ ಅವರನ್ನು ರಕ್ಷಿಸಿದ ನಂತರ ಅವರು ಲಿಫ್ಟ್ನಿಂದ ಹೊರಬರುವಾಗ ನಗುತ್ತಿರುವುದನ್ನು ತೋರಿಸಲಾಗಿದೆ. ತರೂರ್ ಮತ್ತು ಇತರರನ್ನು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ರಕ್ಷಿಸಿದರು. ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕರು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಭರವಸೆ ನೀಡಿದರು.
“ಲಿಫ್ಟ್ ಮಧ್ಯದಲ್ಲೇ ಸಿಲುಕಿಕೊಂಡಿತು. ಹೊರಬರಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ಆದರೆ ಯಾವುದೂ ಫಲ ನೀಡಲಿಲ್ಲ. ಬಳಿಕ ನಾವು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗೆ ಕರೆ ಮಾಡಿದ್ದೇವೆ. ಅವರು ಬಂದು ನಮ್ಮನ್ನು ಸುರಕ್ಷಿತವಾಗಿ ರಕ್ಷಿಸಿದರು. ಚಿಂತಿಸಬೇಡಿ, ನಾವೆಲ್ಲರೂ ಕ್ಷೇಮವಾಗಿದ್ದೇವೆ” ಎಂದು ತರೂರ್ ಹೇಳಿದ್ದಾರೆ.
ಇಲ್ಲಿದೆ ವಿಡಿಯೊ:
ಹೋಟೆಲ್ನಲ್ಲಿ ತರೂರ್ ಸಿಲುಕಿಕೊಂಡಿರುವ ಬಗ್ಗೆ ರಕ್ಷಣಾ ಸಿಬ್ಬಂದಿಗೆ ಸಂಜೆ 7:37 ಕ್ಕೆ ಕರೆ ಬಂದಿತು. ತಕ್ಷಣ ಒಂದು ತಂಡವನ್ನು ಸ್ಥಳಕ್ಕೆ ರವಾನಿಸಲಾಯಿತು. ಅಗ್ನಿಶಾಮಕ ಸಿಬ್ಬಂದಿ ಹೈಡ್ರಾಲಿಕ್ ಸ್ಪ್ರೆಡರ್ ಬಳಸಿ ಲಿಫ್ಟ್ ಬಾಗಿಲು ತೆರೆದು, ಲಿಫ್ಟ್ ಒಳಗಿದ್ದ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಿದರು ಎಂದು ಅಗ್ನಿಶಾಮಕ ಠಾಣೆಯ ಅಧಿಕಾರಿ ಹೇಳಿದ್ದಾರೆ.
ಲಿಫ್ಟ್ನಿಂದ ಹೊರಬರುತ್ತಾ ತರೂರ್ ಅಗ್ನಿಶಾಮಕ ಅಧಿಕಾರಿಗಳಿಗೆ ಧನ್ಯವಾದ ಹೇಳಿದರು. “ನಿಮ್ಮೆಲ್ಲರಿಗೂ ಧನ್ಯವಾದಗಳು. ನೀವು ಒಳ್ಳೆಯ ಕೆಲಸ ಮಾಡಿದ್ದೀರಿ” ಎಂದು ಅವರು ಹೇಳಿದರು. ಆರಂಭದಲ್ಲಿ ಲಿಫ್ಟ್ ಮೆಕ್ಯಾನಿಕ್ಗಳನ್ನು ಕರೆಯಲಾಗಿತ್ತು. ಆದರೆ ಅವರು ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಆದರೆ ಹೋಟೆಲ್ ಸಿಬ್ಬಂದಿಗೂ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ತರೂರ್ ತಿಳಿಸಿದರು. ಆಗ ಅವರು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳಿಗೆ ಕರೆ ಮಾಡಿದ್ದಾಗಿ ಹೇಳಿದರು.
ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದೆ. ಇಲ್ಲಿನ ಅಧಿಕಾರಿಗಳು ಉತ್ತಮ ಕೆಲಸ ಮಾಡಿದರು. ಅವರು ಐದು ನಿಮಿಷಗಳಲ್ಲಿ ಇಲ್ಲಿಗೆ ತಲುಪಿದರು. ತುಂಬಾ ಧನ್ಯವಾದಗಳು ಎಂದು ಅವರು ಹೇಳಿದರು. ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಯ ತ್ವರಿತ ಪ್ರತಿಕ್ರಿಯೆಗಾಗಿ ಅವರನ್ನು ತರೂರ್ ಸನ್ಮಾನಿಸಿದ್ದಾರೆ ಎನ್ನಲಾಗಿದೆ.