ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sonia Gandhi: ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಹಿರಿಯ ರಾಜಕಾರಣಿ, ಕಾಂಗ್ರೆಸ್‌ ನಾಯಕಿ, ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ (ಫೆ. 20) ಬೆಳಗ್ಗೆ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶುಕ್ರವಾರ ಡಿಸ್‌ಚಾರ್ಚ್‌ ಆಗುವ ಸಾಧ್ಯತೆ ಇದೆ.

ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಸೋನಿಯಾ ಗಾಂಧಿ.

Profile Ramesh B Feb 20, 2025 11:17 PM

ಹೊಸದಿಲ್ಲಿ: ಹಿರಿಯ ರಾಜಕಾರಣಿ, ಕಾಂಗ್ರೆಸ್‌ ನಾಯಕಿ, ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ (Sonia Gandhi) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ʼʼಸೋನಿಯಾ ಗಾಂಧಿ ಅವರನ್ನು ಗುರುವಾರ (ಫೆ. 20) ಬೆಳಗ್ಗೆ ಸರ್ ಗಂಗಾ ರಾಮ್ (Sir Ganga Ram Hospital) ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಭಯಪಡಬೇಕಾದ ಅಗತ್ಯ ಇಲ್ಲʼʼ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅವರು ಶುಕ್ರವಾರ ಬೆಳಗ್ಗೆ ಡಿಸ್‌ಚಾರ್ಚ್‌ ಆಗುವ ಸಾಧ್ಯತೆ ಇದೆ.

"ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದಾಗಿ ಅವರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಾಗ್ಯೂ ಯಾವುದೇ ಆತಂಕವಿಲ್ಲ ಮತ್ತು ನಾಳೆ ಬೆಳಗ್ಗೆ ಅವರನ್ನು ಡಿಸ್‌ಚಾರ್ಜ್‌ ಮಾಡುವ ಎಲ್ಲ ಸಾಧ್ಯತೆಗಳಿವೆʼʼ ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ನಿರ್ವಹಣಾ ಮಂಡಳಿಯ ಅಧ್ಯಕ್ಷ ಡಾ.ಅಜಯ್ ಸ್ವರೂಪ್ ಹೇಳಿದ್ದಾರೆ. ಸೋನಿಯಾ ಗಾಂಧಿ ಗ್ಯಾಸ್ಟ್ರೋಎಂಟರಾಲಜಿ ತಜ್ಞ ಡಾ.ಸಮಿರನ್ ನಂಡಿ ಅವರ ಆರೈಕೆಯಲ್ಲಿದ್ದಾರೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಳೆದ ವರ್ಷ ಡಿಸೆಂಬರ್‌ನಲ್ಲಿ 78ನೇ ವರ್ಷಕ್ಕೆ ಕಾಲಿಟ್ಟಿದ್ದರು. ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ ಅವರು ಇತ್ತೀಚೆಗೆ ರಾಜ್ಯಸಭೆಯ ಅದಿವೇಶನದಲ್ಲಿ ಪಾಲ್ಗೊಂಡಿದ್ದರು. ಫೆ. 10ರಂದು ಸೋನಿಯಾ ಗಾಂಧಿ ಅವರು ಜನಸಂಖ್ಯಾ ಗಣತಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು. ದೇಶದಲ್ಲಿ ಸುಮಾರು 14 ಕೋಟಿ ಜನರು ಆಹಾರ ಭದ್ರತೆಯಿಂದ ವಂಚಿತರಾಗಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದ್ದರು.



ವಿವಾದ ಹುಟ್ಟುಹಾಕಿದ್ದ ಸೋನಿಯಾ ಹೇಳಿಕೆ

ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಿರುದ್ಧ ಸೋನಿಯಾ ಗಾಂಧಿ ನೀಡಿದ್ದ ಹೇಳಿಕೆ ದೇಶಾದ್ಯಂತ ವಿವಾದ ಹುಟ್ಟು ಹಾಕಿತ್ತು. ದ್ರೌಪದಿ ಮುರ್ಮು ಅವರನ್ನು ‘ಪೂವರ್ ಲೇಡಿ’ ಎಂದು ಸೋನಿಯಾ ಗಾಂಧಿ ಕರೆದಿದ್ದರು. ಅವರ ವಿರುದ್ಧ ಬಿಹಾರದ ಮುಜಾಫರ್‌ಪುರದಲ್ಲಿ ಪ್ರಕರಣವೂ ದಾಖಲಾಗಿತ್ತು. ವಕೀಲ ಸುಧೀರ್ ಓಜಾ ಸಿಜಿಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಈ ಸುದ್ದಿಯನ್ನೂ ಓದಿ: Sonia Gandhi: ರಾಷ್ಟ್ರಪತಿಗಳನ್ನು ಟೀಕಿಸುವ ಭರದಲ್ಲಿ ಸೋನಿಯಾ ಗಾಂಧಿ ಎಡವಟ್ಟು

ಸೋನಿಯಾ ಗಾಂಧಿ ಹೇಳಿದ್ದೇನು?

ಜ. 31ರಂದು ಆರಂಭವಾದ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿದ್ದರು. ಭಾಷಣದ ಬಳಿಕ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ʼʼಪೂವರ್‌ ಲೇಡಿ, ಭಾಷಣ ಮುಗಿಸುವ ಹೊತ್ತಿಗೆ ಸುಸ್ತಾಗಿ ಹೋಗಿದ್ದರು. ಅವರಿಗೆ ಮಾತನಾಡಲು ಕಷ್ಟ ಆಗುತ್ತಿತ್ತುʼʼ ಎಂದು ಹೇಳಿದ್ದರು. ಜತೆಗೆ ಭಾಷಣ ಬೋರ್‌ ಆಗಿತ್ತು ಎಂದಿದ್ದರು. ಸೋನಿಯಾ ಜತೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಉಪಸ್ಥಿತರಿದ್ದರು.

ಸೋನಿಯಾ ಗಾಂಧಿ ಅವರ ಹೇಳಿಕೆಗೆ ತೀವ್ರ ವಿರೋದ ವ್ಯಕ್ತವಾಗಿತ್ತು. ಬಿಜೆಪಿ ನಾಯಕರು ಕಾಂಗ್ರೆಸ್‌ ನಾಯಕಿ ವಿರುದ್ಧ ಕಿಡಿ ಕಾರಿದ್ದರು. ಇದು ದುರದೃಷ್ಟಕರ ಮತ್ತು ಅವಮಾನಕರ ಹೇಳಿಕೆ ಎಂದು ರಾಷ್ಟ್ರಪತಿ ಭವನ ಕೂಡ ಹೇಳಿಕೆ ನೀಡಿತ್ತು. ರಾಷ್ಟ್ರಪತಿ ಅವರು ಯಾವುದೇ ಹಂತದಲ್ಲಿ ಸುಸ್ತಾಗಿರಲಿಲ್ಲ. ವಾಸ್ತವವಾಗಿ ಅವರು ಅಲ್ಪಸಂಖ್ಯಾತ ಸಮುದಾಯಗಳು, ಮಹಿಳೆಯರು ಮತ್ತು ರೈತರ ಬಗ್ಗೆ ಮಾತನಾಡುವಾಗ ಎಂದಿಗೂ ಸುಸ್ತಾಗುವುದಿಲ್ಲ ಎಂದು ರಾಷ್ಟ್ರಪತಿ ಭವನ ತಿಳಿಸಿತ್ತು. ಜತೆಗೆ ಕಾಂಗ್ರೆಸ್‌ ನಾಯಕರು ಉನ್ನತ ಹುದ್ದೆಯ ಘನತೆಗೆ ಹಾನಿ ಉಂಟು ಮಾಡುವ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿತ್ತು.